ಬದಲಾಗುತ್ತಿದೆ ಜೆಡಿಎಸ್ ಕಾರ್ಯತಂತ್ರ: ಟಾಪ್ ಗೇರ್ನಲ್ಲಿ ಎಚ್ಡಿಕೆ, ನಿಖಿಲ್ ಕುಮಾರಸ್ವಾಮಿ
ಸಂಘಟನಾತ್ಮಕವಾಗಿ ಈ ರೀತಿಯ ಬೆಳವಣಿಗೆ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ ಆಗಬೇಕಿತ್ತು. ಆದರೂ, ತಡವಾಗಿಯಾದರೂ ನಮ್ಮ ನಾಯಕರು ಎಚ್ಚೆತ್ತುಕೊಂಡಿದ್ದಾರೆ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಮತ್ತು ಮುಖಂಡರ ಮಾತು.
ಯಾವಾಗ, ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಸೇರಲಿದೆ, ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ವದಂತಿಗೆ ರೆಕ್ಕೆಪುಕ್ಕಗಳು ಸೇರಿ, ಜೆಡಿಎಸ್ ಪಕ್ಷದ ಅಸ್ತಿತ್ವಕ್ಕೇ ಪೆಟ್ಟು ಬೀಳಲಾರಂಭವಾದ ನಂತರ ಜೆಡಿಎಸ್ ಮೈಕೊಡವಿ, ಪಕ್ಷ ಸಂಘಟನೆಗೆ ಮುಂದಾಗಿದೆ.
ಅಧಿಕಾರ ಇರಲಿ, ಬಿಡಲಿ ಕುಮಾರಸ್ವಾಮಿ ಮಾನವೀಯತೆಯ ಇನ್ನೊಂದು ಮುಖದ ಅನಾವರಣ
ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ, ಜಿಲ್ಲಾವಾರುವಾಗಿ ಹಲವು ಸುತ್ತಿನ ಮಾತುಕತೆಗಳನ್ನು/ಅಭಿಪ್ರಾಯ/ಸಲಹೆಗಳನ್ನು ಮುಖಂಡರು ಮತ್ತು ಕಾರ್ಯಕರ್ತರಿಂದ ಪಡೆದುಕೊಂಡಿದ್ದಾರೆ. ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದಾರೆ, ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆಗೆ ಅಂತರ ಕಾಯ್ದುಕೊಳ್ಳುವ ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ.
2023ರ ಚುನಾವಣೆ; ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್ಡಿಕೆ!
ಸಿನಿಮಾನೋ ಅಥವಾ ರಾಜಕೀಯನೋ ಎನ್ನುವ ಎರಡು ದೋಣಿಗಳ ನಡುವೆ ಕಾಲಿಡುವ ಕೆಲಸವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಂದುವರಿಸಿದ್ದರೂ, ದೊಡ್ಡ ಮಟ್ಟದಲ್ಲಿ ಯುವಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ.
ತಮ್ಮ ಪ್ರಾಭಲ್ಯದ ಹಳೇ ಮೈಸೂರು ಭಾಗ
ತಮ್ಮ ಪ್ರಾಭಲ್ಯದ ಹಳೇ ಮೈಸೂರು ಭಾಗದಲ್ಲೇ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದನ್ನು (ಮೈಸೂರು, ಬೆಂಗಳೂರು, ತುಮಕೂರು, ಹಾಸನ, ಮಂಡ್ಯ ಜಿಲ್ಲೆ) ಗಂಭೀರವಾಗಿ ತೆಗೆದುಕೊಂಡಿರುವ ಗೌಡ್ರು ಮತ್ತು ಎಚ್ಡಿಕೆ ಆ ಭಾಗದ ಮುಖಂಡರ ಮತ್ತು ಕಾರ್ಯಕರ್ತರ ಸರಣಿ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಕಾರ್ಯಕರ್ತರಿಗೆ ಅದರಲ್ಲೂ ಯುವಕರಿಗೆ ಮಾತನಾಡಲು ಅವಕಾಶ ನೀಡುತ್ತಾ, ಪಕ್ಷ ಸಂಘಟನೆಗೆ ಮುಂದಾಗುತ್ತಿರುವುದು ಒಳ್ಳೆಯ ಹೆಜ್ಜೆ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಹಿರಿಯ ನಾಯಕರ ಅನುಭವದ ಲಾಭ
ಬಸವರಾಜ ಹೊರಟ್ಟಿ, ವೈ.ಎಸ್.ವಿ ದತ್ತ, ಬಂಡೆಪ್ಪ ಕಾಂಶಾಪುರ ಮುಂತಾದ ಹಿರಿಯ ನಾಯಕರ ಅನುಭವದ ಲಾಭವನ್ನು ಪಡೆದುಕೊಂಡು, ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟನೆಗೆ ಜೆಡಿಎಸ್ ಮುಂದಾಗಿದೆ. ಇದಕ್ಕಾಗಿ, ಹಲವು ಸಮಿತಿಗಳನ್ನೂ ರಚಿಸಲಾಗಿದೆ ಜೊತೆಗೆ, ಪಕ್ಷ ತೊರೆದ ನಾಯಕರನ್ನು ಮತ್ತೆ ಕರೆತರುವ ಕೆಲಸಕ್ಕೂ ಗೌಡ್ರು ಮತ್ತು ಕುಮಾರಸ್ವಾಮಿ ಮುಂದಾಗಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಸಂಪೂರ್ಣ ಜವಾಬ್ದಾರಿ
ಇನ್ನೊಂದೆಡೆ, ಯುವ ಸಮುದಾಯದ ಮಹತ್ವವನ್ನು ಅರ್ಥ ಮಾಡಿಕೊಂಡಿರುವ ಜೆಡಿಎಸ್, ಯುವಕರನ್ನು ಪಕ್ಷದತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ. ನಿಖಿಲ್ ಕುಮಾರಸ್ವಾಮಿಗೆ ಸಂಪೂರ್ಣ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ನೀಡಿ, ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿ ತಮ್ಮ ವೋಟ್ ಬ್ಯಾಂಕ್ ಭದ್ರವಾಗಿರಿಸಲು ಯೋಜನೆಯನ್ನು ಜೆಡಿಎಸ್ ಹಾಕಿಕೊಂಡಿದೆ ಎನ್ನುವ ಮಾಹಿತಿಯಿದೆ.
Recommended Video
ಬದಲಾಗುತ್ತಿರುವ ಜೆಡಿಎಸ್ ಕಾರ್ಯತಂತ್ರ
ಕ್ರಿಯಾಶೀಲ ಯುವಕರಿಗೆ ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಮುಂದಾಗಿರುವ ಜೆಡಿಎಸ್, ಸದಸ್ಯತ್ವ ನೊಂದಾಣಿ ಆರಂಭಿಸಲು ಸಿದ್ದತೆಯನ್ನು ನಡೆಸುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ಎದುರಾಗುತ್ತಿದೆ, ಜೊತೆಗೆ, ಯಾವುದೇ ಪಕ್ಷಕ್ಕೆ ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಬೆಂಗಳೂರು ಮುಖ್ಯವಾಗಿರುವುದರಿಂದ, ಇದಕ್ಕಾಗಿ ಜೆಡಿಎಸ್ ವೀಕ್ಷಕರನ್ನು ನೇಮಿಸಿದೆ. ಹಲವು ಬದಲಾವಣೆಗಳೊಂದಿಗೆ ಜೆಡಿಎಸ್ ಇದೇ ರೀತಿ ಕಾರ್ಯತಂತ್ರ ರೂಪಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪರ್ಯಾಯ ಪಕ್ಷವಾಗುವ ಸಾಧ್ಯತೆಯಿಲ್ಲದಿಲ್ಲ.