ನೂತನ ಸಂಪುಟದಲ್ಲಿ ಸಚಿವರಾಗದಿದ್ದರೆ ರಮೇಶ್ ಜಾರಕಿಹೊಳಿ ರಾಜಕೀಯ ನಿವೃತ್ತಿ?
ಬೆಂಗಳೂರು, ಜು. 27: ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಂತ್ರಿ ಪದವಿ ಕಳೆದುಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೂತನ ಮಂತ್ರಿಮಂಡಲದಲ್ಲಿ ಮಂತ್ರಿಯಾಗಲಿದ್ದಾರೆ? ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದಲ್ಲಿ ತನ್ನ ರಾಜಕೀಯ ಭವಿಷ್ಯದ ಬಗ್ಗೆ ರಮೇಶ್ ಜಾರಕಿಹೊಳಿ ತಮ್ಮ ನಿರ್ಧಾರ ಪ್ರಕಟಿಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಯುವತಿಯೊಂದಿಗೆ ಇದ್ದ ಸಿಡಿ ಬೆಳಕಿಗೆ ಬಂದ ಕೂಡಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜಲ ಸಂಪನ್ಮೂಲ ಸಚಿವ ಖಾತೆಗೆ ರಾಜೀನಾಮೆ ನೀಡಿದ್ದರು. ಪ್ರಕರಣ ದಿನಕ್ಕೊಂದು ತಿರುವು ಪಡೆದು ಸುಮಾರು ನಾಲ್ಕು ತಿಂಗಳು ಕಾಲ ಎಳೆದಾಡಿತು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾರಕಿಹೊಳಿ ನಿರಪರಾಧಿ ಎಂದು ಎಸ್ಐಟಿ ಅಧಿಕಾರಿಗಳು ಅಧಿಕೃತವಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ವರೆಗೂ ಸಚಿವ ಸ್ಥಾನ ಸಿಗುವುದು ಅನುಮಾನ. ಎಸ್ಐಟಿ ಈವರಿನ ತನಿಖೆಯಲ್ಲಿ ಜಾರಕಿಹೊಳಿಯನ್ನು ಟ್ರಾಪ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತಾಂತ್ರಿಕವಾಗಿ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ವರೆಗೂ ಅಧಿಕೃತವಾಗಿ ಅದನ್ನು ಒಪ್ಪಲು ಸಾಧ್ಯವಿಲ್ಲ.
ಅಶ್ಲೀಲ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಆರೋಪ ಮುಕ್ತ?
ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಇದೀಗ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಹೊಸ ಮಂತ್ರಿ ಮಂಡಲದಲ್ಲಿ ಹೊಸ ಮುಖಗಳಿಗೆ ಹಾಗೂ ಮೂಲ ಬಿಜೆಪಿ ನಾಯಕರಿಗೆ ಆಯಕಟ್ಟಿನ ಸಚಿವ ಸ್ಥಾನ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ರಮೇಶ್ ಜಾರಕಿಹೊಳಿಯನ್ನು ಮರಳಿ ಮಂತ್ರಿ ಮಾಡುತ್ತಾರಾ ? ಇಲ್ಲವೇ ಪಕ್ಷಕ್ಕೆ ಮುಜುಗರ ಆಗಲಿದೆ ಎಂಬ ಕಾರಣ ನೀಡಿ ಮಂತ್ರ ಸ್ಥಾನ ಕೊಡದೇ ಹೊರಗಿಡುತ್ತಾರಾ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ರಾಜಕೀಯ ನಿವೃತ್ತಿ: ನನಗೆ ಮಂತ್ರಿ ಸ್ಥಾನ ಮರಳಿ ನೀಡುವಂತೆ ಕೆಲವು ದಿನಗಳ ಹಿಂದಷ್ಟೇ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದರು. ಎಲ್ಲದಕ್ಕೂ ಪ್ರಕರಣದಲ್ಲಿ ಅಂತಿಮ ವರದಿ ಬೀಳುವ ವರೆಗೂ ಸಚಿವ ಸ್ಥಾನದ ಬಗ್ಗೆ ಚಕಾರ ಎತ್ತಬಾರದು ಎಂದು ಬಿಜೆಪಿ ವರಷ್ಠರು ಸೂಚಿಸಿದ್ದರು. ಇದೀಗ ಅಂತಿಮ ವರದಿ ಪೂರ್ಣಗೊಂಡಿದ್ದರೂ ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ನೂತನ ಸಿಎಂ ನೇಮಕದ ಸಂಪುಟದಲ್ಲಿ ಅವಕಾಶ ಸಿಗದಿದ್ದರೆ ಮತ್ತೆ ಮಂತ್ರಿ ಪದವಿ ಪಡೆಯಲು ಅಸಾಧ್ಯ. ಹೀಗಾಗಿ ನೂತನ ಮಂತ್ರಿ ಮಂಡದಲ್ಲಿ ಸಿಗುವ ಆದ್ಯತೆ ಬಗ್ಗೆ ನೋಡಿಕೊಂಡು ತಮ್ಮ ರಾಜಕೀಯ ನಡೆಯ ಬಗ್ಗೆ ಪ್ರಕಟಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಅವರ ಆಪ್ತ ಬಳಗದಲ್ಲಿ ಭಾರಿ ಚರ್ಚೆ ನಡೆದಿದೆ.