ಬಿಜೆಪಿಗೆ ಬೆಂಬಲ ನೀಡುತ್ತಾರೆಯೇ ಬಿಎಸ್ಪಿ ಶಾಸಕ ಮಹೇಶ್?
ಬೆಂಗಳೂರು, ಮೇ 25: ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಂದರ್ಭ ಒದಗಿದರೆ ಕೊಳ್ಳೇಗಾಲದ ಬಹುಜನ ಸಮಾಜ ಪಕ್ಷದ ಶಾಸಕ ಎನ್. ಮಹೇಶ್ ಅವರು ಬಿಜೆಪಿಗೆ ಬೆಂಬಲ ನೀಡುತ್ತಾರೆಯೇ? ಹೀಗೊಂದು ಸುದ್ದಿ ಸ್ವತಃ ಎನ್. ಮಹೇಶ್ ಅವರ ಕ್ಷೇತ್ರ ಕೊಳ್ಳೇಗಾಲ ಸೇರಿದಂತೆ ಅನೇಕ ಕಡೆ ಹರಿದಾಡುತ್ತಿದೆ.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಆದಷ್ಟು ಬೇಗನೆ ಬಿಜೆಪಿ ಸರ್ಕಾರ ರಚಿಸಲು ಮುಂದಾಗುತ್ತಿದೆ. ಇದಕ್ಕಾಗಿ ಆಪರೇಷನ್ ಕಮಲವನ್ನು ಭಾರಿ ಪ್ರಮಾಣದಲ್ಲಿ ನಡೆಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ನಲ್ಲಿರುವ ಅತೃಪ್ತ ಶಾಸಕರನ್ನು ಸೆಳೆದುಕೊಳ್ಳುವುದು ಬಿಜೆಪಿಯ ಉದ್ದೇಶವಾಗಿದೆ.
ಮಾಯಾವತಿ ರಾಷ್ಟ್ರ ರಾಜಕಾರಣದಲ್ಲಿ ಕಿಂಗ್ ಮೇಕರ್:ಶಾಸಕ ಎಂ. ಮಹೇಶ್
ಈಗಾಗಲೇ ಉಪ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಶಾಸಕರ ಸಂಖ್ಯಾಬಲವನ್ನು 105ಕ್ಕೆ ಹೆಚ್ಚಿಸಿಕೊಂಡಿದೆ. ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಪಡೆದರೆ 107ಕ್ಕೆ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. ಇದರ ಜತೆಗೆ ಈಗಾಗಲೇ ಮೈತ್ರಿ ಸರ್ಕಾರದಿಂದ ಹೊರ ನಡೆದಿರುವ ಬಿಎಸ್ಪಿಯ ಏಕೈಕ ಶಾಸಕ ಎನ್. ಮಹೇಶ್ ಅವರ ಬೆಂಬಲವನ್ನೂ ಪಡೆದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲವನ್ನು ಕುಗ್ಗಿಸಿ ಸರ್ಕಾರ ರಚಿಸುವುದು ಸಾಧ್ಯ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಹೀಗಾಗಿ ಎನ್. ಮಹೇಶ್ ಅವರನ್ನು ಸೆಳೆದುಕೊಳ್ಳಲು ಸತತ ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ಸಚಿವ ಸ್ಥಾನದ ಆಫರ್?
ಸಮ್ಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನ ಪಡೆದುಕೊಂಡಿದ್ದ ಎನ್. ಮಹೇಶ್, ಪಕ್ಷದ ನಾಯಕಿ ಮಾಯಾವತಿ ಅವರ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಕ್ಕೆ ಬಂದಿದ್ದರು. ಈಗ ಎನ್. ಮಹೇಶ್ ಅವರಿಗೆ ಸಚಿವ ಸ್ಥಾನದ ಆಫರ್ ನೀಡಿರುವ ಬಿಜೆಪಿ, ತನಗೆ ಬೆಂಬಲ ನೀಡುವಂತೆ ಅವರ ಮನವೊಲಿಕೆ ಮಾಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ
ಒಂದು ಸುತ್ತಿನ ಮಾತುಕತೆ?
ಎನ್. ಮಹೇಶ್ ಅವರ ಬೆಂಬಲ ಪಡೆಯುವ ಸಲುವಾಗಿ ರಾಜ್ಯ ಬಿಜೆಪಿ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಅವರೊಂದಿಗೆ ನಡೆಸಿದೆ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚಿಸುವಷ್ಟು ಸಂಖ್ಯೆ ಸಿಗುವುದು ಖಚಿತವಾದರೆ ಮಹೇಶ್ ಅವರನ್ನು ಕೂಡ ಸೆಳೆದುಕೊಳ್ಳಲುಮತ್ತೆ ಮಾತುಕತೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಏಕಪಕ್ಷೀಯ ಫಲಿತಾಂಶ: ಬಿರುಸುಗೊಂಡ ರಾಜಕೀಯ
ಮಹೇಶ್ ಹೇಳಿದ್ದೇನು?
ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ತಮ್ಮ ಜೊತೆ ಯಾವುದೇ ಮಾತುಕತೆ ನಡೆದಿಲ್ಲ. ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ತಮ್ಮ ಕುರಿತು ಇರುವ ವದಂತಿಗಳಿಗೆ ಎನ್. ಮಹೇಶ್ ಸ್ಪಷ್ಟೀಕರಣ ನೀಡಿದ್ದಾರೆ. ವದಂತಿ ಹಬ್ಬಿಸಲು ಏನಿರಬೇಕು? ಇದೆಲ್ಲ ಆಧಾರರಹಿತ ಸುದ್ದಿಗಳು. ತಾವು ಬಿಜೆಪಿ ಸರ್ಕಾರ ರಚಿಸಿದರೆ ಅದರ ಭಾಗವಾಗುವುದಿಲ್ಲ ಎಂದು ಅವರು ಟಿವಿ ವಾಹಿನಿಯೊ೦ದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಹೆನ್ಜಿ ಹೇಳಿದಂತೆ ಮಾಡುತ್ತೇನೆ
ಆದರೆ, ಎನ್. ಮಹೇಶ್ ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಬಿಎಸ್ಪಿ ನಾಯಕಿ ಮಾಯಾವತಿ ಅವರ ನಿರ್ದೇಶನದಂತೆ ಅವರು ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದ್ದರು. ಈಗ ಅವರು ಸೂಚಿಸಿದರೆ ಬಿಜೆಪಿಗೆ ಬೆಂಬಲ ನೀಡುವುದು ಅನಿವಾರ್ಯವಾಗುತ್ತದೆ. ಬಿಜೆಪಿಗೆ ಬೆಂಬಲ ನೀಡಬೇಕೋ ಅಥವಾ ಬಿಡಬೇಕೋ ಎಂಬುದನ್ನು ಬೆಹೆನ್ಜಿ ಹೇಳಬೇಕು. ಹೈಕಮಾಂಡ್ ಹೇಳಿದ್ದನ್ನು ನಾನು ಕೇಳುತ್ತೇನೆ. ಇದು ನನ್ನ ಕೈಯಲ್ಲಿ ಇಲ್ಲ ಎಂದು ಮಹೇಶ್ ಹೇಳಿದ್ದಾರೆ.