ತೃತೀಯ ರಂಗಕ್ಕೆ ಬಲ ತುಂಬಿದ ಕರ್ನಾಟಕದಲ್ಲಿ ಬಿಜೆಪಿ ಸೋಲು
ಕರ್ನಾಟಕ ರಾಜಕೀಯದಲ್ಲಿ ಬಿಜೆಪಿಗೆ ಸ್ಪಷ್ಟ ಹಿನ್ನಡೆ ಆಗಿದೆ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಕೂಡ ಬಿಜೆಪಿ ಅಧಿಕಾರದಿಂದ ದೂರವೇ ಉಳಿಯಲಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಸರ್ಕಾರ ರಚಿಸಲಿದೆ.
ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಅವರೇ ಹೇಳಿದ್ದಂತೆ ಕರ್ನಾಟಕದ ಚುನಾವಣೆ ಬಿಜೆಪಿಗೆ ಅತ್ಯಂತ ಮಹತ್ವವಾದುದು, ದಕ್ಷಿಣ ಭಾರತಕ್ಕೆ ಕರ್ನಾಟಕದ ಮೂಲಕ ಬಿಜೆಪಿ ಬಾಗಿಲು ತೆರೆಯಲಿದೆ ಎಂದಿದ್ದರು ಅವರು, ಆದರೆ ಅವರು ಎಣಿಸಿದಂತೆ ಆಗಲಿಲ್ಲ, ಇಲ್ಲಿ ಪ್ರಾದೇಶಿಕ ಪಕ್ಷವೊಂದು ಅಧಿಕಾರ ಹಿಡಿಯಲಿದೆ.
ಆಂಧ್ರ, ತೆಲಂಗಾಣ, ಜೆಡಿಎಸ್ ಶಾಸಕರನ್ನು ನಮಗೆ ಒಪ್ಪಿಸಿ, ಚಿಂತೆ ಬಿಡಿ: ಕೆಸಿಆರ್, ನಾಯ್ಡು
ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲು ಹೊರಟಿರುವುದು ಪ್ರಾದೇಶಿಕ ಪಕ್ಷಗಳಲ್ಲಿ ಉತ್ಸಾಹ ಮೂಡಿಸಿರುವುದು ಸುಳ್ಳಲ್ಲ, ಇದಕ್ಕೆ ಪೂರಕವೆಂಬಂತೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಸ್ವಾಗತಿಸಿದ್ದು, ಬಿಜೆಪಿ ಅಧಿಕಾರಕ್ಕೆ ಧಕ್ಕದಾದ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರ ಹಿಡಿಯುತ್ತಿರುವುದು ತೃತೀಯ ರಂಗಕ್ಕೆ ಬಲ ತುಂಬಲಿದಿಯೇ ಎಂಬ ಚರ್ಚೆಯೊಂದು ಪ್ರಾರಂಭವಾಗುತ್ತಿರುವ ಹೊತ್ತು ಇದು. ಹೌದು ಎನ್ನುತ್ತದೆ ಪರಿಸ್ಥಿತಿಗಳು.
ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ಶಕ್ತಿಶಾಲಿ ತೃತೀಯ ರಂಗ ಕಟ್ಟುವ ಪ್ರಯತ್ನ ಪ್ರಾರಂಭವಾಗಿದ್ದು. ಕರ್ನಾಟಕದಲ್ಲಿ ಜೆಡಿಎಸ್ಗೆ ಸಿಕ್ಕಿರುವ ಮುನ್ನಡೆ ತೃತೀಯ ರಂಗಕ್ಕೆ ಬಲ ತುಂಬುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವೆಂಬಂತೆ ಕುಮಾರಸ್ವಾಮಿ ಅವರು ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಲ್ಲಾ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಮಾಯಾವತಿ, ಕೆಸಿಆರ್, ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಪ್ರಾದೇಶಿಕ ಮುಖಂಡರನ್ನು ಆಹ್ವಾನಿಸಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಈ ಸಂದರ್ಭದಲ್ಲಿ ತೃತೀಯ ರಂಗ ಬಲಗೊಂಡಲ್ಲಿ ಅದು ಬಿಜೆಪಿಗೆ ಹೊಡೆತವೇ, ತೃತೀಯ ರಂಗಕ್ಕೆ ಬಲ ಬಂದರೆ ಕಾಂಗ್ರೆಸ್ನ ಅಧಿಕಾರದ ಆಸೆ ಚಿಗುರುತ್ತದೆ ಎಂಬುದು ಹಳೆಯ ಗಾದೆ. ಬಹಳ ವಿಧಾನಸಭೆ ಚುನಾವಣೆಗಳ ನಂತರ ಮೊದಲ ಬಾರಿಗೆ ಬಿಜೆಪಿ ಅಧಿಕಾರದಿಂದ ವಂಚಿತವಾಗಿದೆ, ಇದು ಬಿಜೆಪಿಯ ಕುಸಿತದ ಆರಂಭವೇ ಅಥವಾ ಕಾಂಗ್ರೆಸ್ನ ಕುಸಿತವಾ ಕಾದು ನೋಡಬೇಕಿದೆಯಷ್ಟೆ.