ಇರುವುದೋ ಬಿಡುವುದೋ : ಗೊಂದಲದಲ್ಲಿ ರೇವಣಸಿದ್ದಯ್ಯ
ಮೈಸೂರು, ಏಪ್ರಿಲ್ 9 : ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣಸಿದ್ದಯ್ಯರನ್ನು ಭೇಟಿ ಮಾಡಿದ ಬೆನ್ನಲ್ಲೇ, ಇತ್ತ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!
ಈ ಹಿಂದೆ ತಾವೇ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣಸಿದ್ದಯ್ಯರನ್ನು ವರುಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ.ಯತೀಂದ್ರ ಸಿದ್ದರಾಮಯ್ಯ, ನಂಜನಗೂಡು - ಮೈಸೂರು ರಸ್ತೆಯಲ್ಲಿರುವ ರೇವಣಸಿದ್ದಯ್ಯ ತೋಟದ ಮನೆಗೆ ಭೇಟಿ ನೀಡಿ ಗೌಪ್ಯ ಮಾತುಕತೆ ನಡೆಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇನ್ನು ಯತೀಂದ್ರ ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಬೇಸರವಾಗಿದೆ, ಇದನ್ನ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾಂಗ್ರೆಸ್ ನಲ್ಲಿ ಇರಬೇಕೋ? ಬಿಜೆಪಿ ಸೇರಬೇಕೋ? ಎಂಬ ದ್ವಂದ್ವದಲ್ಲಿ ನಾನಿರುವುದು ಸತ್ಯ. ಸಿಎಂಗಾಗಿ ನನ್ನ ಇಡೀ ಸಮುದಾಯವನ್ನ ಎದುರು ಹಾಕಿಕೊಂಡು ಸಿಎಂ ಪರ ಪ್ರಚಾರ ಮಾಡಿದ್ದೇನೆ. ತದನಂತರ ದಿನದಲ್ಲಿ ನಮಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಇದು ನನಗೆ ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಿಎಂ ಜೊತೆ ಮಾತನಾಡುತ್ತೇನೆ. ನನಗಾಗಿರುವ ನೋವುಗಳನ್ನು ಅವರ ಮುಂದೆ ಹೇಳುತ್ತೇನೆ. ತದನಂತರದಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ ರೇವಣ್ಣಸಿದ್ದಯ್ಯ, ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಾಯ್ತು ಎಂದು ನನ್ನ ಬೆಂಬಲಿಗರು ಸದಾ ಹೇಳುತ್ತಾರೆ. ಭಾವನಾತ್ಮಕವಾದ ನೋವುಗಳು ನನಗೆ ಆಗಿರುವುದು ಸತ್ಯ ಎಂದರು.
ಈ ನಡುವೆ, ರೇವಣಸಿದ್ದಯ್ಯ ಅವರನ್ನು ಸಳೆಯಲು ಜಾತ್ಯತೀತ ಜನತಾದಳ ಕೂಡ ಭಾರೀ ಕಸರತ್ತು ನಡೆಸುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ರೇವಣಸಿದ್ದಯ್ಯ ಎಂಬ ಅಸ್ತ್ರವನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಳ್ಳಲು ಯತ್ನ ನಡೆಸಿದೆ. ಜಿಟಿ ದೇವೇಗೌಡ ಅವರು ಗೆಲ್ಲಬೇಕಿದ್ದರೆ, ಲಿಂಗಾಯತ ಮತಗಳನ್ನು ಸೆಳೆಯಬೇಕಿದ್ದರೆ ರೇವಣಸಿದ್ದಯ್ಯ ಅವರಂಥ ನಾಯಕರ ಅವಶ್ಯಕತೆ ಇದ್ದೇಇದೆ ಎಂಬ ಸಂಗತಿಯೂ ಜೆಡಿಎಸ್ ಗೆ ಮನವರಿಕೆಯಾಗಿದೆ.