ಸರ್ಕಾರ ಉರುಳಿದರೂ ಅತೃಪ್ತರಿಗೆ ತಪ್ಪಿಲ್ಲ ಅನರ್ಹತೆ ಭೀತಿ
ಬೆಂಗಳೂರು, ಜುಲೈ 24: ಅತೃಪ್ತ ಶಾಸಕರು ಬಯಸಿದಂತೆಯೇ ಮೈತ್ರಿ ಸರ್ಕಾರ ಉರುಳಿದೆ. ಆದರೆ ಅವರ ಮೇಲಿನ ಅನರ್ಹತೆಯ ತೂಗುಕತ್ತಿ ಇನ್ನೂ ಪಕ್ಕಕ್ಕೆ ಸರಿದಿಲ್ಲ.
ಪಕ್ಷಕ್ಕೆ ಕೈಕೊಟ್ಟು ಮುಂಬೈನಲ್ಲಿ ಕುಳಿತಿರುವ ಎಲ್ಲ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷ ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದೆ. ವಿಶ್ವಾಸಯಾಚನೆ ಕಲಾಪ ನಡೆಯುವ ಸಂದರ್ಭದಲ್ಲೂ ಮತ್ತೊಂದು ದೂರನ್ನು ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ನೀಡಿದ್ದಾರೆ.
ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ
ಈಗ ಮೈತ್ರಿ ಸರ್ಕಾರವೇನೋ ಉರುಳಿದೆ ಆದರೆ ಅತೃಪ್ತ ಶಾಸಕರು ಅನರ್ಹತೆ ಭೀತಿಯಿಂದ ಇನ್ನೂ ಹೊರಬಂದಿಲ್ಲ. ಬಿಜೆಪಿಯಿಂದ ಈ ಅತೃಪ್ತ ಶಾಸಕರಿಗೆ ಅಭಯವೇನೋ ಸಿಕ್ಕಿದೆ ಆದರೆ ಅವರಿಗೆ ಆತಂಕ ಇನ್ನೂ ಕಡಿಮೆಯಾಗಿಲ್ಲ.
ಸ್ಪೀಕರ್ ರಮೇಶ್ ಕುಮಾರ್ ಅವರು ಇನ್ನೂ ಕನಿಷ್ಟ ಒಂದು ವಾರದವರೆಗೂ ಸ್ಪೀಕರ್ ಆಗಿಯೇ ಮುಂದುವರೆಯಲಿದ್ದಾರೆ. ಆ ಒಳಗಾಗಿ ಅವರು ಶಾಸಕರನ್ನು ಅನರ್ಹ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಅಥವಾ ರಾಜೀನಾಮೆ ಅಂಗೀಕಾರ ಮಾಡುವ ಅವಕಾಶವೂ ಇದೆ.
ಸ್ಪೀಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅತೃಪ್ತರು
ಆದರೆ ಜೆಡಿಎಸ್-ಕಾಂಗ್ರೆಸ್ ಶಾಸಕಾಂಗ ಅಧ್ಯಕ್ಷರು ಸ್ಪೀಕರ್ ಅವರ ಮೇಲೆ ಒತ್ತಡ ಹೇರಿದ್ದು, ಸ್ವತಃ ಸ್ಪೀಕರ್ ಅವರೂ ಸಹ ಅತೃಪ್ತರು ತಮ್ಮ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಘಟನೆ ಹಾಗೂ ಮಾಧ್ಯಮಗಳಿಗೆ ತಮ್ಮ ವಿರುದ್ಧ ನೀಡಿದ ಹೇಳಿಕೆಗಳಿಂದ ಬೇಸರಗೊಂಡಿದ್ದಾರೆ. ಈ ಕಾರಣಗಳಿಂದಾಗಿ ಅನರ್ಹತೆ ವಿಚಾರವನ್ನು ಕೂಡಲೇ ಇತ್ಯರ್ಥ ಮಾಡುವ ಸಾಧ್ಯತೆ ಇಲ್ಲದಿಲ್ಲ.
ಕಾಂಗ್ರೆಸ್ನ ಮೂರು ಶಾಸಕರ ಅನರ್ಹತೆ ಖಾಯಂ?
ಕಾಂಗ್ರೆಸ್ ಪಕ್ಷವಂತೂ ಅತೃಪ್ತ ಶಾಸಕರಲ್ಲಿ ಕನಿಷ್ಟ ಮೂವರನ್ನಾದರೂ ಅನರ್ಹ ಮಾಡಿಯೇ ತೀರುವ ನಿರ್ಣಯಕ್ಕೆ ಬಂದಿದ್ದು, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಎಂ.ಟಿ.ಬಿ.ನಾಗರಾಜು ಅವರ ಅನರ್ಹತೆಗೆ ಒತ್ತಡ ಹೇರಿದೆ ಎನ್ನಲಾಗುತ್ತಿದೆ. ಇನ್ನುಳಿದ ಶಾಸಕರುಗಳ ಮೇಲೂ ಕಾಂಗ್ರೆಸ್ ಪಕ್ಷ ದೂರು ನೀಡಿದೆಯಾದರೂ ಈ ಕೆಲವು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅವರ ವಿರುದ್ಧ ರಾಜೀನಾಮೆ ನೀಡುವ ಮೊದಲೇ ದೂರು ನೀಡಿದ್ದರು.
ಬಿಎಸ್ವೈ ಬಹುಮತ ಸಾಬೀತಾಗುವವರೆಗೂ ಅತೃಪ್ತರು ಬರೊಲ್ಲ?
ಅನರ್ಹತೆ ಅಥವಾ ರಾಜೀನಾಮೆ ಅಂಗೀಕಾರ?
ಅನರ್ಹತೆ ಅಥವಾ ರಾಜೀನಾಮೆ ಅಂಗೀಕಾರ ಎರಡೂ ಸಹ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ರಾಜೀನಾಮೆ ಪರ್ವ ಆರಂಭವಾದಾಗಿನಿಂದಲೂ ನಿಯಮದಂತೆ ನಡೆದುಕೊಂಡು ಘನತೆ ಪಡೆದುಕೊಂಡಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ವಿಷಯದಲ್ಲೂ ಸಹ ನಿಯಮ ಮೀರಿ ಹೋಗದೆ ತಕ್ಕ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಬಹುದಾಗಿದೆ.
ಬಿಜೆಪಿ ಅಧಿಕಾರವಹಿಸಿಕೊಂಡ ಮೇಲೆ ಸ್ಪೀಕರ್ ಬದಲಾವಣೆ
ಮತ್ತೊಂದು ಸಾಧ್ಯತೆಯೆಂದರೆ ಸರ್ಕಾರ ಹೇಗೋ ಬದಲಾಗುವುದು ಖಚಿತವಾಗಿದ್ದು, ಬಿಜೆಪಿ ಸರ್ಕಾರ ರಚನೆ ಆದ ನಂತರ ಸ್ಪೀಕರ್ ಅವರನ್ನು ಬದಲು ಮಾಡಿ ಬಿಜೆಪಿಯವರನ್ನೇ ಒಬ್ಬರನ್ನು ಸ್ಪೀಕರ್ ಅನ್ನಾಗಿ ಮಾಡಿ, ರಾಜೀನಾಮೆ ನೀಡಿರುವ ಎಲ್ಲ ಶಾಸಕರನ್ನೂ ಅನರ್ಹತೆ ತೂಗುಕತ್ತಿಯಿಂದ ತಪ್ಪಿಸುವ ಸಾಧ್ಯತೆಯೂ ಇದೆ. ಬಿಜೆಪಿ ಸಹ ಇದಕ್ಕೇ ಹವಣಿಸುತ್ತಿದೆ.