ಚಿತ್ರದುರ್ಗ ರಾಜಕಾರಣ : ಎಚ್.ಆಂಜನೇಯ ಕ್ಷೇತ್ರ ಬದಲಾವಣೆ?
ಬೆಂಗಳೂರು, ಜನವರಿ 05 : '2018ರ ವಿಧಾನಸಭೆ ಚುನಾವಣೆಯಲ್ಲಿ ನೆಲಮಂಗಲ, ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ ಬಂದಿದೆ. ಆದರೆ, ಕ್ಷೇತ್ರ ಬದಲಾವಣೆ ಮಾಡುವುದಿಲ್ಲ' ಎಂದು ಸಚಿವ ಎಚ್.ಆಂಜನೇಯ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ನನ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ' ಎಂದರು.
ಚಿತ್ರದುರ್ಗದಿಂದ ವಿಧಾನಸಭೆ ಚುನಾವಣೆಗೆ ಶಶಿಕುಮಾರ್ ಸ್ಪರ್ಧೆ
'ನಾನು ಚಿತ್ರದುರ್ಗ ಜಿಲ್ಲೆಯವನು. 40 ವರ್ಷ ಅದೇ ಜಿಲ್ಲೆಯಲ್ಲಿ ಹೋರಾಟ ಮಾಡಿ ಬಂದವನು. ನನ್ನದೇನಿದ್ದರೂ ಚಿತ್ರದುರ್ಗವೇ. ನೆಲಮಂಗಲದಲ್ಲಿ ಸ್ಪರ್ಧಿಸುವ ಮಾತೇ ಇಲ್ಲ' ಎಂದು ಹೇಳಿದರು.
ಎಚ್.ಆಂಜನೇಯ ತವರು ಕ್ಷೇತ್ರದಲ್ಲಿ ಅಮಿತ್ ಶಾ ಭಾಷಣ!
ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಎಚ್.ಆಂಜನೇಯ ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು. 2013ರ ಚುನಾವಣೆಯಲ್ಲಿ 76,856 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಹೊಳಲ್ಕೆರೆ ಕ್ಷೇತ್ರದಲ್ಲಿ ಜನವರಿ 10ರಂದು ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಎರಡು ಕ್ಷೇತ್ರದಿಂದ ಒತ್ತಾಯ
'ನೆಲಮಂಗಲ ಮತ್ತು ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೇಡಿಕೆ ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ' ಎಂದರು.
ಆಂಜನೇಯ ಅವರಿಗೆ ಸೋಲು
2008ರ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ಎಚ್.ಆಂಜನೇಯ ಅವರು ಸೋತಿದ್ದರು. ಬಿಜೆಪಿಯ ಎಂ.ಚಂದ್ರಪ್ಪ ಅವರು 54,209 ಮತಗಳನ್ನು ಪಡೆದು ಜಯಗಳಿಸಿದ್ದರು. 38,841 ಮತಗಳನ್ನು ಪಡೆದು ಆಂಜನೇಯ ಸೋತಿದ್ದರು.
ಸ್ವಾಮೀಜಿ ಸ್ಪರ್ಧೆ ಬಗ್ಗೆ ಸುದ್ದಿ ಹಬ್ಬಿತ್ತು
ಮಾದಾರ ಚನ್ನಯ್ಯ ಸ್ವಾಮೀಜಿ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ. ಹೊಳಲ್ಕೆರೆ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಆಂಜನೇಯ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, 'ರಾಜಕೀಯ ಪ್ರವೇಶದ ಚಿಂತನೆ ನಮ್ಮ ಮುಂದೆ ಇಲ್ಲ' ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದರು.
ಅಮಿತ್ ಶಾ ಆಗಮನ
ಜನವರಿ 10ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ್ ಅಮಿತ್ ಶಾ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಹೊಳಲ್ಕೆರೆಯಲ್ಲಿ ಪರಿವರ್ತನಾ ಯಾತ್ರೆಯ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಸಚಿವರ ತವರು ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.
ಜಿಲ್ಲೆಯ ರಾಜಕೀಯ ಚಿತ್ರಣ
ಚಿತ್ರದುರ್ಗ ಜಿಲ್ಲೆ 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆಯಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.