ಯಾರಿಗೂ ಬೇಡವಾಯಿತೇ? ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ!
ಬೆಂಗಳೂರು, ಜೂನ್ 07 : ಕರ್ನಾಟಕದ ಮೈತ್ರಿ ಸರ್ಕಾರ ಒಂದು ವರ್ಷ ಪೂರೈಸಿದೆ. ಸರ್ಕಾರ ಸುಗಮವಾಗಿ ನಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು. ಆದರೆ, ಈಗ ಸಮಿತಿ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಕ್ಕೆ ಬೇಡವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮನ್ವಯ ಸಮಿತಿ ರಚನೆಯಾಗಿತ್ತು. ಈಗ ಸಮನ್ವಯ ಸಮಿತಿಯ ವಿಚಾರವೇ ಎರಡು ಪಕ್ಷಗಳ ನಡುವಿನ ಅಸಮಾಧಾನಕ್ಕೆ ಕಾರಣವಾಗಿದೆ.
ತೀರ್ಮಾನ ಮರು ಪರಿಶೀಲಿಸಲು ಎಚ್.ವಿಶ್ವನಾಥ್ಗೆ ದೇವೇಗೌಡರ ಸಲಹೆ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ರಾಜೀನಾಮೆ ನೀಡುವಾಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾದ ನನ್ನನ್ನು ಸೇರಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಸಮಿತಿಯಲ್ಲಿದ್ದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಷ್ ಅಲಿ ಅವರು ಸಹ ಈಗ ಸಮಿತಿಯಲ್ಲಿಲ್ಲ.
ವಿಶ್ವನಾಥ್ ರಾಜೀನಾಮೆ: ಜೆಡಿಎಸ್ ನ ಮುಂದಿನ ರಾಜ್ಯಾಧ್ಯಕ್ಷ ಯಾರಾಗಬಹುದು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಚನೆ ಮಾಡಿದ್ದ ಸಮಿತಿ ನಾಲ್ಕು ಸಭೆಗಳನ್ನು ಮಾಡಿದ್ದು ಬಿಟ್ಟರೆ ಮತ್ತೆ ಸಭೆ ಸೇರಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಹ ಇನ್ನೂ ಸಮಿತಿಗೆ ಸೇರಿಸಿಲ್ಲ.....
ಸಮಿತಿ ರಚನೆಯಾಗಿದ್ದು ಏಕೆ?
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಡುವೆ ಸಮನ್ವಯತೆ ಸಾಧಿಸುವುದು ಸಮಿತಿಯ ಕೆಲಸವಾಗಿತ್ತು. ಆದರೆ, ಈಗ ಸಮಿತಿ ಎರಡೂ ಪಕ್ಷಗಳಿಗೆ ಬೇಡವಾಗಿದೆ.
ಸಮಿತಿಯ ಸದಸ್ಯರು
ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್ನಿಂದ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಇದ್ದಾರೆ. ಜೆಡಿಎಸ್ನಿಂದ ಡ್ಯಾನಿಷ್ ಅಲಿ, ಎಚ್.ಡಿ.ಕುಮಾರಸ್ವಾಮಿ ಇದ್ದರು. ಆದರೆ, ಈಗ ಡ್ಯಾನಿಷ್ ಅಲಿ ಅವರು ಜೆಡಿಎಸ್ ತೊರೆದು ಸಮಾಜವಾದಿ ಪಕ್ಷ ಸೇರಿದ್ದು, ಸಮನ್ವಯ ಸಮಿತಿಯಲ್ಲಿಲ್ಲ.
ರಾಜ್ಯಾಧ್ಯಕ್ಷರನ್ನು ಸೇರಿಸಿಲ್ಲ
ಡಾ.ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾರಣ ಅವರನ್ನು ಸಮಿತಿಗೆ ಸೇರಿಸಲಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕವಾದ ಬಳಿಕ ಅವರನ್ನು ಸಹ ಸಮಿತಿಗೆ ಸೇರಿಸಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕಗೊಂಡರೂ ಅವರನ್ನು ಸಮಿತಿಗೆ ಸೇರಿಸಿಲ್ಲ.
ಎಚ್.ಡಿ.ಕುಮಾರಸ್ವಾಮಿ ಮಾತ್ರ ಇದ್ದಾರೆ
2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಗೆದ್ದ ಡ್ಯಾನಿಷ್ ಅಲಿ ಅವರು ಈಗ ಜೆಡಿಎಸ್ ಪಕ್ಷದಲ್ಲಿಲ್ಲ. ಆದ್ದರಿಂದ, ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತ್ರ ಇದ್ದಾರೆ.
ಪ್ರಮುಖ ವಿಚಾರಗಳ ಚರ್ಚೆ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಸಮನ್ವಯ ಸಮಿತಿ ಸಭೆ ಸೇರಬೇಕಿತ್ತು. ಇದುವರೆಗೂ ನಾಲ್ಕು ಸಭೆಗಳು ಮಾತ್ರ ನಡೆದಿವೆ. ಈಗ ಎರಡೂ ಪಕ್ಷಗಳು ಸಮಿತಿಯನ್ನು ಕಡೆಗಣಿಸಿವೆ.