ಮೋದಿ 'ಕಾಂಗ್ರೆಸ್ ಮುಕ್ತ ಭಾರತ' ಕನಸು ಸಾಕಾರಗೊಳಿಸುತ್ತೇವೆ: ಬಿಎಸ್ವೈ ವಾಗ್ದಾನ
ಬೆಂಗಳೂರು, ಫೆಬ್ರವರಿ 4: ಪ್ರಧಾನಿ ನರೇಂದ್ರ ಮೋದಿಯವರ 'ಕಾಂಗ್ರೆಸ್ ಮುಕ್ತ ಭಾರತ' ಕನಸನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಈ ವಾಗ್ದಾನ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ಗಮನದ ಬಾಗಿಲಲ್ಲಿ ನಿಂತಿದೆ
ಹಿಂದಿಯಲ್ಲೇ ಮಾತನಾಡಿದ ಯಡಿಯೂರಪ್ಪ, "ನಿಮ್ಮ ಕನಸಿನ 'ಕಾಂಗ್ರೆಸ್ ಮುಕ್ತ ಭಾರತ'ವನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುತ್ತೇವೆ. ಈ ವಾಗ್ದಾನವನ್ನು ನಾನು ನಿಮಗೆ ನೀಡಲು ಇಚ್ಛಿಸುತ್ತೇನೆ," ಎಂದು ಮೋದಿಯವರಿಗೆ ಭರವಸೆ ನೀಡಿದರು.
ನೀರಾವರಿ 1 ಲಕ್ಷ ಕೋಟಿ
"ನಾನು ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ನೀರಿಗಾಗಿ ಜನ ಹಾಹಾಕಾರ ಪಡುತ್ತಿರುವುದನ್ನು ನೋಡಿದೆ. ಯುವಕರು, ಮಹಿಳೆಯರ ಜ್ವಲಂತ ಸಮಸ್ಯೆಯ ಅನುಭವಗಳನ್ನು ಪಡೆದಿದ್ದೇನೆ. ಈ ಸಂದರ್ಭದಲ್ಲಿ ನಾನು ಕರ್ನಾಟಕದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರಕಾರದಲ್ಲಿ 1 ಲಕ್ಷ ಕೋಟಿ ಮೀಸಲಿಡುತ್ತದೆ ಎಂಬ ಭರವಸೆ ನೀಡುವುದಾಗಿ," ಯಡಿಯೂರಪ್ಪ ಹೇಳಿದರು.
ಮೋದಿಯನ್ನು ಭರ್ಜರಿ ಟ್ರೋಲ್ ಮಾಡುತ್ತಿರುವ ಕಾಂಗ್ರೆಸ್!
ಚುನಾವಣೆ ವೇಳೆ ಒಗ್ಗಟ್ಟಾಗಿರಿ
"ರಾಜ್ಯ ಪ್ರವಾಸದ ವೇಳೆ ಪ್ರಧಾನಿ ಮೂರು ವರ್ಷ, ನಮ್ಮ ಸರಕಾರದ 5 ವರ್ಷ ಹಾಗೂ ರಾಜ್ಯ ಸರಕಾರದ ವೈಫಲ್ಯದಿಂದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೆಬೇಕು. ರೈತರು ನೆಮ್ಮದಿಯಿಂದ ಬದುಕಬೇಕು ಎಂಬ ಅಭಿಪ್ರಾಯ ಇರುವುದನ್ನು ಮನಗಂಡಿದ್ದೇನೆ. ಈ ನಿಟ್ಟಿನಲ್ಲಿ ನಾಳೆ ಬರಲಿರುವ ವಿಧಾನಸಭೆ ಚುನಾವಣೆಯನ್ನು ನೀವೆಲ್ಲಾ ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಕೇಳಿಕೊಳ್ಳುತ್ತೇನೆ," ಎಂದು ನೆರೆದಿದ್ದ ಲಕ್ಷಾಂತರ ಜನರ ಬಳಿ ಅವರು ಮನವಿ ಮಾಡಿಕೊಂಡರು.
ಚಿತ್ರಗಳು : ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೋದಿ
ಭ್ರಷ್ಟಾಚಾರಿ ಸಿದ್ದರಾಮಯ್ಯ
"ಭ್ರಷ್ಟಾಚಾರಿ ಸಿದ್ದರಾಮಯ್ಯ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡರು. ಇಲ್ಲದಿದ್ದಲ್ಲಿ ಇವತ್ತು ಸಂಪುಟದ ಹಲವರು ಜೈಲಿನಲ್ಲಿ ಇರಬೇಕಾಗಿತ್ತು. ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರಕಾರದಲ್ಲಿ 6521 ಕೊಲೆ, 3500 ಕ್ಕೂ ಹೆಚ್ಚು ಅತ್ಯಾಚಾರ, 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಸಾಮಾಜ ವಿರೋಧಿಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ," ಎಂದು ಯಡಿಯೂರಪ್ಪ ಕಿಡಿಕಾರಿದರು.
ವಿಶ್ವಕ್ಕೇ ಬೇಕು ಮೋದಿ ನಾಯಕತ್ವ
ಭಾಷಣದ ವೇಳೆ ನಾಸ್ಟ್ರಡಾಮಸ್ ಮಾತುಗಳನ್ನು ಉಲ್ಲೇಖಿಸಿದ ಯಡಿಯೂರಪ್ಪ, ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಬಯಸುತ್ತಿದೆ ಎಂದು ಹೇಳಿದರು.
"ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಆಶಯದಂತೆ ದೇಶವನ್ನು ಪ್ರಧಾನಿ ಮೋದಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ದೇಶದ ಗಡಿಗಳ ರಕ್ಷಣೆ ಮಾಡುವುದರ ಜತೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತಂದಿದ್ದಾರೆ," ಎಂದು ಯಡಿಯೂರಪ್ಪ ವಿವರಿಸಿದರು.
ಕೇಂದ್ರದ ಜತೆ ಹೆಜ್ಜೆ ಹಾಕುವ ಸರಕಾರ ಬೇಕು
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ ಮಾಡುತ್ತೇನೆ ಭರವಸೆ ನೀಡಿ ರಾಜ್ಯ ಸರಕಾರ ಮರೆತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಕೇಂದ್ರದ ಜತೆಗೆ ಹೆಜ್ಜೆ ಹೆಜ್ಜೆಗೆ ಹಾಕುವ ರಾಜ್ಯ ಸರಕಾರ ಬೇಕಾಗಿದೆ. ಕೇಂದ್ರದ ಪೈಸೆ ಪೈಸೆ ಹಣವನ್ನು ಇಲ್ಲಿನ ಮಹಿಳೆಯರು ಯುವಕರಿಗೆ ತಲುಪಿಸಬೇಕಾಗಿದೆ. ಇದಕ್ಕಾಗಿ ಮುಂದಿನ ಬಾರಿ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತನ್ನಿ ಎಂದು ಯಡಿಯೂರಪ್ಪ ವಿನಂತಿಸಿಕೊಂಡರು.
ಮೂರು ತಿಂಗಳು ಮನೆ ಮಠ ಬಿಟ್ಟು ಹೊರಡಿ 5 ವರ್ಷ ನೆಮ್ಮದಿಯಿಂದ ಇರಿ ಎಂದು ಯಡಿಯೂರಪ್ಪ ಜನರಿಗೆ ಇದೇ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.