ಇನಿಯನ ತೆಕ್ಕೆಯೂ ಇಲ್ಲ, ಗಂಡನ ಆಸರೆಯೂ ಇಲ್ಲ: ಗೃಹಿಣಿ ಅತಂತ್ರ
ಮಂಡ್ಯ, ಮೇ 26: ಗಂಡ, ಮಕ್ಕಳ ಜೊತೆ ಸುಖವಾಗಿ ಸಂಸಾರ ಮಾಡಿಕೊಂಡು ಇರುವುದನ್ನು ಬಿಟ್ಟು, ಇನಿಯನ ಸಖ್ಯ ಬಯಸಿ ಹೋಗಿದ್ದ ಮಂಡ್ಯದ ಹೌಸಿಂಗ್ ಬೋರ್ಡಿನ ಗೃಹಿಣಿಯ ಜೀವನ ಅತಂತ್ರವಾಗಿದೆ.
ಈಕೆಯ ಪ್ರಿಯಕರ ಸಾಗರ್ ನಿನ್ನ ಸಹವಾಸ ಸಾಕು ಎಂದು ಮನೆಯಿಂದ ಹೊರಹಾಕಿದರೆ, ಮತ್ತೆ ಮನೆಗೆ ಕಾಲಿಡಬೇಡ ಎಂದು ಗಂಡನೂ ತಿರಸ್ಕರಿಸಿದ್ದರಿಂದ ಗೃಹಿಣಿ ಲಕ್ಷ್ಮಿಯ ಜೀವನ ಮೂರಾಬಟ್ಟೆಯಾಗಿದೆ.
ನನ್ನ ಎರಡನೇ ಮಗಳು ಸಾಗರ್ ನದ್ದೇ. ನನ್ನ ಗಂಡನಿಗೆ ಎಲ್ಲಾ ವಿಷಯ ತಿಳಿದಿದೆ. ಇಷ್ಟೆಲ್ಲಾ ಆದನಂತರ ನಾನು ಗಂಡ ಶಶಿಕುಮಾರ್ ಮನೆಗೆ ಹೋಗುವುದಿಲ್ಲ. ನನಗೆ ಸಾಗರನೇ ಬೇಕು ಎಂದು ಪಟ್ಟು ಹಿಡಿದಿದ್ದ ಲಕ್ಷ್ಮಿ, ಈಗ ಪ್ರಿಯಕರನ ಮೇಲೆ ಅತ್ಯಾಚಾರದ ದೂರು ದಾಖಲಿಸಲು ಮುಂದಾಗಿರುವುದು ಮಾತ್ರ ಹಾಸ್ಯಾಸ್ಪದ. (ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ)
ಇಲ್ಲಿನ ಹೌಸಿಂಗ್ ಬೋರ್ಡ್ ನಿವಾಸಿ ಶಶಿಕುಮಾರ್ ಜೊತೆ 7 ವರ್ಷ ಸಂಸಾರ ನಡೆಸಿದ್ದ ಲಕ್ಷ್ಮಿ, ತನ್ನ ಪ್ರಿಯಕರನ ಆಶ್ರಯ ಬಯಸಿ ಮನೆ ಬಿಟ್ಟು ಹೋಗಿದ್ದಳು. ಆದರೆ, ಪ್ರಿಯಕರ ಸಾಗರ್ ಈಕೆಯನ್ನು ಬಂದಷ್ಟೇ ವೇಗವಾಗಿ ಮನೆಯಿಂದ ಹೊರಹಾಕಿದ್ದಾನೆ.
ತನಗೆ ಹಳೇ ಗಂಡನ ಪಾದವೇ ಗತಿ ಎಂದು ವಾಪಸ್ ಮನೆಗೆ ಬಂದಾಗ, ಆಕೆಯನ್ನು ವಾಪಸ್ ಪಡೆಯಲು ಪತಿ ಕೂಡಾ ನಿರಾಕರಿಸಿದ್ದಾನೆ. ಇದರಿಂದ ವಿಚಲಿತಳಾದ ಲಕ್ಷ್ಮಿ, ಮದುವೆಯ ವೇಳೆ ತನ್ನ ತಾಯಿ ಮನೆಯವರು ಹಾಕಿದ್ದ ಚಿನ್ನಾಭಾರಣ ಮತ್ತು ಆಸ್ತಿಯನ್ನು ಮರಳಿಸುವಂತೆ ಗಂಡನಿಗೆ ಆಗ್ರಹಿಸಿದ್ದಾಳೆ.
ನಿರ್ದಿಷ್ಟ ಸಮಯದೊಳಗೆ ವಾಪಸ್ ಮಾಡುವುದಾಗಿ ಗಂಡ ಭರವಸೆ ನೀಡಿದ ನಂತರ ಲಕ್ಷ್ಮಿ, ಪ್ರಿಯಕರ ಸಾಗರ್ ಮೇಲೆ ಅತ್ಯಾಚಾರದ ಕೇಸ್ ದಾಖಲಿಸಲು ಹೋಗಿದ್ದಾಳೆ. ಪೊಲೀಸ್ ಠಾಣೆಯವರು ಈಕೆಯ ಗಂಡ ಮತ್ತು ಪ್ರಿಯಕರನನ್ನು ಕರೆಸಿ ರಾಜೀ ಸಂಧಾನಕ್ಕೆ ಒತ್ತಾಯಿಸಿದ್ದಾರೆ, ಆದರೆ ಇದು ವರ್ಕೌಟ್ ಆಗಿಲ್ಲ.
ಇತ್ತ ನಿನ್ನ ಸಹವಾಸವೇ ಬೇಡ ಎಂದು ಲಕ್ಷ್ಮಿಯ ತಂದೆ ತಾಯಿಯೂ ಈಕೆಯಿಂದ ದೂರ ಸರಿದಿದ್ದಾರೆ. ಅಲ್ಲೂ ಇಲ್ಲದೇ, ಎಲ್ಲೂ ಇಲ್ಲದೇ ಲಕ್ಷ್ಮಿ ಈಗ ಸ್ವಾಧಾರ ಕೇಂದ್ರವೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಘಟನೆಯ ವಿವರ : ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿ ಶಶಿಕುಮಾರ್ ಎಂಬುವರೊಂದಿಗೆ ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯ ಲಕ್ಷ್ಮಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇವೆ.
ಈ ನಡುವೆ ಲಕ್ಷ್ಮಿಗೆ ತನ್ನ ಗಂಡನ ಸ್ನೇಹಿತ, ಎದುರು ಮನೆಯ ಸಾಗರ್ ಎಂಬುವರೊಂದಿಗೆ ಅನೈತಿಕ ಸಂಬಂಧವಿತ್ತು. ಗಂಡನನ್ನು ಬಿಟ್ಟು ಬರುವಂತೆ ಆತ ಒತ್ತಾಯಿಸುತ್ತಿದ್ದ, ಆತನನ್ನು ನಂಬಿದ ಲಕ್ಷ್ಮಿ ಮಂಗಳವಾರ ಬೆಳಗ್ಗೆ (ಮೇ 24) ಸಾಗರ್ ಮನೆಗೆ ಬಂದು ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾಳೆ. (ಪ್ರಿಯಕರನ ಬಿಡಲೊಲ್ಲೆ ಎಂದ ಹೆಂಡತಿ)
ಆದರೆ ಈಕೆಯ ಪ್ರೇಮಿ ಸಾಗರ್, ಈಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಈ ವಿಷಯ ತಿಳಿದ ಶಶಿಕುಮಾರ್ ಸಂಬಂಧಿಕರು ಸಾಗರ್ ಮನೆಗೆ ಆಗಮಿಸಿ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ.
ಆಗ ಮಧ್ಯ ಪ್ರವೇಶಿಸಿದ್ದ ಲಕ್ಷ್ಮಿ, ನನ್ನ ಎರಡನೇ ಮಗಳು ಸಾಗರ್ನದ್ದೇ. ನನ್ನ ಗಂಡನಿಗೆ ಎಲ್ಲಾ ವಿಷಯ ತಿಳಿದಿದೆ. ಇಷ್ಟೆಲ್ಲಾ ಆದನಂತರ ನಾನು ಶಶಿಕುಮಾರ್ ಮನೆಗೆ ಹೋಗುವುದಿಲ್ಲ. ನನಗೆ ಸಾಗರನೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ.
ಪ್ರಿಯತಮೆಯ ಮಾತಿನಿಂದ ಸಿಟ್ಟಿಗೆದ್ದ ಸಾಗರ್ ಈಕೆಗೂ ನನಗೂ ಅನೈತಿಕ ಸಂಬಂಧವಿದ್ದಿದ್ದು ನಿಜ. ಆದರೆ, ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಆಗ ಅನೈತಿಕ ಸಂಬಂಧದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.
ನ್ಯಾಯ ಪಂಚಾಯಿತಿ ಸಂಧಾನವೆಲ್ಲ ಮುಗಿದ ಬಳಿಕ ಶಶಿಕುಮಾರ್ ತನ್ನ ಹೆಂಡತಿಯನ್ನು ಪ್ರಿಯಕರನೊಂದಿಗೆ ಹೋಗಲು ಒಪ್ಪಿಗೆ ಸೂಚಿಸಿದ್ದಾನೆ. ವಿಚ್ಛೇದನ ಆಗುವವರೆಗೂ ನಾನು ಸಾಗರ್ ಮನೆಯಲ್ಲೇ ಇರುತ್ತೇನೆ ಎಂದು ಪೊಲೀಸ್ ಠಾಣೆಯಿಂದ ಸಾಗರ್ ಜೊತೆ ಮನೆಗೆ ತೆರಳಿದ್ದಳು. ಮಂಗಳವಾರ ಪ್ರಿಯಕರನ ಮನೆಗೆ ತೆರಳಿದ್ದ ಲಕ್ಷ್ಮಿಯನ್ನು ಸಾಗರ್ ಬುಧವಾರ ಮನೆಯಿಂದ ಹೊರಗೆ ಹಾಕಿದ್ದಾನೆ.