ಕಾಂಗ್ರೆಸ್ಸಿನ ಇಬ್ಬರು ರಾಜ್ಯಸಭೆ ಕಣದಲ್ಲಿ: ಅಸಲಿ ಸತ್ಯ ಬಿಚ್ಚಿಟ್ಟ ಎಚ್ಡಿಕೆ
ಬೆಂಗಳೂರು, ಜೂನ್ 9: "ಕಳೆದ ಮೂರ್ನಾಲ್ಕು ದಿನಗಳಿಂದ ಮನವಿ ಮಾಡಿದ್ದೇನೆ. ನಾನು ಕಾಂಗ್ರೆಸ್ ನಾಯಕರಿಗೆ ಹೇಳುತ್ತಿದ್ದೇನೆ. ಹೊಸ ಸಂಪ್ರದಾಯ ಪಾಲನೆ ಚರ್ಚೆಗೆ ಸಿದ್ಧ ಇದ್ದೇನೆ ಎಂದಿದ್ದೇನೆ. ಅದನ್ನ ನನ್ನ ಬಲಹೀನತೆ ಅಂತ ಅನ್ನೋದು ಬೇಡ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Recommended Video
ರಾಜ್ಯಸಭಾ ಚುನಾವಣೆಯ ಸಂಬಂಧ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಯಾರ್ಯಾರು ಏನೇನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಅಂದಿದ್ದಾರೆ. ಸಿಎಲ್ಪಿ ಲೀಡರ್ ನಮಗೆ ಬೆಂಬಲ ಕೊಡಿ ಅಂದಿದ್ದಾರೆ, ನಿಮಗೂ ಮುನ್ನವೇ ನಾವು ಅಭ್ಯರ್ಥಿ ನಿರ್ಧಾರ ಮಾಡಿದ್ದೆವು" ಎಂದು ಎಚ್ಡಿಕೆ ಅಭಿಪ್ರಾಯ ಪಟ್ಟರು.
Oneindia Explainer: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ?
"ದೇವೇಗೌಡ ಅವರು ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದರು. ನಿಮ್ಮ ಪಕ್ಷದಲ್ಲಿ ತೀರ್ಮಾನ ಮಾಡಿದರೆ ಆಗುತ್ತಾ? ಎರಡನೇ ಅಭ್ಯರ್ಥಿ ಹಾಕುತ್ತೇವೆ ಎಂದು ಚರ್ಚಿಸಿದಿರಾ? ಇವತ್ತು ಶಿವಕುಮಾರ್ ಹೇಳಿದ್ದಾರೆ ನಮಗೆ ಬೆಂಬಲ ಕೊಡಿ ಅಂತ. ನಾನು ಒಳ್ಳೆಯ ಮಾತಿನಿಂದ ಮನಸ್ಸು ಗೆಲ್ಲೋಕೆ ಹೊರಟೆ, ನುಡಿ ಮುತ್ತುಗಳಿಂದ ಗೆಲ್ಲೋಕೆ ನೋಡಿದೆ. ಸಿಎಂ ಮಾಡಲಿಲ್ಲವೇ ಅಂತ ಹೇಳಿದ್ದಾರೆ"ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದರು, 79 ಸ್ಥಾನಕ್ಕೆ ಇಳಿಸಿದರು, ಬಿಜೆಪಿ ನಾಯಕರು ನನ್ನ ಸಂಪರ್ಕದಲ್ಲಿದಲ್ಲಿದ್ದರು. ನಮ್ಮ ಕದ ತಟ್ಟಿದವರು ನೀವು, ದೇವೇಗೌಡರು ಅಂದು ಅವಕಾಶ ಕೊಟ್ಟರು, ನೀವಾಗಿಯೇ ಬಂದು ಬೆಂಬಲ ಕೊಟ್ಟವರು ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಡಿಕೆ ತಿರುಗೇಟು ನೀಡಿದರು.
ಕ್ರಾಸ್ ವೋಟಿಂಗ್ ಭೀತಿ: ಜೆಡಿಎಸ್ ಶಾಸಕರು ಪಂಚತಾರಾ ಹೋಟೆಲಿಗೆ ಶಿಫ್ಟ್?
ಇಂತವರೇ ಅಧಿಕಾರಿಗಳಿರಬೇಕೆಂದು ಒತ್ತಡ ತಂದಿದ್ದರು
"ನಾನು ಸಿಎಂ ಆಗಿದ್ದಾಗ, ಇಂತವರೇ ಸಚಿವರಾಗಬೇಕು, ಇಂತವರೇ ಅಧಿಕಾರಿಗಳಿರಬೇಕೆಂದು ಒತ್ತಡ ತಂದಿದ್ದರು. ನಾನು ಎಲ್ಲವನ್ನೂ ಸಹಿಸಿಕೊಂಡೆ, ರೈತರ ಸಾಲಮನ್ನಾ ಬಗ್ಗೆ ಲಘುವಾಗಿ ಮಾತನಾಡಿದರು. ನಾನು ರೈತರ ಸಾಲ ಮನ್ನಾ ಮಾಡಿದೆ, ಈಗ ಇದೆಲ್ಲವೂ ಮುಗಿದು ಹೋದ ಅಧ್ಯಾಯ. ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಮಾತನಾಡುತ್ತಿದ್ದೀರಾ, ನೀವು ಸಿಎಂ ಆಗಿದ್ದಾಗ ಸಮಾಜವನ್ನೇ ಒಡೆದವರು" ಎಂದು ಎಚ್.ಡಿ.ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದರು.
ಗುಬ್ಬಿ ಶಾಸಕ ಶ್ರೀನಿವಾಸ್ ಜೊತೆಗೂ ಮಾತನಾಡಲಾಗಿದೆ
"ಬಿಜೆಪಿ ಬಿಟೀಂ ಎಂದು ಹೇಳಿ ನಮ್ಮ ನಾಯಕರನ್ನು ಸೋಲಿಸಿದ್ದು ಇದೇ ಸಿದ್ದರಾಮಯ್ಯ, ಈಗ ಆತ್ಮಸಾಕ್ಷಿ ಎನ್ನುತ್ತಿದ್ದಾರೆ. ನಾನು ಯಾಕೆ ಬಿಜೆಪಿ ನಾಯಕ ಕಿಶನ್ ರೆಡ್ಡಿ ಭೇಟಿ ಮಾಡಲಿ? ನಮ್ಮ ಸಚೇತಕರೇ ಎಲ್ಲರಿಗೆ ಪತ್ರ ಬರೆದಿದ್ದಾರೆ, ಮೆಸೇಜ್ ಕೂಡ ಕಳುಹಿಸಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಜೊತೆಗೂ ಮಾತನಾಡಲಾಗಿದೆ, ಅವರ ಅಪ್ತ ಸ್ನೇಹಿತರೇ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡ್ರು ಜೆಡಿಎಸ್ಸಿಗೆ ಮತ ಹಾಕುತ್ತೇವೆ ಎಂದಿದ್ದಾರೆ"ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಕೆ ಅವಕಾಶ ಮಾಡುತ್ತಿದ್ದಾರೆ
"ಕಾಂಗ್ರೆಸ್ ನವರು ಏನೇ ಕ್ರಾಸ್ ವೋಟಿಂಗ್ ಮಾಡಿಸಲಿ, ಆದರೆ ಅವರ ಅಭ್ಯರ್ಥಿ ಗೆಲ್ಲೋಕೆ ಆಗಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಕೆ ಅವಕಾಶ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಒಂದು ಸಂದೇಶ ಕೊಡಿ, ಬಿಜೆಪಿ ಬಿ ಟೀಂ ನಾಯಕರು ಯಾರು ಅನ್ನೋದು ಗೊತ್ತಾಗುತ್ತೆ. ಹತ್ತನೇ ತಾರೀಕಿನ ನಂತರ ಎಲ್ಲಾ ಗೊತ್ತಾಗಲಿದೆ. ಈಗ ಪಕ್ಷದಲ್ಲೇ ಇದ್ದೀರ, ನಮ್ಮ ಅಭ್ಯರ್ಥಿಗೆ ಮತ ಕೊಡಿ. ನೀವು ಮುಂದೆ ಯಾವ ನಿರ್ಣಯ ಬೇಕಾದರೂ ತೆಗೆದುಕೊಳ್ಳಬಹುದು. ಆದರೆ, ಈಗ ಪಕ್ಷದಲ್ಲಿ ಇರೋದರಿಂದ ಮತ ಕೊಡಿ"ಎಂದು ಕುಮಾರಸ್ವಾಮಿ ತಮ್ಮ ಪಕ್ಷದ ಭಿನ್ನಮತೀಯರಿಗೆ ಮನವಿ ಮಾಡಿದ್ದಾರೆ.
ಜೆಡಿಎಸ್ ಮುಗಿಸೋಕೆ ಯಾರಿಂದಲೂ ಆಗಲ್ಲ
"ಗೌರೀಶಂಕರ್ ಇಂದು ಸಂಜೆ ಏಳು ಗಂಟೆಗೆ ಬರುತ್ತಾರೆ, ನನ್ನ ಜೊತೆ ಅವರು ಮಾತನಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಉದ್ದೇಶ ಇರೋದು ಜೆಡಿಎಸ್ ಮುಗಿಸಬೇಕು ಎನ್ನುವುದು. ಅವರಿಗೆ ಬಿಜೆಪಿ ಉಳಿದರೂ, ಜೆಡಿಎಸ್ ಇರಬಾರದು ಎನ್ನುವುದು ಅವರ ಉದ್ದೇಶ. 2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸಿಗೆ ಕೊನೆ. ಆದರೆ ಜೆಡಿಎಸ್ ಮುಗಿಸೋಕೆ ಯಾರಿಂದಲೂ ಆಗಲ್ಲ" ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.