ಈಶಾನ್ಯ ರಾಜ್ಯಗಳ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಬಹುದಾ?
Recommended Video
ಈಶಾನ್ಯ ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಹಾಗೂ ಗಳಿಕೆ ಆ ಪಕ್ಷಕ್ಕೆ ಮತ್ತಷ್ಟು ಚೈತನ್ಯ ತುಂಬಿದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೇ ಪೂರ್ತಿಯಾಗಿ ಗಮನ ಹರಿಸಬಹುದು. ದಶಕಗಳಿಂದ ಸಿಪಿಎಂ ಆಡಳಿತದಲ್ಲಿದ್ದ ತ್ರಿಪುರಾ, ಇದೀಗ ಬಿಜೆಪಿಯ ತೆಕ್ಕೆಗೆ ಬಿದ್ದಿದೆ. ಮತ್ತೊಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ವಿಸ್ತರಣೆ ಆಗಿದೆ. ಈ ಫಲಿತಾಂಶ ಏನಾದರೂ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?
ಈಶಾನ್ಯ ರಾಜ್ಯಗಳ ಫಲಿತಾಂಶ ಕರ್ನಾಟಕದ ಮೇಲೆ ಏನೂ ಪರಿಣಾಮ ಬೀರಲ್ಲ ಎಂಬುದು ಕಾಂಗ್ರೆಸ್ಸಿಗರ ಪ್ರತಿಕ್ರಿಯೆ. ಕರ್ನಾಟಕದಲ್ಲಿ ಮತ್ತೆ ನಾವೇ ಗೆಲ್ತೀವಿ ಎಂದು ಕಾಂಗ್ರೆಸ್ ಬಹಳ ವಿಶ್ವಾಸದಲ್ಲಿದೆ. ಆದರೆ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ರಾವ್ ಅವರು ಹೇಳೋದೇ ಬೇರೆ. "ಇಷ್ಟು ಕಾಲದ ವಿದ್ಯಮಾನ ಬೇರೆ. ಆದರೆ ಈಗ ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶ ದೇಶದ ಇತರ ಭಾಗಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ" ಎನ್ನುತ್ತಾರೆ.
ತ್ರಿಪುರಾ ಫಲಿತಾಂಶ: ಕೇರಳ ಪಿಣರಾಯಿ ಸರಕಾರಕ್ಕೆ ಮೋದಿ ಎಚ್ಚರಿಕೆ?
ತ್ರಿಪುರಾ ಹಾಗೂ ನಾಗಾಲ್ಯಾಂಡ್ ಗಳಲ್ಲಿ ಕಾಂಗ್ರೆಸ್ ಸ್ಥಿತಿ ಚಿಂತಾಜನಕವಾಗಿದೆ. ಈ ಫಲಿತಾಂಶವು ಇಡೀ ದೇಶಕ್ಕೆ ಸಂದೇಶ ರವಾನಿಸಿದೆ. ಅದು ಕರ್ನಾಟಕಕ್ಕೂ ತಲುಪಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಯಾರಿಗೆ ಮತ ಹಾಕಬೇಕು ಎಂಬ ಜಿಜ್ಞಾಸೆಯಲ್ಲಿರುವ ಮತದಾರರ ವರ್ಗಕ್ಕೆ ತ್ರಿಪುರಾದ ಫಲಿತಾಂಶ ಬಿಜೆಪಿ ಕಡೆಗೆ ಒಲವು ಮೂಡುವಂತೆ ಮಾಡುತ್ತದೆ. ಇಂಥ ಮತದಾರರು ಸದ್ಯಕ್ಕೆ ಚುನಾವಣೆ ಎದುರಿಸಬೇಕಾದ ಕೆಲ ರಾಜ್ಯಗಳಲ್ಲಿ ಬಿಜೆಪಿ ಪರ ನಿಲ್ಲುತ್ತಾರೆ ಎನ್ನುತ್ತಾರೆ ರಾವ್.
ಇನ್ನು ತ್ರಿಪುರಾ ರಾಜ್ಯದ ಗೆಲುವನ್ನು ಉತ್ತರಪ್ರದೇಶದಲ್ಲಿ ಬಿಜೆಪಿ ಗೆದ್ದ ಪರಿಗೆ ಸಮೀಕರಿಸಲಾಗುತ್ತಿದೆ. ನೇರ ಹಣಾಹಣಿಯಲ್ಲಿ ಸಿಪಿಎಂನ ಬಗ್ಗುಬಡಿದಿದೆ ಬಿಜೆಪಿ. ಆ ಪಕ್ಷದ ಭದ್ರಕೋಟೆಯಲ್ಲೇ ನೆಲ ಕಚ್ಚುವಂತೆ ಮಾಡಿರುವ ಬಿಜೆಪಿಗೆ ಇದೀಗ ಭಾರೀ ಆತ್ಮವಿಶ್ವಾಸ ಮೂಡಿದೆ.
ಮತ್ತೆ ಮೇಲೇಳುವುದಿಲ್ಲ ಎಡ ಪಕ್ಷ
ಎಡ ಪಕ್ಷಗಳು ಮತ್ತೆ ಚೇತರಿಸಿಕೊಳ್ಳುವ ಯಾವ ಲಕ್ಷಣವೂ ಇಲ್ಲ. ಅವರ ಪಾಲಿಗೆ ಸೂರ್ಯಾಸ್ತ ಸಮಯ. ಅವರಿಗೂ ಈ ವಿಚಾರ ಗೊತ್ತಿದೆ. ಎಲ್ಲೆಲ್ಲಿ ಎಡಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆಯಲಾಗಿದೆಯೋ ಅವರು ಮತ್ತೆ ಮೇಲೆದ್ದಿಲ್ಲ. ಪಶ್ಚಿಮ ಬಂಗಾಲ ರಾಜ್ಯ ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಅಭಿಪ್ರಾಯ ಪಡುತ್ತಾರೆ ಜಿವಿಎಲ್ ರಾವ್.
ಇಂದು ತ್ರಿಪುರಾ, ನಾಳೆ ಕೇರಳ
ಕೇರಳದಲ್ಲಿ ಬಿಜೆಪಿಯನ್ನು ಹೆದರಿಸಲಾಯಿತು. ಅಲ್ಲಿ ಬಹುಮತದೊಂದಿಗೆ ಎಡಪಕ್ಷಗಳು ಅಧಿಕಾರ ಹಿಡಿದವು. ಇದೀಗ ಹಿಂದೂಗಳ ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇಂದು ತ್ರಿಪುರಾ, ನಾಳೆ ಕೇರಳ ಎಂಬ ವಿಶ್ವಾಸದಲ್ಲಿ ಬಿಜೆಪಿಯಿದೆ ಎಂದು ರಾವ್ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ರಾಷ್ಟ್ರ ಮಟ್ಟದಲ್ಲೇ ರಾಹುಲ್ ಗಾಂಧಿಯಿಂದ ಹಿನ್ನಡೆ
ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ವಿಚಾರ ಸ್ಪಷ್ಟವಿದೆ. ರಾಷ್ಟ್ರ ಮಟ್ಟದಲ್ಲೇ ರಾಹುಲ್ ಗಾಂಧಿ ಅವರು ಪಕ್ಷದ ಹಿನ್ನಡೆಗೆ ಕಾರಣ ಆಗುತ್ತಿದ್ದಾರೆ ಎಂಬುದು ಇಲ್ಲಿನ ನಾಯಕರು- ಮುಖಂಡರಿಗೆ ತಿಳಿದಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ದೇಶದಾದ್ಯಂತ ಕಾಂಗ್ರೆಸ್ ಸೋಲನ್ನೇ ಕಾಣುತ್ತಿದೆ ಎಂದು ರಾವ್ ಹೇಳಿದ್ದಾರೆ.
ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ
ಉಲ್ಟಾ ಹೊಡೆದ ಸೂಟು-ಬೂಟು ಟೀಕೆ
ರಾಹುಲ್ ಗಾಂಧಿ ಮಾಧ್ಯಮದಲ್ಲಿ ಗಮನ ಸೆಳೆಯುವುದಕ್ಕೆ ಸ್ಪಲ್ಪ ಮಟ್ಟಿಗೆ ಸಫಲರಾಗಿರಬಹುದು. ಆದರೆ ಜನರ ಮಧ್ಯೆ ನಾಯಕ ಎನಿಸಿಕೊಳ್ಳಲು ವಿಫಲರಾಗಿದ್ದಾರೆ. ಸೂಟು- ಬೂಟಿನ ಸರಕಾರ ಎಂದು ಕೇಂದ್ರ ಸರಕಾರವನ್ನು ಜರಿದಿದ್ದು ರಾಹುಲ್ ಗಾಂಧಿಗೆ ಉಲ್ಟಾ ಹೊಡೆದಿದೆ. ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಗೆ ರಾಹುಲ್ ಗಾಂಧಿಯೇ ಕಾರಣರಾಗುತ್ತಾರೆ ಎಂದು ರಾವ್ ಅಭಿಪ್ರಾಯ ಪಡುತ್ತಾರೆ.