ಪೀಠಾಧಿಪತಿಗಳ ಹೇಳಿಕೆಗಳಲ್ಲಿ ಬಹಿರಂಗವಾದ ರಾಜಕಾರಣಿಗಳ ಅಂತರಂಗ!
ಅತಿಹೆಚ್ಚು ಸ್ಥಾನ ಪಡೆದರೂ ಸರಕಾರ ರಚಿಸಲು ಸಾಧ್ಯವಾಗದೇ, ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಬೆಂಬಲದೊಂದಿಗೆ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಆ ಮೊದಲ ದಿನಗಳು.. ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ, ವೀರಶೈವ, ಲಿಂಗಾಯತ ಸಮುದಾಯದ ಹಿರಿಯ ಸ್ವಾಮೀಜಿಗಳೊಬ್ಬರ ಮೇಲೆ ಮುಖ್ಯಮಂತ್ರಿಗಳು ಬೇಸರ ಮಾಡಿಕೊಂಡಿದ್ದರು.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು, ಚುನಾವಣೆಗೆ ಮುನ್ನ ರೈತರ ಸಾಲಮನ್ನಾದ ವಿಚಾರದಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿಯವರನ್ನು ನುಡಿದಂತೆ ನಡೆಯಿರಿ ಎಂದು ಚಿತ್ರದುರ್ಗದಲ್ಲಿ ಒತ್ತಾಯಿಸಿದ್ದರು. ಇದು, ಮುಖ್ಯಮಂತ್ರಿಗಳ ಕೋಪಕ್ಕೆ ಕಾರಣವಾಗಿತ್ತು.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
ಸ್ವಾಮೀಜಿಯವರು ರಾಜಕೀಯ ಮಾಡಬಾರದು, ಯಾವುದೇ ವರ್ಗಕ್ಕೆ ಸೀಮಿತವಾಗಿರಬಾರದು ಎನ್ನುವ ಹೇಳಿಕೆಯನ್ನು, 24ಗಂಟೆಯಲ್ಲಿ ಸಾಲಮನ್ನಾ ಮಾಡಲಾಗಲಿಲ್ಲ ಎನ್ನುವ ಹತಾಶೆಯಿಂದ ಸಿಎಂ ಹೇಳಿದ್ದರು. ಖಾವಿಧಾರಿಗಳು, ರಾಜಕೀಯದ ಬಗ್ಗೆ ಮಾತನಾಡಬಾರದು ಎನ್ನುವುದು ಸಿಎಂ ನಿಲುವಾದರೆ, ಆದಿಚುಂಚನಗಿರಿ ಶ್ರೀಗಳು, ಶುಕ್ರವಾರ (ಸೆ 14) ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿಗಳ ಸಹಮತವಿತ್ತೇ?
ರಾಜ್ಯದ ಎಲ್ಲಾ ಪೀಠಾಧಿಪತಿಗಳು (ಕೆಲವೇ ಕೆಲವು ಮಠಗಳನ್ನು ಹೊರತು ಪಡಿಸಿ) ಆಯಾಯ ಸಮುದಾಯದ ಪ್ರಮುಖ ಧಾರ್ಮಿಕ ಪೀಠದಂತೆ ಕೆಲಸ ನಿರ್ವಹಿಸಿಕೊಂಡು ಬರುತ್ತಿರುವುದು ಗೊತ್ತಿರುವ ವಿಚಾರ. ತಮ್ಮ ತಮ್ಮ ಸಮುದಾಯದಲ್ಲಿ ಏನೇ ಗೊಂದಲ ಉಂಟಾದರೆ, ತಮ್ಮ ಸಮುದಾಯದ ಮುಖಂಡರಿಗೆ ಹಿನ್ನಡೆಯಾದರೆ, ಮಠಾಧೀಶರು ಮಧ್ಯಸ್ಥಿಕೆ/ ವಕಾಲತ್ತು ವಹಿಸಿಕೊಂಡು ಬರುತ್ತಲೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?
ಹೀಗಿರುವಾಗ, ಅಂದು ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಹೇಳಿದ್ದು ತಪ್ಪು ಅನ್ನುವುದಾದರೆ, ಮೊನ್ನೆಮೊನ್ನೆ ಆದಿಚುಂಚಗಿರಿಯ ಶ್ರೀಗಳು ಹೇಳಿದ್ದು ರಾಜಕೀಯಕ್ಕೆ ಸಂಬಂಧಪಟ್ಟ ಹೇಳಿಕೆಯಲ್ಲವೇ? ತಮ್ಮ ಪಕ್ಷ ಅಥವಾ ಸರಕಾರದ ಪರವಾಗಿ ಮಾತನಾಡಿದರೆ ಸರಿ, ಇಲ್ಲಾಂದ್ರೆ ತಪ್ಪು ಎನ್ನುವ ನಿಲುವನ್ನು ರಾಜಕೀಯ ಪಕ್ಷದ ಮುಖಂಡರು, ಕೊನೇ ಪಕ್ಷ ಧಾರ್ಮಿಕ ಪೀಠದಲ್ಲಿನ ವಿಚಾರದಲ್ಲಾದರೂ ಬಿಡಬೇಕಲ್ಲವೇ. ಸಾಣೇಹಳ್ಳಿ ಮತ್ತು ಆದಿಚುಂಚನಗಿರಿ ಶ್ರೀಗಳು ಹೇಳಿದ್ದೇನು? ಮುಂದೆ ಓದಿ..
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ರೈತರ ಸಾಲಮನ್ನಾ ವಿಚಾರದಲ್ಲಿ, ನುಡಿದಂತೆ ನಡೆಯಲಿಲ್ಲ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಅಪಸ್ವರ ಎತ್ತಿದ್ದರು. ರೈತರ ಸಾಲಮನ್ನಾ ಮಾಡುವಲ್ಲಿ ಮೀನಾಮೇಷ ಎಣಿಸುವುದು ಸರಿಯಲ್ಲ. ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಬೇಕು. ರೈತರ ಸಾಲಮನ್ನಾ ಮಾಡಲು ಸಿಎಂ ಮುಂದಾಗಲಿ. ಉಪಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಅಲ್ಲ, ಕುದುರೆ ವ್ಯಾಪಾರಕ್ಕೆ ಬಿಜೆಪಿ ಪ್ರಯತ್ನ ಮಾಡಿದ್ದು ಸರಿಯಲ್ಲ. ಈ ಬಾರಿ ಜನ ಯಾವುದೇ ಪಕ್ಷಕ್ಕೆ ಬಹುಮತ ನೀಡದೇ ಇರುವುದು ಬೇಸರ ತಂದಿದೆ. ಮುಂದಿನ ಬಾರಿಯಾದರೂ, ಮತದಾರ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ನೀಡಲಿ ಎಂದು ಶ್ರೀಗಳು ಹೇಳಿದ್ದರು.
ದಾವಣಗೆರೆ, ಚಿತ್ರದುರ್ಗದ ಕಡೆಯ ಯಾರೋ ಒಬ್ಬರು ಸ್ವಾಮೀಜಿ
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿಗಳು, ದಾವಣಗೆರೆ, ಚಿತ್ರದುರ್ಗದ ಕಡೆಯ ಯಾರೋ ಒಬ್ಬರು ಸ್ವಾಮೀಜಿ, ನಮ್ಮ ಸರಕಾರದ ಬಗ್ಗೆ ಬಗ್ಗೆ ನೇರವಾಗಿ ಟೀಕೆ ಮಾಡಿದ್ದಾರೆ. ಸ್ವಾಮೀಜಿಗಳು ಧಾರ್ಮಿಕ ಕೆಲಸವನ್ನು ಮಾಡಬೇಕೇ ಹೊರತು, ರಾಜಕೀಯದ ವಿಷಯದ ಬಗ್ಗೆ ಮಾತನಾಡಬಾರದು. ನಾವು ಜಾತಿ ರಾಜಕಾರಣ ಮಾಡುವುದಿಲ್ಲ, ಜಾತಿಯಿಂದ ಯಾರನ್ನೂ ಗುರುತಿಸುವುದಿಲ್ಲ. ಪೀಠಾಧಿಪತಿಗಳು ಗುರುಗಳ ಸ್ಥಾನದಲ್ಲಿ ನಿಂತು, ಸರಕಾರಕ್ಕೆ ಸಲಹೆ ನೀಡಬೇಕೇ ಹೊರತು, ರಾಜಕೀಯದಲ್ಲಿ ಮಧ್ಯಪ್ರವೇಶಿಸಬಾರದು. ಬೇಕಿದ್ದಲ್ಲಿ, ನೇರವಾಗಿ ರಾಜಕೀಯಕ್ಕೆ ಬರಲಿ ಎಂದು ಸಿಎಂ ಕಿಡಿಕಾರಿದ್ದರು.
ಖಾರವಾಗಿ ಸಾಣೇಹಳ್ಳಿ ಶ್ರೀಗಳು ಪತ್ರ ಬರೆದಿದ್ದರು
ಸಿಎಂ ಹೇಳಿಕೆಗೆ ಖಾರವಾಗಿ ಸಾಣೇಹಳ್ಳಿ ಶ್ರೀಗಳು ಪತ್ರ ಬರೆದಿದ್ದರು. ನಾವು ಯಾವ ಪಕ್ಷಕ್ಕೂ ಅಂಟಿಕೊಂಡವರಲ್ಲ ಪಕ್ಷ ಜಾತಿ ನೋಡದೆ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಹೇಳುತ್ತಾ ಬಂದಿದ್ದೇವೆ. ಆದರೆ ನೀವು ಜಾತಿ ರಾಜಕೀಯ ಮಾಡುವುದಾದರೆ ನೇರವಾಗಿ ರಾಜಕೀಯಕ್ಕೆ ಬಂದು ಬಿಡಿ ಎಂದು ಸವಾಲು ಹಾಕಿರುವುದು ವಿಷಾದನೀಯ. ಸಂಕುಚಿತ ಮನೋಭಾವ ನಮಗಿಲ್ಲ ಇದು ನಮ್ಮನ್ನು ಬಲ್ಲವರಿಗೇ ಗೊತ್ತು, ಬೇಕಾದರೆ ನಿಮ್ಮ ತಂದೆಯವರನ್ನು ಕೇಳಿ ನೋಡಿರಿ. ಗುರು ಸ್ಥಾನದಲ್ಲಿ ನಿಂತು ಸಲಹೆ ನೀಡುತ್ತೇವೆ, ತಪ್ಪು ಕಂಡುಬಂದಲ್ಲಿ ತಿದ್ದಿಕೊಳ್ಳಲು ಹೇಳುತ್ತೇವೆ, ತಿದ್ದಿಕೊಳ್ಳದಿದ್ದಲ್ಲಿ ಖಂಡಿಸುತ್ತೇವೆ. ನೀವೇ ಗಂಭೀರವಾಗಿ ಯೋಚಿಸಿ ಯಾರು ದಾರಿ ತಪ್ಪಿದ್ದಾರೆ, ಯಾರು ತಿದ್ದಿಕೊಳ್ಳಬೇಕು ಎಂದು. ನಮ್ಮ ಭಾವನೆಗಳು ನಿಮಗೆ ಅರ್ಥವಾದರೆ ಸಾಕು ಎಂದು ಶ್ರೀಗಳು ಪತ್ರ ಬರೆದಿದ್ದರು.
ದೇವೇಗೌಡರ ಹಸ್ತರೇಖೆ ನೋಡಿ ನೀನು ಚಕ್ರವರ್ತಿ ಆಗುತ್ತೀಯ ಎಂದು ಹೇಳಿದ್ದ
ಮಾಜಿ ಪ್ರಧಾನಿಗಳು 5-6 ನೇ ತರಗತಿಯಲ್ಲಿ ಓದುತ್ತಿದ್ದಾಗ ಕುರಿ ಕಾಯುತ್ತಿದ್ದರು. ಆಗ ಅಲ್ಲಿ ಬುಡಬುಡಿಕೆಯವನೊಬ್ಬ ಶಾಸ್ತ್ರ ಹೇಳಲು ಬರುತ್ತಾನೆ. ಆಗ ದೇವೇಗೌಡರ ಹಸ್ತರೇಖೆ ನೋಡಿ ನೀನು ಚಕ್ರವರ್ತಿ ಆಗುತ್ತೀಯ ಎಂದು ಹೇಳಿದ್ದ. ದೇವೇಗೌಡರು ಒಬ್ಬ ಮಹಾನ್ ದೈವಭಕ್ತ. ಅವರ ವಿರುದ್ದ ಹೋಗುವುದು, ದೈವ ವಿರುದ್ಧ ನಿಲ್ಲುವುದು ಒಂದೇ. ಹಾಗಾಗಿ ಸರ್ಕಾರವನ್ನು ಉರುಳಿಸಲು ಹವಣಿಸುವವರು ದೈವಶಕ್ತಿಯ ವಿರುದ್ಧ ನಿಂತಂತೆ. ಸರ್ಕಾರ ಉರುಳಿಸುವ ಕೆಲಸದಲ್ಲಿ ತೊಡಗಿದರೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧಿ ಕೆಲಸ ಮಾಡಿದಂತೆ. ದೇವೇಗೌಡರ ವಿರುದ್ಧ ಮಾಡುವ ಕೆಲಸ ದೈವದ ವಿರೋಧಿ ಕೆಲಸ ಮಾಡಿದಂತೆ ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದ ಶ್ರೀಗಳು ಹೇಳಿದ್ದರು.
ಬಿಜೆಪಿ ಕುದುರೆ ವ್ಯಾಪಾರಕಕ್ಕೆ ಇಳಿಯಬಾರದು
ಸಾಣೇಹಳ್ಳಿ ಮತ್ತು ಆದಿಚುಂಚನಗಿರಿ ಶ್ರೀಗಳ ಹೇಳಿಕೆಯನ್ನು ಅವಲೋಕಿಸುವುದಾದರೆ, ಸಾಣೇಹಳ್ಳಿ ಶ್ರೀಗಳು ರೈತನ ಸಾಲಮನ್ನಾದ ವಿಚಾರವನ್ನು ಎತ್ತಿದ್ದರು. ಬಿಜೆಪಿ, ಕುದುರೆ ವ್ಯಾಪಾರಕಕ್ಕೆ ಇಳಿಯಬಾರದು ಎಂದಿದ್ದರು. ಎರಡೂ ಪಕ್ಷಗಳ ಕಿವಿಯನ್ನು ಸಾಣೇಹಳ್ಳಿ ಶ್ರೀಗಳು ಹಿಂಡಿದ್ದರು. ಇತ್ತ, ಆದಿಚುಂಚನಗಿರಿ ಶ್ರೀಗಳು, ದೇವೇಗೌಡರಿಗೆ ದೈವೀಶಕ್ತಿ ಇದೆ, ಸರಕಾರ ಉರುಳಿಸಿದರೆ ದೈವ ವಿರೋಧಿ ಕೆಲಸ ಅಂದಿದ್ದರು. ಎರಡೂ ರಾಜ್ಯದ ಪ್ರಮುಖ ಧಾರ್ಮಿಕ ಪೀಠಗಳು. ಆದರೆ, ಅಂದು ಸಾಣೇಹಳ್ಳಿ ಶ್ರೀಗಳ ಹೇಳಿಕೆ ತಪ್ಪು ಎಂದು ಅನಿಸಿದ್ದ ಮುಖ್ಯಮಂತ್ರಿಗಳಿಗೆ, ಆದಿಚುಂಚನಗಿರಿ ಶ್ರೀಗಳ ಹೇಳಿಕೆಯಲ್ಲಿ ತಪ್ಪು ಕಾಣಸಿಗಲಿಲ್ಲವೇ ಎನ್ನುವುದು ಇಲ್ಲಿ ಪ್ರಶ್ನೆ.