ಎಚ್ ವಿಶ್ವನಾಥ್ ಗೆ ಸಚಿವ ಸ್ಥಾನ ತಪ್ಪಲು ಕಾರಣವಾದ ಅಂಶಗಳು?
Recommended Video
ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಕೆಲವು ತಿಂಗಳ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿ, ಜೆಡಿಎಸ್ ಪಾಳಯಕ್ಕೆ ಸೇರಿ, ಹುಣಸೂರಿನಿಂದ ಗೆದ್ದಿದ್ದ ಅಡಗೂರು ವಿಶ್ವನಾಥ್ ಅವರಿಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಗ್ಯಾರಂಟಿ ಎಂದೇ ಹೇಳಲಾಗುತ್ತಿತ್ತು?
ಒಂದು ಹಂತದಲ್ಲಿ ವಿಶ್ವನಾಥ್ ಅವರಿಗೆ ಶಿಕ್ಷಣ ಖಾತೆ ನೀಡಲಾಗುವುದೆಂದೇ ಸುದ್ದಿಯಾಗಿತ್ತು. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುವುದಾಗಿಯೂ ವಿಶ್ವನಾಥ್ ಹೇಳಿದ್ದರು. ಆದರೆ, ವಿಶ್ವನಾಥ್ ಎಲ್ಲೂ ಸಚಿವಸ್ಥಾನಕ್ಕಾಗಿ ದೇವೇಗೌಡರ ಜೊತೆ ಲಾಬಿ ನಡೆಸಿರಲಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ
ಆದರೆ, ಅದೇನು ರಾಜಕೀಯ ಬೆಳವಣಿಗೆ ನಡೆಯಿತೋ, ವಿಶ್ವನಾಥ್ ಹೆಸರು ಪಟ್ಟಿಯಲ್ಲಿ ಇಲ್ಲ ಎನ್ನುವುದು ಸಂಪುಟ ವಿಸ್ತರಣೆಯ ಒಂದು ದಿನದ ಹಿಂದೆಯೇ ಖಾತ್ರಿಯಾಗಿತ್ತು. ಅದಕ್ಕಾಗಿ, ವಿಶ್ವನಾಥ್ ಅವರು ಗೌಡ್ರು ಅಥವಾ ಕುಮಾರಾಸ್ವಾಮಿ ವಿರುದ್ದ ಬೇಸರಿಸಿಕೊಳ್ಳದೇ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮುತ್ಸದ್ದಿತನ ತೋರಿದ್ದರು.
ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ದೇವೇಗೌಡರಿಗೆ ಖುಣಿಯಾಗಿದ್ದೇನೆ. ಮುಖ್ಯಮಂತ್ರಿಯವರ ಹಿಂದೆ ನಿಂತು ಅವರ ಕೈಬಲಪಡಿಸಲು ಶ್ರಮಿಸುತ್ತೇನೆ. ಈ ಹಿಂದೆ ಕ್ಯಾಬಿನೆಟ್ ಸಚಿವನಾಗಿ ಕೆಲಸ ಮಾಡಿದ್ದೇನೆ, ಕಿರಿಯರಿಗೆ ಅವಕಾಶ ಸಿಗಲಿ ಎಂದು ವಿಶ್ವನಾಥ್ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ದ (ಮೈಸೂರು ಕ್ಷೇತ್ರ) ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಸುಮಾರು 31ಸಾವಿರ ಮತಗಳ ಅಂತರದಿಂದ ಸೋತಿದ್ದ ವಿಶ್ವನಾಥ್, ನಂತರ ಪ್ರಮುಖವಾಗಿ ಸಿದ್ದರಾಮಯ್ಯನವರ ಜೊತೆ ಸಂಬಂಧ ಹಳಸಿದ್ದರಿಂದ ಜೆಡಿಎಸ್ ಸೇರಿದ್ದರು. ಎಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ತಪ್ಪಲು ಕಾರಣವಾದ ಅಂಶಗಳೇನು? ಮುಂದೆ ಓದಿ
ವಿಧಾನಸಭೆಯ ಉಪಸಭಾಪತಿ ಸ್ಥಾನಕ್ಕೆ ವಿಶ್ವನಾಥ್
ವಿಧಾನಸಭೆಯ ಉಪಸಭಾಪತಿ ಸ್ಥಾನಕ್ಕೆ ಕುರುಬ ಸಮುದಾಯವನ್ನು ಪ್ರತಿನಿಧಿಸುವ ಎಚ್ ವಿಶ್ವನಾಥ್ ಅವರ ಹೆಸರು ಕೇಳಿ ಬಂದಿತ್ತು. ಕಾಂಗ್ರೆಸ್ಸಿನ ರಮೇಶ್ ಕುಮಾರ್ ಅವರು ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದ ನಂತರ, ಅನುಭವಿ ರಾಜಕಾರಣಿ ವಿಶ್ವನಾಥ್ ಅವರಿಗೆ ಉಪಸಭಾಪತಿ ಸ್ಥಾನ ನೀಡಲು ದೇವೇಗೌಡರು ಚಿಂತನೆ ನಡೆಸಿದ್ದರು. ಆದರೆ, ಆ ಹುದ್ದೆ ನನಗೆ ಬೇಡ ಎಂದು ವಿಶ್ವನಾಥ್ ಈಗಾಗಲೇ ಹೇಳಿದ್ದಾರೆ.
ಈಗಾಗಲೇ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ
ಮೈಸೂರು ಜಿಲ್ಲೆಯಿಂದ ಇಬ್ಬರನ್ನು ಸಚಿವ ಸ್ಥಾನಕ್ಕಾಗಿ (ಜೆಡಿಎಸ್) ಈಗಾಗಲೇ ಆಯ್ಕೆ ಮಾಡಲಾಗಿದೆ. ಕೆ ಆರ್ ನಗರದಿಂದ ಸಾ.ರಾ.ಮಹೇಶ್ ಮತ್ತು ಚಾಮುಂಡೇಶ್ವರಿಯಿಂದ ಜಿ ಟಿ ದೇವೇಗೌಡ. ಹಾಗಾಗಿ ಜಿಲ್ಲೆಯ ಮತ್ತೊಂದು ಕ್ಷೇತ್ರದ (ಹುಣಸೂರು) ಶಾಸಕರಿಗೆ ಮಣೆ ನೀಡಿದರೆ, ಬೇರೆ ಜಿಲ್ಲೆಗಳಿಗೆ ಆದ್ಯತೆ ನೀಡಲಿಲ್ಲ ಎನ್ನುವ ತಪ್ಪುಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೂ, ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ತಪ್ಪಿರಬಹುದು.
ಮೂವತ್ತು ತಿಂಗಳ ನಂತರ ಸಚಿವ ಸ್ಥಾನ ಇನ್ನೊಬ್ಬರಿಗೆ ರೊಟೇಶನ್ ?
ಮುಂದಿನ ದಿನಗಳಲ್ಲಿ, ಜೆಡಿಎಸ್ - ಕಾಂಗ್ರೆಸ್ ಪಕ್ಷದ ಸಚಿವರು ಆಯಕಟ್ಟಿನ ಖಾತೆಯನ್ನು ಸರಿಯಾಗಿ ನಿಭಾಯಿಸದೇ ಇದ್ದ ಪಕ್ಷದಲ್ಲಿ, ಅಂತವರ ಜಾಗಕ್ಕೆ ಬೇರೆ ಅನುಭವಿ ಶಾಸಕರನ್ನು ನೇಮಿಸುವ ಸಾಧ್ಯತೆಯಿದೆ. ಇದಲ್ಲದೇ ಮೂವತ್ತು ತಿಂಗಳ ನಂತರ ಸಚಿವ ಸ್ಥಾನ ಇನ್ನೊಬ್ಬರಿಗೆ ರೊಟೇಶನ್ ಆಗುವ ಸಾಧ್ಯತೆಯೂ ಇದೆ. ಪ್ರಮಾಣವಚನ ಸ್ವೀಕರಿಸಿದ ನಂತರ ಕೃಷ್ಣ ಭೈರೇಗೌಡರು ಈ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ ಕೂಡಾ. ಆ ಸಮಯದಲ್ಲಿ ವಿಶ್ವನಾಥ್ ಹೆಸರನ್ನು ಪರಿಗಣಿಸಬಹುದು.
ಸಿದ್ದರಾಮಯ್ಯ- ವಿಶ್ವನಾಥ್ ಅವರ ನಡುವಿನ ಸಂಬಂಧ ತೀರಾ ಹಳಸಿರುವುದು
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರೂ ಸಿದ್ದರಾಮಯ್ಯ ಇನ್ನೂ ಸಮ್ಮಿಶ್ರ ಸರಕಾರದಲ್ಲಿ ಪ್ರಭಾವಿಯಾಗಿಯೇ ಇದ್ದಾರೆ, ಜೊತೆಗೆ ಇವರು ಸಮನ್ವಯ ಸಮಿತಿಯ ಅಧ್ಯಕ್ಷರು ಬೇರೆ. ಸಿದ್ದರಾಮಯ್ಯ- ವಿಶ್ವನಾಥ್ ಅವರ ನಡುವಿನ ಸಂಬಂಧ ತೀರಾ ಹಳಸಿರುವುದರಿಂದ, ವಿಶ್ವನಾಥ್ ಆಯ್ಕೆಯಾಗದಂತೆ ತಡೆಯಲು ಸಿದ್ದರಾಮಯ್ಯನವರೂ ಕಾರಣ ಎನ್ನುವ ಮಾತೂ ಅಲ್ಲಲ್ಲಿ ಕೇಳಿಬರುತ್ತಿದೆ.
8-10ಸ್ಥಾನ ನಮಗೆ ಬಿಟ್ಟುಕೊಡಬೇಕು ಎನ್ನುವ ಚೌಕಾಸಿ
ಇನ್ನೇನು ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಈಗಾಗಲೇ ಎರಡೂ ಪಕ್ಷದ ಮುಖಂಡರು ಸ್ಪಷ್ಟ ಪಡಿಸಿದ್ದಾರೆ. ಟಿಕೆಟ್ ಹಂಚಿಕೆ ಸಂಬಂಧ ಈಗಾಗಲೇ ಮಾತುಕತೆ ಆರಂಭವಾಗಿದೆ. 8-10ಸ್ಥಾನ ನಮಗೆ ಬಿಟ್ಟುಕೊಡಬೇಕು ಎನ್ನುವ ಚೌಕಾಸಿ ಜೆಡಿಎಸ್ ನಿಂದ ಆರಂಭವಾಗಿದೆ. ಹೀಗಾಗಿ, ದೇವೇಗೌಡರ ಜೊತೆ ಪಕ್ಷ ಸಂಘಟನೆಗೆ ಹಿರಿಯರಾದ ಎಚ್ ವಿಶ್ವನಾಥ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಮಿಸ್ ಆಗಿರುವ ಸಾಧ್ಯತೆಯಿದೆ.