ಎಲ್ಲವನ್ನೂ ಬಿಟ್ಟು, ಗ್ರಾಮ ಪಂಚಾಯಿತಿ ಚುನಾವಣೆಗಳ ಮೇಲಷ್ಟೇ ಏಕೆ ನಿರ್ಬಂಧ?
ಬೆಂಗಳೂರು, ಮೇ 31: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿರುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು, ಕೊರೊನಾ ನೆಪ ಹೇಳಿ ಮುಂದಿನ ತಿಂಗಳು ನಡೆಯಬೇಕಿದ್ದ ಚುನಾವಣೆಗಳನ್ನು ಮುಂದಕ್ಕೆ ಹಾಕಿದೆ. ರಾಜ್ಯದಲ್ಲಿ ಲಾಕ್ಡೌನ್ ಬಹುತೇಕ ಅಂತ್ಯಗೊಂಡ ಸೂಚನೆ ಕಾಣಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಎಲ್ಲವನ್ನೂ ಬಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಗಳ ಮೇಲಷ್ಟೇ ಏಕೆ ನಿರ್ಬಂಧ ಎಂದು ಪ್ರಶ್ನಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆಗೆ ಶಿವಮೊಗ್ಗದಲ್ಲಿ ವಿರೋಧ
ಚುನಾವಣೆಗಳನ್ನು ಮುಂದಕ್ಕೆ ಹಾಕಿ ಬಿಜೆಪಿ, ತನ್ನ ಬೆಂಬಲಿಗರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಅನುಕೂಲ ಮಾಡಿ ಕೊಡಲು ಹೊರಟಿದೆ. ಆಡಳಿತ ಸಮಿತಿ ರಚಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಚುನಾವಣಾ ಆಯೋಗ ತನ್ನ ನಿರ್ಧಾರ ಹಿಂಪಡೆಯದಿದ್ದರೇ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ
ಮುಂದಿನ ತಿಂಗಳು ನಡೆಯಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕೊರೊನಾವೈರಸ್ ಹಾವಳಿಯಿಂದ ಮುಂದಕ್ಕೆ ಹಾಕಿ ಚುನಾವಣಾ ಆಯೋಗ ಆದೇಶಿಸಿದೆ. ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು.
6 ಸಾವಿರ ಗ್ರಾಮ ಪಂಚಾಯಿತಿ
ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ. ಆದರೆ, ದಿನಾಂಕ ಇನ್ನೂ ತಿಳಿಸಿಲ್ಲ. ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳ ಅಧಿಕಾರವಧಿ ಬಹುತೇಕ ಈ ತಿಂಗಳೇ ಅಂತ್ಯವಾಗುತ್ತೆ. ಸುಗಮ ಆಡಳಿತಕ್ಕಾಗಿ ಈಗ ಸರ್ಕಾರವೇ ಆಡಳಿತ ಸಮಿತಿಯನ್ನು ಗ್ರಾಮ ಪಂಚಾಯಿತಿಗಳಲ್ಲಿ ರಚಿಸಬೇಕಿದೆ. ಚುನಾವಣೆ ಆಯೋಗದ ನಿರ್ದಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಬೆಂಬಲಿಗರಿಗೆ ಮಣೆ ಹಾಕಲು
ರಾಜ್ಯ ಚುನಾವಣಾ ಆಯೋಗದ ಮೇಲೆ ಆಡಳಿತಾರೂಢ ಬಿಜೆಪಿ ಸರ್ಕಾರ ಒತ್ತಡ ತಂದು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದಕ್ಕೆ ಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಮ್ಮ ಬೆಂಬಲಿಗರಿಗೆ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸಲು ಅನುವು ಮಾಡಿ ಕೊಡುವ ಉದ್ದೇಶ ಇದರ ಹಿಂದೆ ಇದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ತಾಳಕ್ಕೆ ಆಯೋಗ ಡ್ಯಾನ್ಸ್
ಕೊರೊನಾವೈರಸ್ ಸೋಂಕು ಹರಡುತ್ತದೆ ಎಂದು ನೆಪ ಹೇಳಿ ಚುನಾವಣಾ ಆಯೋಗ ಚುನಾವಣೆಗಳನ್ನು ಮುಂದೂಡಿಲ್ಲ. ಬದಲಿಗೆ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಚುನಾವಣಾ ಆಯೋಗ ಕುಣಿಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.