ಎಂಟಿಬಿ ನಾಗರಾಜ್, ಆನಂದ್ ಸಿಂಗ್ ಥಂಡಾ: 'ಪ್ಲ್ಯಾನ್ ಬಿ' ಅಸಲಿ ಕಥೆಯ ಮುನ್ಸೂಚನೆ?
ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಆರಂಭಿಕ ಹಂತದಲ್ಲೇ ಹಿನ್ನಡೆಯಾಗಲಿದೆ ಎಂದು ಭಾವಿಸಲಾಗಿತ್ತು. ಇಬ್ಬರು ಸಚಿವರುಗಳಾದ ಎಂ.ಟಿ.ಬಿ ನಾಗರಾಜ್ ಮತ್ತು ಆನಂದ್ ಸಿಂಗ್, ಖಾತೆಯ ವಿಚಾರದಲ್ಲಿ ಹಾರಿಸಿದ್ದ ಬಂಡಾಯ ಬಾವುಟ ಸರಕಾರದ ಅಸ್ತಿತ್ವಕ್ಕೆ ಮುಳ್ಳಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿತ್ತು.
ಆನಂದ್ ಸಿಂಗ್ ಅವರು ಹೊಸಪೇಟೆಯಲ್ಲಿ ಆಡಿದ್ದ ರಾಜಕೀಯ ವೈರಾಗ್ಯದ ಮಾತು ಸಿಎಂ ಬೊಮ್ಮಾಯಿಯವರನ್ನು ಬೆಚ್ಚಿಬೀಳಿಸಿತ್ತು. ಕೂಡಲೇ ಕಾರ್ಯೋನ್ಮುಖರಾದ ಬೊಮ್ಮಾಯಿಯವರು, ಯಡಿಯೂರಪ್ಪನವರ ಮನೆ ಕದ ತಟ್ಟಿದ್ದು ಗೊತ್ತೇ ಇದೆ.
ಸಚಿವ ಅಶೋಕ್ ಪ್ರಕಾರ ಏನೂ ಸಮಸ್ಯೆಯಿಲ್ಲ, ಆದರೆ ಬಿಜೆಪಿಯಲ್ಲಿ ಎಲ್ಲೆಲ್ಲೂ ಸಮಸ್ಯೆ
ಇದರ ಜೊತೆಗೆ, ರಾಜ್ಯದ ಸಚಿವರ ಖಾತೆಯ ಅಸಮಾಧಾನದ ಬಗ್ಗೆ ಮುಖ್ಯಮಂತ್ರಿಗಳು, ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಫೋನ್ ಮಾಡಿ ಸವಿಸ್ತಾರವಾಗಿ ಚರ್ಚಿಸಿದ್ದರು. ಅವಶ್ಯಕತೆಯಿದ್ದರೆ, ದೆಹಲಿ ಬರುವುದಾಗಿ ಹೇಳಿದ್ದರು. ಅಷ್ಟೊತ್ತಿಗೆ ಎಂಟಿಬಿಯವರನ್ನು ರಾಜ್ಯದ ಲೆವೆಲಿನಲ್ಲೇ ಸಮಾಧಾನಗೊಳಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದರು.
ಯಡಿಯೂರಪ್ಪನವರು ಕೂಡಾ ಆಖಾಡಕ್ಕೆ ಇಳಿದು, ತಮ್ಮ ಆಪ್ತ ಶಾಸಕ ರಾಜೂಗೌಡರ ಮೂಲಕ ಆನಂದ್ ಸಿಂಗ್ ಅವರನ್ನು ಸಂಪರ್ಕಿಸಿ ಬೆಂಗಳೂರಿಗೆ ಹೆಲಿಕಾಪ್ಟರ್ ಹತ್ತುವಂತೆ ಸೂಚಿಸಿದ್ದರು. ಉಸ್ತುವಾರಿ ಅರುಣ್ ಸಿಂಗ್ ಜೊತೆಗಿನ ಮಾತುಕತೆಯ ವೇಳೆ ಸಿಎಂಗೆ ಸಿಕ್ಕ ಕ್ಲಿಯರ್ ಕಟ್ ಸಂದೇಶವೇನು, ಜೊತೆಗೆ ಇದು 'ಪ್ಲ್ಯಾನ್ ಬಿ' ನ ಮುನ್ಸೂಚನೆಯಾ?
ಯಾವ ಖಾತೆ ಕೊಟ್ಟರೂ ಅತೃಪ್ತ ಎಂಟಿಬಿಗೆ ಸಿಎಂ ಬೊಮ್ಮಾಯಿ ಫುಲ್ ಕ್ಲಾಸ್?
ಎಂ.ಟಿ.ಬಿ ನಾಗರಾಜ್ ಅವರಿಗೆ ಭರವಸೆಯ ಜೊತೆಗೆ ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ
ಎಂ.ಟಿ.ಬಿ ನಾಗರಾಜ್ ಅವರ ಜೊತೆಗಿನ ಚರ್ಚೆಯ ವೇಳೆ, ಮುಖ್ಯಮಂತ್ರಿ ಬೊಮ್ಮಾಯಿಯವರು ಭರವಸೆಯ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ, ಎಂಟಿಬಿ ತಣ್ಣಗಾಗಿದ್ದು ಎನ್ನುವ ಮಾತು ಹರಿದಾಡುತ್ತಿದೆ. ಒಂದು ದಿನದ ಹಿಂದೆ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದ ಎಂಟಿಬಿ ಇದ್ದಕ್ಕಿದ್ದಂತೆಯೇ, ವಹಿಸಲಾದ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ, ಈಗ ಇರುವ ಸ್ಥಾನವನ್ನೇ ಒಪ್ಪಿಕೊಳ್ಳುತ್ತೇನೆ ಎನ್ನುವ ಸಂದೇಶವನ್ನು ರವಾನಿಸಿದ್ದರು.
ಅರುಣ್ ಸಿಂಗ್ ಜೊತೆಗಿನ ಮಾತುಕತೆಯ ವೇಳೆ ಸಿಎಂಗೆ ಸಿಕ್ಕ ಕ್ಲಿಯರ್ ಕಟ್ ಸಂದೇಶ
ಉಸ್ತುವಾರಿ ಜೊತೆಗಿನ ಚರ್ಚೆಯ ವೇಳೆ, ಯಾವುದೇ ಬಂಡಾಯಕ್ಕೆ ಸೊಪ್ಪು ಹಾಕಲು ಹೋಗಬೇಡಿ, ಈಗ ಕೊಟ್ಟಿರುವ ಖಾತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಖಡಕ್ ಮಾತನ್ನು ಸಚಿವರುಗಳಿಗೆ ತಿಳಿಸಿ. ಈಗ ಖಾತೆ ಬದಲಾಯಿಸಿದರೆ, ಮುಂದೆ ಇನ್ನೊಬ್ಬರು ಖಾತೆ ಬದಲಾವಣೆ ಮಾಡಲು ಒತ್ತಡ ಹಾಕಬಹುದು. ಹಾಗಾಗಿ, ಈಗ ಮಾಡಲಾಗಿರುವ ಖಾತೆಯನ್ನು ಸದ್ಯದ ಮಟ್ಟಿಗೆ ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಇಬ್ಬರಿಗೂ ತಿಳಿಸಿ ಎನ್ನುವ ಸೂಚನೆಯನ್ನು ಅರುಣ್ ಸಿಂಗ್, ಸಿಎಂಗೆ ನೀಡಿದ್ದರು ಎಂದು ಹೇಳಲಾಗುತ್ತಿದೆ.
ನಿಮ್ಮ ಕೆಲಸವನ್ನು ನಿಭಾಯಿಸಿಕೊಂಡು ಹೋಗಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ
ಈ ಕಾರಣಕ್ಕಾಗಿ ದೆಹಲಿಗೆ ಬರುವ ಅವಶ್ಯಕತೆಯಿಲ್ಲ, ನಿಮ್ಮ ಕೆಲಸವನ್ನು ನಿಭಾಯಿಸಿಕೊಂಡು ಹೋಗಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಯಾವುದೇ ಕಾರಣಕ್ಕೂ ಖಾತೆಯ ವಿಚಾರದಲ್ಲಿ ರಾಜಿ ಆಗಬೇಡಿ. ಆ ಮೂಲಕ ಸ್ಪಷ್ಟ ಸಂದೇಶವನ್ನು ನಾವು ಕೊಡಬೇಕಾಗಿದೆ ಎಂದು ಅರುಣ್ ಸಿಂಗ್ ಅವರು ಸಿಎಂ ಬೊಮ್ಮಾಯಿಗೆ ಸೂಚಿಸಿದರು ಎನ್ನುವ ಮಾತು ಕೇಳಿ ಬರುತ್ತಿದೆ. ಇದರಿಂದಾಗಿಯೇ, ಸಿಎಂ ಬೊಮ್ಮಾಯಿಯವರು ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಬೇಡಿಕೆಯನ್ನು ಸದ್ಯದ ಮಟ್ಟಿಗೆ ತಳ್ಳಿ ಹಾಕಿರುವುದು.
ಪ್ಲ್ಯಾನ್ ಬಿ ಏನಾದರೂ ರೆಡಿಯಾಗಿದೆಯಾ ಎನ್ನುವ ಮಾತೂ ಈಗ ಚರ್ಚೆಯ ವಿಷಯ
ಬಿಜೆಪಿ ವರಿಷ್ಠರು ಖಾತೆ ಹಂಚಿಕೆಯ ವಿಚಾರದಲ್ಲಿ ಜಗ್ಗದೇ ಇರುವುದಕ್ಕೆ ಪ್ಲ್ಯಾನ್ ಬಿ ಏನಾದರೂ ರೆಡಿಯಾಗಿದೆಯಾ ಎನ್ನುವ ಮಾತೂ ಈಗ ಚರ್ಚೆಯ ವಿಷಯವಾಗಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ. ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ಬಿ.ಎಲ್.ಸಂತೋಷ್ ಜೊತೆ ಮಾತುಕತೆ ನಡೆಸಿದ್ದು, ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಸಾಫ್ಟ್ ಆಗಿರುವುದು, ದೇವೇಗೌಡ್ರ ಅಭಯ ಹಸ್ತ.. ಈ ಎಲ್ಲಾ ಕಾರಣಕ್ಕಾಗಿಯೇ ಯಾರ ಒತ್ತಡಕ್ಕೂ ಜಗ್ಗಬೇಡಿ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರವಾನಿಸಿತಾ ಎನ್ನುವುದಕ್ಕೆ ಉತ್ತರ ಸಿಗದೇ ಇರದು.
Recommended Video