ಬರ ಪರಿಹಾರ: ಬಿಎಸ್ವೈ ಸಿಎಂ ಆಗಿದ್ದು ಮೋದಿ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?
ಬೆಂಗಳೂರು, ಅ. 3: ಕರ್ನಾಟಕದ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರಕಾರದ ಶೂನ್ಯ ಕೊಡುಗೆ ಇದ್ದಕ್ಕಿದ್ದ ಹಾಗೆ ಟೀಕೆಗಳ ವೇದಿಕೆಯಲ್ಲಿ ಕೇಂದ್ರ ಸ್ಥಾನವನ್ನು ಅಲಂಕರಿಸಿದೆ.
ಕಳೆದ ಒಂದೂವರೆ ತಿಂಗಳುಗಳ ಹಿಂದೆ ಸುರಿದ ಭಾರಿ ಮಳೆಗೆ ಉತ್ತರ ಕರ್ನಾಟಕದ ಜನ ನಲುಗಿ ಹೋಗಿದ್ದರು. ರಾಜ್ಯ ಸರಕಾರ ಆಗಲೀ, ಕೇಂದ್ರ ಸರಕಾರ ಆಗಲೀ ಅವರ ನೋವುಗಳಿಗೆ ಮುಡಿಯುವ ಕೆಲಸವನ್ನು ಮಾಡದೆ ಉಳಿದಿದ್ದವು.
ನೆಪಕ್ಕೆ ಮೊದಲು ನೂರು ಕೋಟಿ ನಂತರ ನಂತರ ಐನೂರು ಕೋಟಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಂಡಿತು. ಆದರೆ ಆಗಿರುವ ಅಪಾರ ಪ್ರಮಾಣದ ಹಾನಿಯ ಮುಂದೆ ಈ ಕ್ರಮಗಳು ಕ್ಷುಲ್ಲಕವಾದದ್ದು ಎಂಬುದು ಎದ್ದು ಕಾಣುತ್ತಿತ್ತು.
ರಾಜ್ಯಕ್ಕೆ ತೀವ್ರವಾಗಿ ಕಾಡಲಾರಂಭಿಸಿದ ಈ ಇಬ್ಬರು ದಿಗ್ಗಜರ ಚುನಾವಣಾ ಸೋಲು
ಈ ನಡುವೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಕರ್ನಾಟಕ ಪ್ರವಾಹದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯವೊಂದನ್ನು ಎದ್ದು ಕಾಣುತ್ತಿತ್ತು. ಇರುವ 28 ಸ್ಥಾನಗಳ ಪೈಕಿ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಕರ್ನಾಟಕದ ವಿಚಾರದಲ್ಲಿ ಯಾಕೀ ತಾತ್ಸಾರ? ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿತ್ತು.
ಯಡಿಯೂರಪ್ಪ ಮುಖ್ಯಮಂತ್ರಿಯಾದ ವಿಚಾರ
ಬಿಜೆಪಿಯ ಆಂತರಿಕ ಬೆಳವಣಿಗೆಗಳು, ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ವಿಚಾರದಲ್ಲಿ ಇರುವ ಕಹಿ ಭಾವನೆಗಳ ಒಟ್ಟು ಪರಿಣಾಮ ಇಂತಹದೊಂದು ದಿವ್ಯ ನಿರ್ಲಕ್ಷ್ಯಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿತ್ತು. ಇದೇನೆ ಇರಲಿ, ಉತ್ತರ ಕರ್ನಾಟಕದ ಜನ ಏನು ಮಾಡಿದ್ದರು? ಅವರನ್ನೇಕೆ ನೆರವುಗಳಿಂದ ದೂರ ಇಡಲಾಗಿದೆ? ಇದು ಸಾಮಾನ್ಯ ಜನರ ಪ್ರಶ್ನೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯಾಗಿ ಉಳಿದಿತ್ತು.
ಚಕ್ರವರ್ತಿ ಸೂಲಿಬೆಲೆ ಅವರ ಇತ್ತೀಚಿನ ಅಂಕಣ
ಇಂತಹದೊಂದು ಸನ್ನಿವೇಶಕ್ಕೆ ಹೊಸ ತಿರುವುದು ನೀಡಿದ್ದು ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಮೋದಿ ಹೆಸರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಚಕ್ರವರ್ತಿ ಸೂಲಿಬೆಲೆ ಅವರ ಇತ್ತೀಚಿನ ಅಂಕಣ ಬರಹ. ಪ್ರವಾಹ ಪರಿಹಾರ ವಿಚಾರದಲ್ಲಿ ಕರ್ನಾಟಕದ 28 ಸಂಸದರು, ವಿಶೇಷವಾಗಿ ಬಿಜೆಪಿಯ 25 ಸಂಸದರು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.
25 ಇದ್ದದ್ದು 2, 105 ಇದ್ದದ್ದು 10 ಆಗುವ ಮುನ್ನ ಮೋದಿ ಎಚ್ಚೆತ್ತುಕೊಳ್ಳಲಿ
ಮೋದಿ ಚಹರೆಯನ್ನು ಮುಂದಿಟ್ಟುಕೊಂಡು ಬಂದ ಸಮರ್ಥಕರೇ ಹೀಗಳಿಕೆ
ಇಷ್ಟು ದಿನ ಬಿಜೆಪಿ ಹಾಗೂ ಮೋದಿ ಚಹರೆಯನ್ನು ಮುಂದಿಟ್ಟುಕೊಂಡು ಬಂದ ಸಮರ್ಥಕರೇ ಹೀಗಳಿಕೆಗೆ ಇಳಿದಿದ್ದು ಸಹಜವಾಗಿಯೇ ಆಕರ್ಷಣೆಯ ಕೇಂದ್ರವಾಯಿತು. ಮುಖ್ಯವಾಹಿನಿ ಮಾಧ್ಯಮಗಳೂ ಕೂಡ ಸುದ್ದಿಯ ಹಿಂದೆ ಬಿದ್ದವು. ಕೇಂದ್ರ ಸರಕಾರದ ವಿರುದ್ಧ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದದ್ದು ಬಿಜೆಪಿ ಮುಖಂಡರ, ಜನಪ್ರತಿನಿಧಿಗಳ ಹೇಳಿಕೆಗಳು.
ಪ್ರತಾಪ್ ಸಿಂಹ ಮಾಮೂಲಿಯಂತೆಯೇ ಸರಕಾರದ ಸಮರ್ಥನೆ
ಒಂದು ಕಡೆ ಕಾನೂನು ಸಚಿವ ಮಾಧುಸ್ವಾಮಿ ಮತ್ತೊಂದೆಡೆ ಸಂಸದ ಪ್ರತಾಪ್ ಸಿಂಹ ಮಾಮೂಲಿಯಂತೆಯೇ ಸರಕಾರದ ಸಮರ್ಥನೆಗೆ ಇಳಿದರು. ಆದರೆ ಪರಿಸ್ಥಿತಿಯ ಸೂಕ್ಷ್ಮತೆ ಬದಲಾದ ಹೊತ್ತಿನಲ್ಲಿ ಅವರುಗಳು ಇನ್ನಿಲ್ಲದಂತೆ ಟೀಕೆಗಳನ್ನು ಎದುರಿಸಬೇಕಾಯಿತು. ಸದ್ಯ ಮುಂದಿರುವ ಪ್ರಶ್ನೆ, ಕರ್ನಾಟಕದ ಪ್ರವಾಹದ ವಿಚಾರದಲ್ಲಿ ನಿಜವಾಗಿಯೂ ಯಾರನ್ನು ದೂರಬೇಕು? ಸಂಸದರನ್ನಾ ಅಥವಾ ಪ್ರಧಾನಿ ಮೋದಿ ಅವರನ್ನಾ?
ದಿಕ್ಕು ತಪ್ಪಿದ ಚರ್ಚೆಗಳ ಬದಲಿಗೆ ಬೇಕಿರುವುದು ಪರಿಹಾರದ ಶೀಘ್ರ ವಿತರಣೆ
ಮಹಾರಾಷ್ಟ್ರದ ವಿಚಾರದಲ್ಲಿ ದಕ್ಷಿಣ ಭಾರತ ಇತರೆ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರಕಾರ ತೋರಿಸುವ ಕಾಳಜಿ ಕರ್ನಾಟಕದ ವಿಚಾರದಲ್ಲಿ ಕಾಣದೆ ಇರುವುದಕ್ಕೆ ಅಸಲಿ ಕಾರಣಗಳೇನು ಎಂಬುದನ್ನು ಕಂಡುಕೊಂಡರೆ ಮೇಲಿನ ಪ್ರಶ್ನೆಗಳಿಗೂ ಉತ್ತರ ಸಿಗಬಹುದು. ಇಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಚರ್ಚೆಯನ್ನು ಹುಟ್ಟುಹಾಕಿದ ಮಾತ್ರಕ್ಕೆ ಪ್ರವಾಹದಲ್ಲಿ ನಲುಗಿರುವ ಜನರಿಗೆ ಪರಿಹಾರ ಸಿಗಲಾರದು. ಇಂತಹ ದಿಕ್ಕು ತಪ್ಪಿದ ಚರ್ಚೆಗಳ ಬದಲಿಗೆ ಬೇಕಿರುವುದು ಪರಿಹಾರದ ಶೀಘ್ರ ವಿತರಣೆ.
ಮೋದಿ ವಿರುದ್ಧ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದದ್ದು ಬಿಜೆಪಿ ಮುಖಂಡರೇ, ಹೊರತು ಬೇರಾರಲ್ಲ
ಒಂದು ಅಂದಾಜಿನ ಪ್ರಕಾರ ಕರ್ನಾಟಕದ ಪ್ರವಾಹದಿಂದ ಆಗಿರುವ ಒಟ್ಟು ನಷ್ಟ ಸುಮಾರು 30 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಅರ್ಧದಷ್ಟಾದರೂ ಕೇಂದ್ರ ಸರಕಾರ ಬಿಡುಗಡೆ ಮಾಡಬೇಕಿದೆ. ಅದಕ್ಕಾಗಿ ಒತ್ತಾಯಿಸುವುದು ಎದುರಿಗಿರುವ ತುರ್ತು ಅಗತ್ಯ. ಅದನ್ನು ಬಿಟ್ಟು ಸಂಸದರು ಕೆಲಕ್ಕೆ ಬಾರದವರು ಎಂದು ದಿಕ್ಕು ತಪ್ಪಿದ ಚರ್ಚೆಯನ್ನು ಮುಂದಿವರಿಸಿದರೆ ಅದು ಉತ್ತರ ಕರ್ನಾಟಕದ ನಲುಗಿರುವ ಜನರಿಗೆ ಗಾಯದ ಮೇಲೆ ಬೆರೆ ಎಳೆದಂತಾಗುತ್ತದೆ ಅಷ್ಟೆ. ಮತ್ತು, ಇದಕ್ಕೆ ಕಾಳಜಿಗಿಂತ ರಾಜಕೀಯವೇ ಹೆಚ್ಚಿರುವ ಅನುಮಾನ ಬಲವಾಗುತ್ತದೆ.