ಯೋಗೇಶ್ವರ್ ಗೆ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಹಠ ಸಾಧಿಸುತ್ತಿರುವುದಕ್ಕೆ ಇದೊಂದೇ ಕಾರಣ
2018ರ ಅಸೆಂಬ್ಲಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ದಿನದಿಂದ ಇಂದಿನವರೆಗೆ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಸದಾ ಸುದ್ದಿಯಲ್ಲಿರುವುದು ಅಭಿವೃದ್ದಿ ಕುರಿತಾದ ಕೆಲಸಕ್ಕಲ್ಲ, ಬದಲಿಗೆ, ಸದಾ ಒಂದಲ್ಲಾ ಒಂದು ತನ್ನ ರಾಜಕೀಯ ಚಟುವಟಿಕೆಯಿಂದ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಆರಂಭದ ದಿನದಿಂದಲೇ ರೆಬೆಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಜಾರಕಿಹೊಳಿಗೆ, ಪ್ರಮುಖವಾಗಿ, ವಿರೋಧವಿದ್ದದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ.
ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನದ ಲಾಬಿ: ಕವಲು ದಾರಿಯತ್ತು ರಾಜ್ಯ ಬಿಜೆಪಿ
ಈಗ, ಬಿಎಸೈ ಸರಕಾರದಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದರೂ, ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವಂತಾಗಲು, ಮೇಲಿಂದ ಮೇಲೆ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ, ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ.
ಬಿಎಸೈ ಸರಕಾರ ಬರಲು ಸಿ.ಪಿ.ಯೋಗೇಶ್ವರ್ ಅವರೂ ಕೂಡಾ ಕಾರಣ ಎಂದಿರುವ ಜಾರಕಿಹೊಳಿ, "ಯೋಗೇಶ್ವರ್ ನನ್ನ ಸ್ನೇಹಿತರು, ಅವರಿಗೆ ಸಚಿವ ಸ್ಥಾನ ಸಿಗಲು ನಾನು ಪ್ರಯತ್ನ ಪಡದಿದ್ದರೆ ಅದು ತಪ್ಪಾಗುತ್ತದೆ"ಎನ್ನುವ ನೇರ ಹೇಳಿಕೆಯನ್ನು ಜಾರಕಿಹೊಳಿ ನೀಡಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ಇದನ್ನು ಬೇರೆ ರೀತಿಯಲ್ಲೇ ವ್ಯಾಖ್ಯಾನಿಸಲಾಗುತ್ತಿದೆ.
ಸೋನಿಯಾ ಗಾಂಧಿ ಬೇಕಿದ್ದರೆ ಬಿಜೆಪಿಗೆ ಬರ್ತಾರೆ, ಹುಕ್ಕೇರಿ ಬರಲ್ಲ!
ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ದ್ವೇಷ
ಬೆಳಗಾವಿಯ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಆರಂಭವಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ದ್ವೇಷ ಈಗ ಯಾವ ಮಟ್ಟಿಗೆ ಬೆಳೆದು ನಿಂತಿದೆ ಎನ್ನುವುದು ಗೊತ್ತಿರುವ ವಿಚಾರ. ಕುಮಾರಸ್ವಾಮಿ ಸರಕಾರದಲ್ಲಿ ಡಿಕೆಶಿ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಜಾರಕಿಹೊಳಿ ಗಿಟ್ಟಿಸಿಕೊಂಡಿದ್ದರು.
ಸದಾಶಿವ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ
ಇಷ್ಟಲ್ಲದೇ, ರಮೇಶ್ ಜಾರಕಿಹೊಳಿ ಬೆಂಗಳೂರಿನ, ಸದಾಶಿವ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಈ ಮನೆ, ಡಿ.ಕೆ.ಶಿವಕುಮಾರ್ ಅವರ ಮನೆಯ ಹಿಂದಿನ ಮನೆ. ರೆಡಿಯಾಗಿದ್ದ ಮನೆಗೆ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿ, ರಾಜಧಾನಿಯಲ್ಲಿನ ತಮ್ಮ ರಾಜಕೀಯವನ್ನು ಜಾರಕಿಹೊಳಿ ಇಲ್ಲಿಂದಲೇ ನಡೆಸುತ್ತಿದ್ದಾರೆ.
ಶತ್ರುವಿನ ಶತ್ರು ಮಿತ್ರ
ಶತ್ರುವಿನ ಶತ್ರು ಮಿತ್ರ ಎನ್ನುವಂತೆ, ಡಿಕೆಶಿ ಕುಟುಂಬಕ್ಕೂ ಸಿ.ಪಿ.ಯೋಗೇಶ್ವರ್ ನಡುವಿನ ಸಂಬಂಧ ಅಷ್ಟಕಷ್ಟೇ. ಪಕ್ಷ ಯಾವುದೇ ಇರಲಿ, ಸದಾ ಡಿಕೆಶಿ ವಿರೋಧಿಯಾಗಿಯೇ ಯೋಗೇಶ್ವರ್ ತಮ್ಮನ್ನು ಗುರುತಿಸಿಕೊಂಡಿರುವುದೇ ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸಲು ಕಾರಣ ಎಂದು ಹೇಳಲಾಗುತ್ತಿದೆ.
Recommended Video
ಡಿ.ಕೆ.ಶಿವಕುಮಾರ್ ಅವರ ಕಟ್ಟಾ ವಿರೋಧಿ ಎನ್ನುವ ಕಾರಣ
ಹಾಗಾಗಿ, ಯೋಗೇಶ್ವರ್ ತನ್ನ ಗೆಳೆಯ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಗಿಂತ ಜಾಸ್ತಿ, ಅವರು ಡಿ.ಕೆ.ಶಿವಕುಮಾರ್ ಅವರ ಕಟ್ಟಾ ವಿರೋಧಿ ಎನ್ನುವ ಕಾರಣಕ್ಕಾಗಿಯೇ, ಸಿಪಿವೈ ಅವರಿಗೆ ಸಚಿವ ಸ್ಥಾನ ಕೊಡಿಸಲು ಜಾರಕಿಹೊಳಿ ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾತು ರಾಜ್ಯ ರಾಜಕೀಯದಲ್ಲಿ ಓಡಾಡುತ್ತಿದೆ.