ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ?
ಟಿಪ್ಪು ಜಯಂತಿ ಆಚರಣೆಯ ಪರವಿರೋಧ ಚರ್ಚೆ ತಾರಕಕ್ಕೇರಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಇದಕ್ಕೆ ಕಾರಣ, 2015ರಲ್ಲಿ ಟಿಪ್ಪು ಜಯಂತಿ ಆಚರಣೆಗೆ ನಾಂದಿ ಹಾಡಿದ್ದು ಅವರು ಸಿಎಂ ಆಗಿದ್ದ ವೇಳೆ.
ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ನಡೆದುಕೊಂಡು ಬರುತ್ತಿದ್ದ ಈ ಜಯಂತಿ, ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ರದ್ದು ಮಾಡಿದರು. ಈ ವರ್ಷದ (ನವೆಂಬರ್ 10) ಜಯಂತಿಯನ್ನು ಸಿಎಂ ಯಡಿಯೂರಪ್ಪ, ಅಧಿಕೃತ ಸರಕಾರೀ ಕಾರ್ಯಕ್ರಮವಲ್ಲ ಎಂದು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ.
ಈ ವಿದ್ಯಮಾನಕ್ಕೆ ತುಪ್ಪ ಸುರಿಯುವಂತೆ, ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಮತ್ತೆ ಟಿಪ್ಪು ಸುಲ್ತಾನ್ ವಿಚಾರವನ್ನು ಎಳೆದು ತಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ, ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಸವಿತಾ ಸಮಾಜದ ಅಭಿವೃದ್ದಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ: ಡಿಸಿಎಂ ಅಶ್ವಥ್
"ಟಿಪ್ಪು ಸುಲ್ತಾನ್ ನಿಂದಾಗಿ ಮೇಲುಕೋಟೆಯಲ್ಲಿ ಇಂದಿಗೂ ಕತ್ತಲು ದೀಪಾವಳಿಯನ್ನು ಆಚರಿಸಲಾಗುತ್ತಿದೆ" ಎಂದು ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ. ಯಾವ ಕಾರಣಕ್ಕೆ ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲ, ಮುಂದೆ ಓದಿ..
700 ಜನ ಅಯ್ಯಂಗಾರ್ ಸಮುದಾಯದವರನ್ನು ನೇಣಿಗೆ ಹಾಕಿದ ದಿನ
"ನವೆಂಬರ್ ಇಪ್ಪತ್ತು ಟಿಪ್ಪು ಸುಲ್ತಾನ್ ನಿಜವಾದ ಜನ್ಮದಿನ, ಆದರೆ ಸರಕಾರ ನವೆಂಬರ್ ಹತ್ತರಂದು ಜಯಂತಿ ಆಚರಿಸಿಕೊಂಡಿದೆ. ನವೆಂಬರ್ ಹತ್ತರಂದು ಟಿಪ್ಪು ಸುಲ್ತಾನ್ ಮೇಲುಕೋಟೆಯ 700 ಜನ ಅಯ್ಯಂಗಾರ್ ಸಮುದಾಯದವರನ್ನು ನೇಣಿಗೆ ಹಾಕಿದ ದಿನ. ಹಾಗಾಗಿ ಈಗಲೂ ಮೇಲುಕೋಟೆಯ ಅಯ್ಯಂಗಾರ್ ಸಮುದಾಯದವರು ದೀಪಾವಳಿ ಹಬ್ಬ ಆಚರಿಸುವ ಕ್ರಮವಿಲ್ಲ" ಎಂದು ಸೂರ್ಯನಾರಾಯಣ ರಾವ್ ಎನ್ನುವವರು ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು.
2 ಶತಮಾನಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ
"2 ಶತಮಾನಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ, ಮತಾಂಧ ಟಿಪ್ಪು ಸುಲ್ತಾನನ ಕ್ರೌರ್ಯ , ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 800 ಮುಗ್ಧ ಜನರು ಬಲಿಯಾದರು. ದೇಶದೆಲ್ಲೆಡೆ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದರೆ, ನಮ್ಮ ರಾಜ್ಯದ ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮವಿಲ್ಲದೇ ಕತ್ತಲು ಆವರಿಸುತ್ತಿರುತ್ತದೆ" ಡಿಸಿಎಂ ಅಶ್ವಥ್ ನಾರಾಯಣ್ ಮಾಡಿರುವ ಟ್ವೀಟ್.
ಈ ಹೃದಯವಿದ್ರಾವಕ ಘಟನೆ
"ಈ ಹೃದಯವಿದ್ರಾವಕ ಘಟನೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಾರದು, ನಮ್ಮ ಸಾಮೂಹಿಕ ನೆನಪಿನಿಂದ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ" ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ಹಿಂದು ಮುಸ್ಲಿಮರಿಗೆ ಜಗಳ ಇಡುವ ಕೆಲಸ
"ನೀವು ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಉನ್ನತ ಹುದ್ದೆಯಲ್ಲಿದ್ದ ಹಿಂದು ಮುಸ್ಲಿಮರಿಗೆ ಜಗಳ ಇಡುವ ಕೆಲಸವನ್ನು ಮಾಡುತ್ತೀರಿ , ಕಾನೂನು ಕಾಯಬೇಕಾದವರು ಹಿಂಸೆಗೆ ಪ್ರಚೋದಿಸುವಂತಿದೆ, ಮೊದಲು ಮೋದಿಯಿಂದ ನೆರೆಪರಿಹಾರ ಹಣ ತರಿಸಿ, ಸರ್ಕಾರ ನಡೆಸಲು ಯಡಿಯೂರಪ್ಪ ಅವರಿಗೆ ಸ್ವತಂತ್ರ ಕೊಡಿ..." ಡಿಸಿಎಂ ಟ್ವೀಟಿಗೆ ಬಂದಿರುವ ರಿಪ್ಲೈ.
ಕೇವಲ ಎರಡು ಶತಮಾನವೇಕೆ ಶಿಲಾಯುಗ ತನಕ ಹೋಗಿ ಬಿಡಿ
"ಕೇವಲ ಎರಡು ಶತಮಾನವೇಕೆ ಶಿಲಾಯುಗ ತನಕ ಹೋಗಿ ಬಿಡಿ. ಆಗ ಇನ್ನಷ್ಟು ಹಬ್ಬ ಹರಿದಿನಗಳು ಆಚರಣೆ ಮಾಡೋದು ಉಳಿಯುತ್ತದೆ. ನಾನಂತೂ ಶೃಂಗೇರಿಯನ್ನು ಮತ್ತು ಶಾರದಾಂಬೆಯ ಪೀಠವನ್ನು ಟಿಪ್ಪು ರಕ್ಷಿಸಿದ. ಜೊತೆಗೆ, ಆಗಿನ ಶ್ರೀಗಳಿಗೆ ರಕ್ಷಣೆ ಕೊಟ್ಟ . ದಾಖಲಾದ ಈ ಐತಿಹಾಸಿಕ ಸತ್ಯವನ್ನು ನೆನೆದು ಎರಡು ಪಟಾಕಿ extra ಹೊಡೆಯುತ್ತಿದ್ದೇನೆ" ಡಿಸಿಎಂ ಟ್ವೀಟಿಗೆ ಬಂದಿರುವ ಇನ್ನೊಂದು ರಿಪ್ಲೈ.