ಕರ್ನಾಟಕದಲ್ಲಿ "ಸೋರುತಿಹುದು ಸರ್ಕಾರದ ಮಾಳಿಗೆ, ಅಜ್ಞಾನದಿಂದ"?
ಬೆಂಗಳೂರು, ಜುಲೈ.23: ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ, ಸೋರುತಿಹುದು ಮನೆಯ ಮಾಳಿಗೆ- ಸಂತ ಶಿಶುನಾಳ ಶರೀಫರ ಈ ತತ್ವಪದವನ್ನು ಸರ್ಕಾರಕ್ಕೆ ಅರ್ಥೈಸುವಂತಾ ಕಾಲ ಎದುರಾದಂತೆ ತೋರುತ್ತಿದೆ.
Recommended Video
ರಾಜ್ಯದಲ್ಲಿ ಈ ಮೊದಲು ಪ್ಲೇಗ್, ಕಾಲರಾದಂತಾ ಮಹಾಮಾರಿಗಳು ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ ಜನರಲ್ಲಿ ಜ್ಞಾನವನ್ನು ಮೂಡಿಸಿದ್ದು ಇದೇ ಸಂತ ಶಿಶುನಾಳ ಶರೀಫರ ತತ್ವಪದಗಳು. ಅಂದು ಸಂತರು ಸಾರಿದ ಸಂದೇಶವನ್ನು ಕರ್ನಾಟಕದ ಸರ್ಕಾರ ಇಂದು ಮನದಟ್ಟು ಮಾಡಿಕೊಳ್ಳುವಂತಾ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪ್ರತಿಪಕ್ಷಗಳ ಜೊತೆಗೆ ಪರಿಸ್ಥಿತಿಯು ಮೇಲಿಂದ ಮೇಲೆ ಎಚ್ಚರಿಕೆಯನ್ನು ನೀಡುತ್ತಿದೆ.
ರಾಜ್ಯಾದ್ಯಂತ ಲಾಕ್ಡೌನ್: ಸಿಎಂ ಕೊಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ!
ಕರ್ನಾಟಕದಲ್ಲಿ ಸಾಲು ಸಾಲಾಗಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಸಾವಿರದಿಂದ ಸಾವಿರಕ್ಕೆ ಜಿಗಿಯುತ್ತಿವೆ. ರಾಜ್ಯದಲ್ಲಿ ಲಾಕ್ ಡೌನ್ ಒಂದೇ ಪರಿಹಾರವಲ್ಲ ಎನ್ನುತ್ತಿರುವ ಸರ್ಕಾರವು ಸಂಪನ್ಮೂಲ ಕ್ರೂಢೀಕರಣವೊಂದು ಮುಖ್ಯ ಧ್ಯೇಯ ಎಂದು ಹೇಳುತ್ತಿದೆ. ಮುಖ್ಯಮಂತ್ರಿಗಳೇ ಹೇಳಿದ ಮಾತುಗಳನ್ನು ಸಾರ್ವಜನಿಕರು ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಜನರನ್ನು ಇಂದಿಗೂ ಕಾಡುತ್ತಿದೆ.
ಗೊಂದಲ ಮೂಡಿಸುತ್ತಿರುವುದೇಕೆ ನಾಯಕರ ಹೇಳಿಕೆಗಳು?
ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ಕಟ್ಟಿ ಹಾಕುವುದಕ್ಕೆ ಆರಂಭದಲ್ಲಿ ಲಾಕ್ ಡೌನ್ ಒಂದು ತರನಾದ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಇಂದಿಗೂ ರಾಜ್ಯದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಮತ್ತು ಶ್ರೀರಾಮನಗರದಂತಾ ಕಂಟೇನ್ಮೆಂಟ್ ಝೋನ್ ಗಳಲ್ಲಿ ಜುಲೈ.31ರವರೆಗೂ ಲಾಕ್ ಡೌನ್ ವಿಸ್ತರಣೆ ಆಗಲಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲರು ಸ್ಪಷ್ಟವಾಗಿ ಹೇಳಿದ್ದಾರೆ. ಅದೇ ನಿಟ್ಟಿನಲ್ಲಿ ಕ್ರಮಗಳನ್ನೂ ತೆಗೆದುಕೊಂಡಿದ್ದಾರೆ. ಆದರೆ ಅದಾಗಿ ಮೂರು ದಿನಗಳಲ್ಲೇ ಸರ್ಕಾರ ಉಲ್ಟಾ ಹೊಡೆದಿದೆ.
ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವಂತಿಲ್ಲ
ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಟಾಸ್ಕ್ ಫೋರ್ಸ್ ಇದೆ. ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಏನೇ ಆದರೂ ಸರಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಮಾತನಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿಕೆ ನೀಡಿದ್ದು ಆಗಿದೆ. ಸಿಎಂ ಆದೇಶ ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶದ ನಡುವೆ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿ ವರ್ಗದ ಸಂಕಟ ಅನುಭವಿಸುವಂತಾ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎನ್ನುವ ಆರೋಪಗಳು ಕೂಡಾ ಕೇಳಿ ಬರುತ್ತಿವೆ.
ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಣಕ್ಕೆ ಮೊದಲ ಆದ್ಯತೆ
ಕೊರೊನಾವೈರಸ್ ಸೋಂಕಿಗೆ ಹೆದರಿ ಪದೇ ಪದೆ ಲಾಕ್ ಡೌನ್ ಘೋಷಿಸಿದರೆ ಆರ್ಥಿಕ ವಹಿವಾಟು ಸ್ಥಗಿತಗೊಳ್ಳುತ್ತದೆ. ಇದರಿಂ ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಹಾಮಾರಿಯು ಮನೆ ಮನೆಗೂ ಲಗ್ಗೆ ಇಡುತ್ತಿರುವಂತಾ ಸಂದಿಗ್ಧ ಪರಿಸ್ಥಿತಿಯಲ್ಲಿ ಅದನ್ನು ಕಟ್ಟಿ ಹಾಕುವ ಬಗ್ಗೆ ಆಲೋಚಿಸುವ ಬದಲು ಸಂಪನ್ಮೂಲ ಕ್ರೂಢೀಕರಣವೇ ಅನಿವಾರ್ಯ ಎನ್ನುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನೀಡಿದ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.
ರಾಜ್ಯದಲ್ಲಿ 24 ಗಂಟೆಗಳಲ್ಲೇ 4764 ಜನರಿಗೆ ಕೊರೊನಾವೈರಸ್!
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 4,764 ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಖಾತ್ರಿಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 55 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 75,833ಕ್ಕೆ ಏರಿಕೆಯಾಗಿದ್ದು, 47,069 ಸಕ್ರಿಯ ಸೋಂಕಿತ ಪ್ರಕರಣಗಳಿವೆ. ಒಟ್ಟು 27,339 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.