ಹಠಾತ್ತನೆ ಕಾಂಗ್ರೆಸ್ ಶಾಸಕರು ರೆಸಾರ್ಟ್ಗೆ ಹೋಗಿದ್ದೇಕೆ?
ಬೆಂಗಳೂರು, ಜನವರಿ 18: ಬಿಜೆಪಿಯ ಆಪರೇಷನ್ ಕಮಲ ಮಕಾಡೆ ಮಲಗಿತು. ಯಡಿಯೂರಪ್ಪ ಅವರು ಸಹ ತಣ್ಣಗಾಗಿ ಬೆಂಗಳೂರಿಗೆ ವಾಪಸ್ಸಾದರು ಎಲ್ಲವೂ ಸರಿ ಹೋಯಿತು ಎಂದುಕೊಳ್ಳುತ್ತಿರುವ ಹೊತ್ತಿಗೆ ಹಠಾತ್ತಾಗಿ ಕಾಂಗ್ರೆಸ್ ಪಕ್ಷದ ಶಾಸಕರು ರೆಸಾರ್ಟ್ ಕಡೆ ಮುಖ ಮಾಡಿದ್ದಾರೆ.
ಬಿಜೆಪಿಯ ಕೆಲವು ಶಾಸಕರು ಇನ್ನೂ ದೂರದ ಹರಿಯಾಣ ರಾಜ್ಯದ ಗುರುಗ್ರಾಮದ ರೆಸಾರ್ಟ್ನಲ್ಲಿ ಮೋಜು ಮಾಡುತ್ತಿರುವ ಹೊತ್ತಿನಲ್ಲಿಯೇ ಇತ್ತಕಡೆ ಕಾಂಗ್ರೆಸ್ ಪಕ್ಷದ 76 ಶಾಸಕರು ರೆಸಾರ್ಟ್ನತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಗೆ ರಾಜ್ಯದ ಜನ ಮತಚಲಾಯಿಸಿ ಆಯ್ಕೆ ಮಾಡಿದ್ದ ಶಾಸಕರಲ್ಲಿ ಮುಕ್ಕಾಲುವಾಸಿ ಶಾಸಕರು ರೆಸಾರ್ಟ್ನಲ್ಲಿ ಕಾಲಕಳೆಯುತ್ತಿದ್ದಾರೆ.
ಲಫಂಗ ರಾಜಕಾರಣ ಎನ್ನುವ ಸಿದ್ದು ಗೈರಾದವರ ವಿರುದ್ಧ ಏನು ಕ್ರಮ ಜರುಗಿಸುತ್ತಾರೆ?
'ಯಡಿಯೂರಪ್ಪ ಅವರ ಆಪರೇಷನ್ ಠುಸ್ಸಾಗಿದೆ' ಎಂದು ಸಿದ್ದರಾಮಯ್ಯ ನಿನ್ನೆಯಷ್ಟೆ ಮಾಧ್ಯಮಗಳ ಮುಂದೆ ವ್ಯಂಗ್ಯ ಮಾಡಿದ್ದರು, ಕುಮಾರಸ್ವಾಮಿ ಅವರು, 'ಸಂ'ಕ್ರಾಂತಿ' ಮಾಡಲು ಸಂ'ಭ್ರಾಂತಿ' ಮಾಡಿಕೊಂಡಿದೆ ಬಿಜೆಪಿ' ನಗೆ ಆಡಿ ಬಿಜೆಪಿಯ ರೆಸಾರ್ಟ್ ರಾಜಕೀಯ ಪ್ರಯತ್ನಗಳು ವಿಫಲವಾಗಿವೆ ಎಂದು ಇಬ್ಬರೂ ನಾಯಕರು ಹೇಳಿದ್ದರು. ಹಾಗಿದ್ದ ಮೇಲೆ ಹೀಗೆ ತುರ್ತಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತಿದೆ.
ಆರು ಕೈ ಶಾಸಕರು ಬಿಜೆಪಿ ಸಂಪರ್ಕದಲ್ಲಿ?
ಮೂಲಗಳ ಪ್ರಕಾರ ಕಾಂಗ್ರೆಸ್ ಸಿಎಲ್ಪಿ ಸಭೆಗೆ ಗೈರಾದ ನಾಲ್ವರು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಜೊತೆಗೆ ಸಿಎಲ್ಪಿ ಸಭೆಗೆ ಹಾಜರಾದ ಇಬ್ಬರು ಶಾಸಕರೂ ಸಹ ಇನ್ನೂ ಬಿಜೆಪಿಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗುತ್ತಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, ಶಾಸಕರು ರೆಸಾರ್ಟ್ಗೆ
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸದಸ್ಯತ್ವ ರದ್ದು ಸಾಧ್ಯತೆ
ಸಿಎಲ್ಪಿ ಸಭೆಗೆ ಗೈರಾದ ರಮೇಶ್ ಜಾರಕಿಹೊಳಿ ಅವರ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವ ರದ್ದು ಮಾಡುವ ಆಲೋಚನೆ ಇದ್ದು, ಹಾಗೊಂದು ವೇಳೆ ಸದಸ್ಯತ್ವ ರದ್ದು ಮಾಡಿದರೆ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗ ಶಾಸಕರನ್ನು ಸೆಳೆಯಲು ಹಿಂದಿಗಿಂತಲೂ ಹೆಚ್ಚಿನ ಬಲ ಹಾಕಲಿದ್ದಾರೆ ಹಾಗಾಗಿ ರೆಸಾರ್ಟ್ಗೆ ಕರೆದುಕೊಂಡು ಹೋಗಿ ಶಾಸಕರನ್ನೆಲ್ಲಾ ಭದ್ರ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಸಭೆಗೆ ಗೈರಾದವರಿಗೆ ಷೋಕಾಸ್ ನೋಟಿಸ್: ದಿನೇಶ್ ಗುಂಡೂರಾವ್
ರಾಹುಲ್ ಗಾಂಧಿ ಖಡಕ್ ಸೂಚನೆ
ಬಿಜೆಪಿಯ ಆಪರೇಷನ್ ಕಮಲವನ್ನು ಯಾವುದೇ ಹಂತದಲ್ಲಾದರೂ ಛಿದ್ರಗೊಳಿಸಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಖಡಕ್ ಸೂಚನೆ ನೀಡಿದ್ದಾರೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿಯೂ ಕಾಂಗ್ರೆಸ್ ಈ ನಿರ್ಣಯ ಕೈಗೊಂಡಿದೆ. ಬಿಜೆಪಿಯ ಶಾಸಕರು ಗುರುಗ್ರಾಮದಿಂದ ವಾಪಸ್ ಬರುವವರೆಗೂ ಕಾಂಗ್ರೆಸ್ ಶಾಸಕರು ಸಹ ರೆಸಾರ್ಟ್ನಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?
ಜೆಡಿಎಸ್ ಶಾಸಕರು ಏಕೆ ಹೋಗಿಲ್ಲ
ಪ್ರಸ್ತುತ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮಾತ್ರವೇ ರೆಸಾರ್ಟ್ಗೆ ತೆರಳಿದ್ದು, ಜೆಡಿಎಸ್ ಶಾಸಕರು ರೆಸಾರ್ಟ್ನತ್ತ ಮುಖ ಮಾಡಿಲ್ಲ. ಅದರಲ್ಲಿಯೂ ಕಾಂಗ್ರೆಸ್ನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಿರುವ ಕಾರಣ ಅವರಿಗೆ ಮಾತ್ರವೇ ಬಿಜೆಪಿಯು ಗಾಳ ಹಾಕುತ್ತಿದೆ. ಹಾಗಾಗಿ ಜೆಡಿಎಸ್ ಸದ್ಯಕ್ಕೆ ನಿರಾಳವಾಗಿದೆ.
ಸಿದ್ದರಾಮಯ್ಯ ಹೇಳಿದ್ದೇನು?
ಬಿಜೆಪಿಯು ಆಪರೇಷನ್ ಕಮಲಕ್ಕೆ ಮುಂದಾಗಿದೆ ಹಾಗಾಗಿ ಅವರಿಂದ ಬಚಾವಾಗಲು ನಾವು ರೆಸಾರ್ಟ್ಗೆ ಹೋಗುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ.