ದೊಡ್ಡಬಳ್ಳಾಪುರದಲ್ಲಿ ಆಗಸ್ಟ್ 28ಕ್ಕೆ ಜನೋತ್ಸವ; ಏನಿದು ಬಿಜೆಪಿ ಟೀಮ್ ಸ್ಕೆಚ್?
ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ದಿನವನ್ನು ಗುರುತಿಸುವುದಕ್ಕೆ ಬಿಜೆಪಿಯು ಜನೋತ್ಸವ ಮೆರವಣಿಗೆ ನಡೆಸುವುದಕ್ಕೆ ನಿರ್ಧರಿಸಿದೆ.
ದೊಡ್ಡಬಳ್ಳಾಪುರದಲ್ಲಿ ಆಗಸ್ಟ್ 28ರಂದು ಈ ಜನೋತ್ಸವ ಮೆರವಣಿಗೆ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿರುವುದನ್ನು ಗುರುತಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕಾಂಗ್ರೆಸ್ ನಡಿಗೆ: ನಗರದಲ್ಲಿ ಟ್ರಾಫಿಕ್ ಜಾಮ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಅವರ ಅಧಿಕೃತ ನಿವಾಸದಲ್ಲಿ ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಪ್ರದರ್ಶಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಬೊಮ್ಮಾಯಿ ಸರ್ಕಾರ ವರ್ಷ ಪೂರೈಸಿದ್ದು ಯಾವಾಗ?
ಹಾಗೆ ನೋಡುವುದಾದರೆ ಕಳೆದ ಜುಲೈ 28ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಅಂದೇ ದೊಡ್ಡಬಳ್ಳಾಪುರದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟರ್ ಹತ್ಯೆಯ ಆಕ್ರೋಶದ ನಂತರ ಸಿಎಂ ಬೊಮ್ಮಾಯಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು.
'ಸ್ವಾತಂತ್ರ್ಯ ನಡಿಗೆ' ಕರೆಗೆ 1 ಲಕ್ಷ ಮಂದಿ ಸ್ಪಂದನೆ: ಡಿಕೆ ಶಿವಕುಮಾರ್
ಬಿಜೆಪಿಯಿಂದ ಶಕ್ತಿ ಪ್ರದರ್ಶನದ ಸ್ಕೆಚ್
ದೊಡ್ಡಬಳ್ಳಾಪುರದಲ್ಲಿ ಆಗಸ್ಟ್ 28ರಂದು ಬಿಜೆಪಿಯು ನಡೆಸುವುದಕ್ಕೆ ಹೊರಟಿರುವ ಜನೋತ್ಸವ ಕಾರ್ಯಕ್ರಮವು 2023ರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿ ಶಕ್ತಿ ಪ್ರದರ್ಶನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕ್ರಮಗಳಿಗೆ ತಿರುಗೇಟು ನೀಡುವ ಉದ್ದೇಶದಿಂದಲೂ ಈ ಜನೋತ್ಸವವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಪರಿಗಣಿಸಲಾಗುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ಸಿನಿಂದ ಸಾಲು ಸಾಲು ಕಾರ್ಯಕ್ರಮ
ಕರ್ನಾಟಕದಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸುವುದಕ್ಕೆ ಕಾಂಗ್ರೆಸ್ ಸಾಲು ಸಾಲು ಕಾರ್ಯಕ್ರಮಗಳು ಮತ್ತು ಪಾದಯಾತ್ರೆಗಳನ್ನು ನಡೆಸುತ್ತಿದೆ. ಇದೇ ತಿಂಗಳ ಆರಂಭದಲ್ಲಿ ರಾಜ್ಯದ ಮಧ್ಯಭಾಗದಲ್ಲಿ ಇರುವ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಬೃಹತ್ ಸಮಾವೇಶದ ಮೂಲಕ ಆಯೋಜಿಸಲಾಗಿತ್ತು. ಅಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಹಾಗೂ ಅಭಿಮಾನಿಗಳನ್ನು ಸೇರಿಸಲಾಗಿತ್ತು. ಸಿದ್ದರಾಮೋತ್ಸವದ ಬೆನ್ನಲ್ಲೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಫ್ರೀಡಂ ಮಾರ್ಚ್(ಸ್ವಾತಂತ್ರ್ಯ ನಡಿಗೆ) ಪಾದಯಾತ್ರೆಯನ್ನು ಕೈಗೊಂಡರು. ಈ ಕಾರ್ಯಕ್ರಮದಲ್ಲೂ ಲಕ್ಷಾಂತರ ಜನರು ನೆರೆದಿದ್ದರು.
ಕರ್ನಾಟಕ ಕೇಸರಿ ಟೀಮ್ ಮೇಲೆ ಹೆಚ್ಚಿದ ಒತ್ತಡ
ಕಾಂಗ್ರೆಸ್ ನಡೆಸಿದ ಸಿದ್ದರಾಮೋತ್ಸವ ಮತ್ತು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಂಖ್ಯೆಯು ಬಿಜೆಪಿಯ ಮೇಲೆ ಪರೋಕ್ಷವಾಗಿ ಒತ್ತಡವನ್ನು ಹೆಚ್ಚಿಸಿದೆ. ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಸ್ಥಳೀಯ ನಾಯಕರು ಮತ್ತು ಮುಖಂಡರಿಂದ ಒತ್ತಡವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಜನೋತ್ಸವ ಮೆರವಣಿಗೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಈ ಹಿನ್ನೆಲೆ ನಡೆಸಿದ ಸಬೆಯಲ್ಲಿ ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಹಲವು ಬಿಜೆಪಿ ಮುಖಂಡರು ಭಾಗವಹಿಸಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
Recommended Video