ಕಾಂಗ್ರೆಸ್, ಜೆಡಿಎಸ್ಸಿಗೆ ಅಸ್ತಿತ್ವದ ಪ್ರಶ್ನೆಯ ನಡುವೆ ಮಧ್ಯಂತರ ಚುನಾವಣೆಯ ಜಪ
ಬಿಜೆಪಿಯ ಆಪರೇಶನ್ ಕಮಲದ ಭೀತಿಯೂ ಇಲ್ಲ, ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ನಡುವೆ ಅಂತಹ ಗೊಂದಲವೂ ಇಲ್ಲ. ಆದರೂ, ಮಧ್ಯಂತರ ಚುನಾವಣೆಯ ಜಪ ಎರಡು ದಿನಗಳಿಂದ ಶುರುವಾಗಿದೆ.
ಈಗ ತಾನೇ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಎದುರು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸದ್ಯದ ಮಟ್ಟಿಗೆ ಯಾವ ಚುನಾವಣೆಯೂ ಬೇಕಾಗಿಲ್ಲ. ಆದರೂ, ಜೆಡಿಎಸ್ ವರಿಷ್ಠ ದೇವೇಗೌಡರು ಯಾಕೆ ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ?
ಮಧ್ಯಂತರ ಚುನಾವಣೆ ಗ್ಯಾರಂಟಿ ಎಂದು ದೇವೇಗೌಡರು ಹೇಳಿದ್ದೇಕೆ?
ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ದೇವೇಗೌಡರ ಬಾಯಿಯಿಂದ ಇಂತಹ ಮಾತು ಹೊರಬೀಳುತ್ತಿದೆ ಎನ್ನುವುದು ಎರಡೂ ಪಕ್ಷಗಳ ಜಗಲಿಯಲ್ಲಿ ಹರಿದಾಡುತ್ತಿರುವ ಸುದ್ದಿ.
ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಎಚ್ಡಿಕೆ ಪ್ರತಿಕ್ರಿಯೆ
ದೆಹಲಿ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಪಕ್ಷಗಳ ಮುಖಂಡರ ನಡುವೆ ನಡೆಯುತ್ತಿರುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ, ಕಾದುನೋಡುವ ತಂತ್ರಕ್ಕೆ ಮೊರೆಹೋಗಿದೆ. ಪದೇಪದೇ ಬಿಜೆಪಿ ಮುಖಂಡರು, ನಾವು ಸರಕಾರ ಅಲ್ಲಾಡಿಸುವ ಪ್ರಯತ್ನಕ್ಕೆ ಕೈಹಾಕುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಕೆಪಿಸಿಸಿ ಪುನರ್ ರಚನೆಯ ಹಿಂದೆ, ಎಐಸಿಸಿಯ ಮುಂದಾಲೋಚನೆ
ಕೆಪಿಸಿಸಿ ಪುನರ್ ರಚನೆಯ ಹಿಂದೆ, ಎಐಸಿಸಿಯ ಮುಂದಾಲೋಚನೆ ಅಡಗಿದೆ. ಮುಂದಿನ ಹತ್ತು ತಿಂಗಳೊಳಗೆ ಚುನಾವಣೆ ನಡೆದರೆ, ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ ಎನ್ನುವ ಕಾರಣಕ್ಕಾಗಿಯೇ ಕೆಪಿಸಿಸಿಯ ಎಲ್ಲಾ ಪದಾಧಿಕಾರಿಗಳನ್ನು ಬದಲಾಯಿಸಿದ್ದು ಎನ್ನುವ ಮಾತೂ ಚಾಲ್ತಿಯಲ್ಲಿದೆ. ಹಾಗಿದ್ದಲ್ಲಿ, ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯಲಿದೆಯಾ?
ಸದ್ಯದ ಮಟ್ಟಿಗೆ ಸಮ್ಮಿಶ್ರ ಸರಕಾರಕ್ಕೆ ಅಪಾಯ ಎದುರಾಗುವ ಸಾಧ್ಯತೆ ಕಮ್ಮಿ
ರಾಜ್ಯದ ಮತದಾರ ಇನ್ನೂ ಲೋಕಸಭಾ ಚುನಾವಣೆಯ ಗುಂಗಿನಲ್ಲೇ ಇರುವುದರಿಂದ, ಸದ್ಯದ ಮಟ್ಟಿಗೆ ಸಮ್ಮಿಶ್ರ ಸರಕಾರಕ್ಕೆ ಅಪಾಯ ಎದುರಾಗುವ ಸಾಧ್ಯತೆ ಕಮ್ಮಿ. ಈ ನಡುವೆ, ಮುಂದಿನ ಏಳೆಂಟು ತಿಂಗಳುಗಳಲ್ಲಿ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿ, ಕಾರ್ಯಕರ್ತರನ್ನು ಮತ್ತು ಸ್ಥಳೀಯ ಮುಖಂಡರನ್ನು ಚುರುಕುಗೊಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ ಎನ್ನುವ ಮಾತು ಹರಿದಾಡುತ್ತಿದೆ. ಅಷ್ಟೊತ್ತಿಗೆ ಮತದಾರನ ಚಿತ್ತವೂ ಬದಲಾಗುತ್ತದೆ ಎನ್ನುವುದು ಕಾಂಗ್ರೆಸ್ಸಿನ ಮುಂದಾಲೋಚನೆ.
ದೇವೇಗೌಡರು ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ
ಈ ಸೂಚನೆಯನ್ನು ಅರಿತೋ ಏನೋ, ದೇವೇಗೌಡರು ಮಧ್ಯಂತರ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದೆ, ನಿಖಿಲ್ ಕುಮಾರಸ್ವಾಮಿಯೂ ಕಾರ್ಯಕರ್ತರ ಬಳಿ ಮಾತನಾಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಎಚ್ ವಿಶ್ವನಾಥ್ ಅವರ ಮನವೊಲಿಕೆಯ ಸಂದರ್ಭದಲ್ಲೂ ಗೌಡ್ರು ಮಧ್ಯಂತರ ಚುನಾವಣೆಯ ಮಾತನ್ನಾಡಿದ್ದಾರೆ.
ಅದಕ್ಕಾಗಿಯೇ ಹುಟ್ಟಿದ್ದು ಗ್ರಾಮ ವಾಸ್ತವ್ಯದ ಕಲ್ಪನೆ
ಸದ್ಯಕ್ಕೆ ಮಧ್ಯಂತರ ಚುನಾವಣೆ ನಡೆದರೆ ಜೆಡಿಎಸ್ ಪಕ್ಷಕ್ಕೂ ಅಸ್ತಿತ್ವದ ಪ್ರಶ್ನೆ. ಖುದ್ದು ದೇವೇಗೌಡರೇ ಸೋತಿರುವುದರಿಂದ ಮತ್ತು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯೂ ಸೋಲು ಅನುಭವಿಸಿದ್ದರಿಂದ, ತಮ್ಮ ಬೆಲ್ಟ್ ನಲ್ಲಿ ಹಿನ್ನಡೆಯಾಗುವ ಆತಂಕದಲ್ಲಿ ಜೆಡಿಎಸ್ ಇದೆ. ಸರಕಾರ ಇದ್ದಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಿ, ಹೆಸರು ತೆಗೆದುಕೊಳ್ಳುವುದು ದೇವೇಗೌಡರ ಲೆಕ್ಕಾಚಾರ. ಅದಕ್ಕಾಗಿಯೇ ಹುಟ್ಟಿದ್ದು ಗ್ರಾಮ ವಾಸ್ತವ್ಯದ ಕಲ್ಪನೆ ಎನ್ನುವ ಮಾತು ಕೇಳಿಬರುತ್ತಿದೆ.
ಬಿಜೆಪಿಗೆ ಲಾಭಎನ್ನುವುದನ್ನು ಎರಡೂ ಪಕ್ಷಗಳು ಅರಿತಿವೆ
ಈಗ ಚುನಾವಣೆ ನಡೆದರೆ ಅದರ ಲಾಭ ಬಿಜೆಪಿಗೆ ಎನ್ನುವುದನ್ನು ಎರಡೂ ಪಕ್ಷಗಳು ಅರಿತಿವೆ. ಮೈತ್ರಿ ಪಕ್ಷದಲ್ಲಿ ಭಿನ್ನಮತ ಮೂಡಿ, ಎರಡೂ ಪಕ್ಷಗಳ ಮೇಲೆ ಜನರಿಗೆ ಭ್ರಮನಿರಸನವಾಗಲಿ ಎನ್ನುವುದು ಬಿಜೆಪಿಯ ಲೆಕ್ಕಾಚಾರ ಕೂಡಾ.. ಆದರೆ, ಇವೆಲ್ಲವನ್ನೂ ಅರಿತಿರುವ ಜೆಡಿಎಸ್ ಮತ್ತು ಕಾಂಗ್ರೆಸ್, ಯಾವ ರೀತಿ ಮುಂದಿನ ಹೆಜ್ಜೆಯಿಡಲಿದೆ ಎನ್ನುವುದು ಕಾದುನೋಡಬೇಕಿದೆ.