ಉಪ ಚುನಾವಣೆ; ಜೆಡಿಎಸ್ ಸೋಲಿಗೆ ಕಾರಣಗಳೇನು?
ಬೆಂಗಳೂರು, ಡಿಸೆಂಬರ್ 9: ಕರ್ನಾಟಕದ ಜನರು ಕುತೂಹಲದಿಂದ ಕಾಯುತ್ತಿದ್ದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ 12ರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸರ್ಕಾರವನ್ನು ಉಳಿಸಿಕೊಂಡಿದೆ. ಜೆಡಿಎಸ್ 1 ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ.
ಸೋಮವಾರ 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಬಲ 34ಕ್ಕೆ ಕುಸಿದಿದೆ. ಉಪ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿಲ್ಲ. ಜೆಡಿಎಸ್ 2018ರಲ್ಲಿ ಗೆದ್ದಿದ್ದ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ಶಿವಾಜಿನಗರದಲ್ಲಿ ಗೆದ್ದ ಕಾಂಗ್ರೆಸ್; ಲಕ್ಷ್ಮಣ ಸವದಿಗೆ ಸಂತಸ!
ಡಿಸೆಂಬರ್ 9ರ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಉಪ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ತನ್ನ ಬಲವನ್ನು 117ಕ್ಕೆ ಹೆಚ್ಚಿಸಿಕೊಂಡಿದೆ, ಸರ್ಕಾರ ಭದ್ರವಾಗಿದೆ.
ಉಪ ಚುನಾವಣೆ ಫಲಿತಾಂಶ; ಪ್ರಧಾನಿ ಮೋದಿ ಏನಂದ್ರು?
15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಯಶವಂತಪುರ ಕ್ಷೇತ್ರದಲ್ಲಿ ಟಿ. ಎನ್. ಜವರಾಯಿ ಗೌಡ ಪ್ರಬಲ ಪೈಪೋಟಿ ನೀಡಿ ಸೋತರು. ಜೆಡಿಎಸ್ ಬೆಂಬಲ ನೀಡಿದ್ದ ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ; ಯಾರು, ಏನು ಹೇಳಿದರು?
ಗೆದ್ದ ಕ್ಷೇತ್ರಗಳನ್ನು ಕಳೆದುಕೊಂಡ ಜೆಡಿಎಸ್
2018ರ ಚುನಾವಣೆಯಲ್ಲಿ ಜೆಡಿಎಸ್ ಮಹಾಲಕ್ಷ್ಮೀ ಲೇಔಟ್, ಕೆ. ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಈ ಮೂರು ಕ್ಷೇತ್ರಗಳಲ್ಲಿಯೂ ಸೋತಿದ್ದಾರೆ. ಉಪ ಚುನಾವಣೆ ಸೋಲಿಗೆ ಕಾರಣವೇನು? ಎಂದು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮೈತ್ರಿ ಸರ್ಕಾರ ಮಾಡಿದ್ದೇ ತಪ್ಪಾಯಿತೇ?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಅಸಮಾಧಾನವಿತ್ತು. ರಾಜ್ಯಮಟ್ಟದಲ್ಲಿ ಪಕ್ಷದ ನಾಯಕರು ಒಂದಾದರೂ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಭಿನ್ನಾಭಿಪ್ರಾಯವಿತ್ತು. ಈಗ ಉಪ ಚುನಾವಣೆ ಎದುರಾದಾಗ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ.
ಸ್ಥಿರ ಸರ್ಕಾರಕ್ಕಾಗಿ ಮತ
ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಹಗ್ಗಜಗ್ಗಾಟಗಳನ್ನು ನೋಡಿದ್ದ ಜನರು ಸ್ಥಿರ ಸರ್ಕಾರವಿರಲಿ ಎಂಬ ಕಾರಣಕ್ಕೆ ಬಿಜೆಪಿಗೆ ಬೆಂಬಲ ನೀಡಿದ್ದು, ಜೆಡಿಎಸ್ ಅಭ್ಯರ್ಥಿಗಳಿಗೆ ಸೋಲಾಗಿದೆ. ಜೆಡಿಎಸ್ ಭದ್ರಕೋಟೆಯಾದ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯಲ್ಲಿ ಜೆಡಿಎಸ್ ಸೋಲುವ ಮೂಲಕ ಕಳೆದ ಬಾರಿ ಗೆದ್ದ ಕ್ಷೇತ್ರವನ್ನು ಪಕ್ಷ ಬಿಟ್ಟುಕೊಟ್ಟಿದೆ.
ಮೈತ್ರಿ ಸರ್ಕಾರದ ಹೇಳಿಕೆ
15 ಕ್ಷೇತ್ರದ ಉಪ ಚುನಾವಣೆ ಮತದಾನಕ್ಕೆ ಒಂದು ವಾರ ಇರುವಾಗ ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತೊಮ್ಮೆ ಮೈತ್ರಿ ಸರ್ಕಾರ ರಚನೆ ಮಾಡುವ ಮಾತುಗಳನ್ನು ಆಡಿದರು. ಇದು ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿರುವ ಸಾಧ್ಯತೆ ಇದೆ.