ಜೆಡಿಎಸ್ ಪಕ್ಷ ಬಿಟ್ಟಿದ್ದೇಕೆ? : ಎ.ಎಸ್.ಪಾಟೀಲ ನಡಹಳ್ಳಿ ಪತ್ರ
ವಿಜಯಪುರ, ಮಾರ್ಚ್ 23 : ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇಕೆ? ಎಂದು ಅವರು ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ. ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು ಎಂದು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬುಧವಾರ ಬಿಜೆಪಿ ಸೇರಿದ್ದಾರೆ. ಫೇಸ್ಬುಕ್ನಲ್ಲಿ ಬಿಜೆಪಿ ಸೇರಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಜೆಡಿಎಸ್ ಟಿಕೆಟ್ ಘೋಷಣೆಯಾದ ಬಳಿಕ ಬಿಜೆಪಿ ಸೇರಿದ ನಾಯಕ!
ಜೆಡಿಎಸ್ ಪಕ್ಷ 2018ರ ಚುನಾವಣೆಗೆ ಎ.ಎಸ್.ಪಾಟೀಲ ನಡಹಳ್ಳಿ ಮುದ್ದೇಬಿಹಾಳ ಕ್ಷೇತ್ರದಿಂದ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಟಿಕೆಟ್ ಘೋಷಣೆಯಾದ ಬಳಿಕ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಗೊಂದಲಕ್ಕೆ ತೆರೆ, ಅಧಿಕೃತವಾಗಿ ಬಿಜೆಪಿ ಸೇರಿದ ಎ.ಎಸ್ ಪಾಟೀಲ್ ನಡಹಳ್ಳಿ
'ಜೆಡಿಎಸ್ ಪಕ್ಷದಲ್ಲಿ ಉತ್ತರ ಕರ್ನಾಟಕದ ಟಿಕೆಟ್ ಹಂಚಿಕೆ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಾನು ಪ್ರತಿನಿಧಿಸುವ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ನೀಡಲು ಒಂದು ತಿಂಗಳ ಕಾಲ ನನ್ನನ್ನು ಸತಾಯಿಸಿದರು' ಎಂದು ಎ.ಎಸ್.ಪಾಟೀಲ ನಡಹಳ್ಳಿ ಅವರು ಜೆಡಿಎಸ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಪತ್ರದಲ್ಲೇನಿದೆ?..
ನನ್ನ ನಿರ್ಧಾರದಲ್ಲಿ ಜನಹಿತ ಅಡಗಿದೆ
ಕಳೆದ 10 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಸಾಕಷ್ಟು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಗೆ ಪೂರಕವಾಗಿ ನಡೆದುಕೊಂಡಿದ್ದೇನೆ. ನನ್ನ ಎಲ್ಲಾ ರಾಜಕೀಯ ನಿಲುವು, ನಿರ್ಧಾರಗಳ ಹಿಂದೆ ಜನರ ಹಿತ ಅಡಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಜನಪರ ಹೋರಾಟವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಂಬಿಸಿದರು.
ಆದ್ದರಿಂದ, ಪಕ್ಷದಿಂದ ಹೊರಬಂದ ನಾನು ಕುಮಾರಸ್ವಾಮಿ ಅವರ ಜೊತೆ ಸ್ನೇಹವನ್ನು ಇಟ್ಟುಕೊಂಡೆ. ಕುಮಾರಸ್ವಾಮಿ ಅವರು ಸ್ನೇಹ ಮತ್ತು ವಿಶ್ವಾಸದ ಮಾತುಗಳನ್ನು ಆಡಿದರು. ಉತ್ತರ ಕರ್ನಾಟಕದಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಕಟ್ಟಲು ಸಹಕಾರ ನೀಡುವುದಾಗಿ ಹೇಳಿದರು.
ಕುಮಾರಸ್ವಾಮಿ ಅವರ ಮಾತಿನ ಲಹರಿ ಬದಲಾಯಿತು
ದೇವರಹಿಪ್ಪರಗಿ ಮತ್ತು ಮುದ್ದೇಬಿಹಾಳ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ನಿಮ್ಮ ಮಾತು ಅಂತಿಮ ಎಂಬ ಭರವಸೆಯನ್ನು ಕುಮಾರಸ್ವಾಮಿ ನೀಡಿದ್ದರು. ಅವರ ಮಾತನ್ನು ಅತಿಯಾಗಿ ನಂಬಿದ ನಾನು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಲು ತನು, ಮನ, ಧನವನ್ನು ವ್ಯಯಿಸಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕುಮಾರಸ್ವಾಮಿ ಅವರ ಮಾತಿನ ಲಹರಿ ಬದಲಾಯಿತು. ಉತ್ತರ ಕರ್ನಾಟಕದ ಟಿಕೆಟ್ ಹಂಚಿಕೆ ವಿಚಾರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ದೇವರಹಿಪ್ಪರಗಿ ಕ್ಷೇತ್ರದ ಟಿಕೆಟ್ ನೀಡಲು ಒಂದು ತಿಂಗಳ ಅವಕಾಶ ತೆಗೆದುಕೊಂಡರು. ಕೊಟ್ಟಮಾತಿನಂತೆ ನಡೆದುಕೊಳ್ಳದವರ ಜೊತೆ ರಾಜಕೀಯವಾಗಿ ಮುಂದುವರೆಯುವುದು ಮೂರ್ಖತನ ಎಂಬ ನಿಲುವಿಗೆ ಬಂದೆ.
ನೋವುಗಳನ್ನು ನುಂಗಿಕೊಂಡೆ
ನಾನು ಹಲವಾರು ನೋವುಗಳನ್ನು ನುಂಗಿಕೊಂಡೆ ಈ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ದೇವರಹಿಪ್ಪರಗಿ ಮತ್ತು ಮುದ್ದೇಬಿಹಾಳ ಕ್ಷೇತ್ರದ ಸಮೀಕ್ಷೆ ನಡೆಸಿದವು. ಎ.ಎಸ್.ಪಾಟೀಲ ನಡಹಳ್ಳಿ ಜನಪ್ರಿಯ ನಾಯಕ ಎಂಬ ಫಲಿತಾಂಶ ಬಂದಿತು. ನನ್ನ ಜನಪರ ಹೋರಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿತು.
ನನ್ನ ವ್ಯಕ್ತಿತ್ವ ಮತ್ತು ಘಟನೆಗೆ ತಕ್ಕ ಸ್ಥಾನಮಾನ ನೀಡುವ ಭರವಸೆ ಇದೆ. ಕಾಂಗ್ರೆಸ್ ಪಕ್ಷದಿಂದ ದೂರಸರಿದಾಗ ಬಿಜೆಪಿ ಸೇರಬೇಕು ಎಂದು ಪ್ರಯತ್ನ ಪಟ್ಟಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ಪಕ್ಷ ನನ್ನ ನಾಯಕತ್ವದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಆಹ್ವಾನಿಸಿದಾಗ ನಾನು ಸಂತೋಷದಿಂದ ಒಪ್ಪಿಕೊಂಡೆ.
ಬಿಜೆಪಿಯ ಕಾರ್ಯಕರ್ತ
ಈಗ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನ ರಾಜಕೀಯ ಜೀವನ ಇರುವ ತನಕ ಬಿಜೆಪಿ ಪಕ್ಷದಲ್ಲಿ ಮುಂದುವರೆಯುವೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಕಟ್ಟಲು ಶ್ರಮಿಸುವೆ. ನನ್ನ ನಿರ್ಧಾರ ಕೆಲವರ ಮನಸ್ಸಿಗೆ ನೋವು ತಂದಿದ್ದರೆ ಅಂತಹ ಕಾರ್ಯಕರ್ತರ ಮನವೊಲಿಸಿ ಜೊತೆಗೆ ಕರೆದುಕೊಂಡು ಹೋಗುವೆ.
ಎರಡು ದಿನಗಳಿಂದ ನನ್ನ ರಾಜಕೀಯ ವಿರೋಧಿಗಳು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಇಂತಹ ಕುತಂತ್ರವನ್ನು ಯಾರು ನಂಬಬಾರದು ಎಂದು ವಿನಂತಿ ಮಾಡುತ್ತೇನೆ.
ಎ.ಎಸ್.ಪಾಟೀಲ ನಡಹಳ್ಳಿ ಪತ್ರ
ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇಕೆ? ಎಂದು ಎ.ಎಸ್.ಪಾಟೀಲ ನಡಹಳ್ಳಿ ಪತ್ರದಲ್ಲಿ ವಿವರಣೆ ನೀಡಿದ್ದಾರೆ.