ಸಿಎಲ್ಪಿ ಸಭೆಗೆ ಗೈರು; ಗಾಳಿ ಸುದ್ದಿ ತಳ್ಳಿಹಾಕಿದ ಪರಮೇಶ್ವರ
ಬೆಂಗಳೂರು, ಸೆಪ್ಟೆಂಬರ್ 20 : ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಗೈರಾಗಿದ್ದರು. ಸಿದ್ದರಾಮಯ್ಯ ಬಗ್ಗೆ ಅಸಮಾಧಾನಗೊಂಡಿರುವ ಅವರು ಗೈರಾಗಿದ್ದಾರೆ ಎಂಬ ವಿಶ್ಲೇಷಣೆ ನಡೆದಿತ್ತು. ಇಂತಹ ಗಾಳಿಸುದ್ದಿಗಳನ್ನು ಪರಮೇಶ್ವರ ತಳ್ಳಿಹಾಕಿದ್ದಾರೆ.
"ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ" ಎಂದು ಜಿ. ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ : 7 ಮಹತ್ವದ ನಿರ್ಣಯಗಳು
ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಬಗ್ಗೆ ವಿವರಣೆ ನೀಡಿದ ಪರಮೇಶ್ವರ, "ಡಿ. ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿಯೇ ಉಳಿದಿದ್ದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ" ಎಂದು ಪರಮೇಶ್ವರ ಹೇಳಿದರು.
ದಿನಕ್ಕೊಂದು ದೇಶ ಸುತ್ತುವ ಪ್ರಧಾನಿ ಎಲ್ಲಿದ್ದಾರೆ?; ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ, ಪರಮೇಶ್ವರ ನಡುವೆ ಭಿನ್ನಾಭಿಪ್ರಾಯವಿದೆ. ಆದ್ದರಿಂದ, ಪರಮೇಶ್ವರ ಸಭೆಗೆ ಗೈರಾಗಿ, ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದ್ದವು. ಸೋನಿಯಾ ಗಾಂಧಿ ಭೇಟಿ ಮಾಡಿದ ಬಗ್ಗೆ ಪರಮೇಶ್ವರ ಟ್ವೀಟ್ ಮಾಡಿದ್ದರು.
ಒಬ್ಬರಿಂದ ಪಕ್ಷ ಬೆಳೆಸಲು ಸಾಧ್ಯವಾಗದು
"ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುತ್ತೇವೆ. ಒಬ್ಬರಿಂದ ಪಕ್ಷ ಬೆಳೆಸಲು ಸಾಧ್ಯವಾಗದು. ಸಾಮೂಹಿಕ ನಾಯಕತ್ವದ ಮೂಲಕ ಅಧಿಕಾರಕ್ಕೆ ತರಲಾಗುವುದು" ಎಂದು ಡಾ. ಜಿ. ಪರಮೇಶ್ವರ ಹೇಳಿದರು.
ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿ
ಪರಮೇಶ್ವರ ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ರನ್ನು ಭೇಟಿಯಾಗಿದ್ದರು. ಈ ಕುರಿತು ಅವರು ಟ್ವಿಟ್ ಮಾಡಿದ್ದು, ಕಾನೂನ ಸಮರದಲ್ಲಿ ಅವರು ಗೆದ್ದು ಬರಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದರು.
ವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರ ಭೇಟಿ
ದೆಹಲಿಯಲ್ಲಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದ ಪರಮೇಶ್ವರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಈ ಕುರಿತು ಅವರು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದರು.
ಡಿಸೆಂಬರ್ನಲ್ಲಿ ಮಧ್ಯಂತರ ಚುನಾವಣೆ
"ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಸೋನಿಯಾ ಗಾಂಧಿ ಅವರಿಗೆ ವಿವರಿಸಿದ್ದೇನೆ. ಡಿಸೆಂಬರ್ನಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆಯೂ ಸೋನಿಯಾ ಗಾಂಧಿ ಬಳಿ ಚರ್ಚೆ ನಡೆಸಿದ್ದೇನೆ" ಎಂದು ಪರಮೇಶ್ವರ ತಿಳಿಸಿದರು.