ಟಿಪ್ಪು ಜಯಂತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ತ್ರಿವಳಿ ತಲಾಖ್ ಬಗ್ಗೆ ಜಾಣಮೌನ: ಈಶ್ವರಪ್ಪ
ಬೆಂಗಳೂರು, ಜುಲೈ 31: ಟಿಪ್ಪು ಜಯಂತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತ್ರಿವಳಿ ತಲಾಖ್ ಬಗ್ಗೆ ಮೌನವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು, ಹಿರಿಯ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಛೇಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಈಶ್ವರಪ್ಪ ಬರೆದುಕೊಂಡಿದ್ದು ಹೀಗೆ, " ಶಾದಿಭಾಗ್ಯ'ವನ್ನು ಶಾಶ್ವತವಾಗಿ ಉಳಿಸುವ ಟ್ರಿಪಲ್ ತಲಾಕ್ ಬಿಲ್ ರಾಜ್ಯಸಭೆಯಲ್ಲಿ ಪಾಸ್ ಆಗಿ 12 ಗಂಟೆಗಳು ಕಳೆದರೂ, ಮಾಜಿ ಮುಖ್ಯಮಂತ್ರಿಗಳ ಜಾಣ ಕಿವುಡು ಕೆಲಸ ಮಾಡಿದೆ".
ಮೇಲ್ಮನೆಯಲ್ಲೂ ತ್ರಿವಳಿ ತಲಾಖ್ ಅಂಗೀಕಾರ: ಗಣ್ಯರಿಂದ ಮಿಶ್ರ ಪ್ರತಿಕ್ರಿಯೆ
"ಮತಾಂಧನ ಜಯಂತಿ ರದ್ದು ಮಾಡಿದಾಗ ಉಕ್ಕಿ ಬಂದ ರೋಷಾವೇಷಗಳು, ಮುಸ್ಲಿಂ ಮಹಿಳೆಯರ ಗೌರವ ಉಳಿಸುವ ಟ್ರಿಪಲ್ ತಲಾಕ್ ಬಿಲ್ ಪಾಸ್ ಆದ ಕೂಡಲೇ ತಣ್ಣಗಾಗಿದೆ" ಇದು ಸಿದ್ದರಾಮಯ್ಯನವರನ್ನು ಲೇವಡಿ ಮಾಡುತ್ತಾ ಈಶ್ವರಪ್ಪ ಮಾಡಿರುವ ಟ್ವೀಟ್.
ಟಿಪ್ಪು ಜಯಂತಿ ಆಚರಿಸುವುದನ್ನು ಸರಕಾರ ಹಿಂದಕ್ಕೆ ಪಡೆದುಕೊಂಡ ನಂತರ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, "ಟಿಪ್ಪು ಸುಲ್ತಾನ್ ಒಂದು ಧರ್ಮಕ್ಕೆ ಸೇರಿದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಸೇರಿರುವ ಆಸ್ತಿ. ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಆಚರಣೆಯ ನಿರ್ಧಾರ ಕೈಗೊಂಡಿದ್ದೆ".
"ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ಹೊರಟಿರುವ ಬಿಜೆಪಿಯ ನಡೆ ಅನಿರೀಕ್ಷಿತವೇನಲ್ಲ" ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇದ್ದ ಸಂಘ ಪರಿವಾರದವರಿಗೆ, ದೇಶಭಕ್ತಿಯ ಬಗ್ಗೆ ಹೇಗೆ ಗೊತ್ತಾಗಬೇಕೆಂದು ಲೇವಡಿ ಮಾಡಿದ್ದರು.
ಟಿಪ್ಪು ಜಯಂತಿ ರದ್ದು : ಬಿಎಸ್ವೈ ವಚನ ಭ್ರಷ್ಟ ಎಂದು ಕಾಂಗ್ರೆಸ್ ಟ್ವೀಟ್
"ದ್ವೇಷ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ 24 ಗಂಟೆಯೊಳಗೆ ದ್ವೇಷ ರಾಜಕಾರಣ ಮಾಡಿದ ವಚನ ಭ್ರಷ್ಟ @BSYBJP. ಕೇವಲ ಕೋಮುವಾದ ದೃಷ್ಟಿಕೋನದಿಂದಲೇ ಇತಿಹಾಸವನ್ನು ನೋಡುವ ಬಿಜೆಪಿ/ಆರೆಸ್ಸೆಸ್ ಇತಿಹಾಸವನ್ನು, ಟಿಪ್ಪುವಿನ ಕೊಡುಗೆಯನ್ನು ಓದಿ ತಿಳಿದುಕೊಳ್ಳಬೇಕಿದೆ" ಎಂದು ಕೆಪಿಸಿಸಿ ಟ್ವೀಟ್ ಮಾಡಿತ್ತು.