ತಾಳ್ಮೆ ಕಳೆದುಕೊಳ್ಳುತ್ತಿರುವ ಕುಮಾರಸ್ವಾಮಿ: ಬಿಜೆಪಿ ವಿರುದ್ದ ತಿರುಗಿ ಬೀಳಲು 4 ಕಾರಣಗಳು
ಆಪರೇಷನ್ ಕಮಲದ ಮೂಲಕ ತನ್ನ ನೇತೃತ್ವದ ಸರಕಾರ ಪತನಗೊಂಡ ನಂತರ, ಬಿಜೆಪಿ ವಿರುದ್ದ ಕಿಡಿಕಾರುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದಾದ ಮೇಲೆ ಬಹಳಷ್ಟು ದಿನ ದಿವ್ಯ ಮೌನಕ್ಕೆ ಶರಣಾಗಿದ್ದರು.
ಇದಾದ ನಂತರ ಅದೇನು ರಾಜಕೀಯ ಒಳಗುಟ್ಟು ನಡೆಯಿತೋ, ಸಿಎಂ ಯಡಿಯೂರಪ್ಪನವರನ್ನು ಎರಡು ಬಾರಿ ಭೇಟಿಯಾಗಿದ್ದ ಕುಮಾರಸ್ವಾಮಿಯವರ ನೇರ ಟಾರ್ಗೆಟ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ತಿರುಗಿತು.
NDA ಮೈತ್ರಿಕೂಟಕ್ಕೆ ಜೆಡಿಎಸ್, ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕುಮಾರಸ್ವಾಮಿ? ಸ್ಪಷ್ಟನೆ
ಪ್ರತೀದಿನ ಈ ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ದ ಕಿಡಿಕಾರುತ್ತಿದ್ದ ಕುಮಾರಸ್ವಾಮಿ, ಕಳೆದ ಒಂದು ವಾರದಿಂದ, ಬಿಜೆಪಿಯ ವಿರುದ್ದ ತಿರುಗಿಬೀಳಲಾರಂಭಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಮಾನ ಅಂತರ ಕಾಯ್ದುಕೊಳ್ಳಲು ಕುಮಾರಸ್ವಾಮಿ ನಿರ್ಧರಿಸಿದ್ದಂತಿದೆ.
ಇದಕ್ಕೆ ಬಲವಾದ ಕಾರಣ ಇಲ್ಲದಿಲ್ಲ. ಜೆಡಿಎಸ್ ಮತ್ತು ತನ್ನ ವಿರುದ್ದ ಹರಿದಾಡುತ್ತಿರುವ ಸುದ್ದಿಯಿಂದ ಮುಂದೊಂದು ದಿನ ಬಹುದೊಡ್ಡ ಡ್ಯಾಮೇಜ್ ಆಗುವ ಸಾಧ್ಯತೆಯನ್ನು ಅರಿತ ಕುಮಾರಸ್ವಾಮಿ, ಬಿಜೆಪಿ ವಿರುದ್ದ ತಿರುಗಿಬೀಳಲು ಆರಂಭಿಸಿದ್ದಾರೆ. ಅದಕ್ಕೆ ಈ ಕೆಳಗಿನ 4 ಕಾರಣಗಳು ಕಾರಣ ಎಂದು ಹೇಳಲಾಗುತ್ತಿದೆ:
ಜೆಡಿಎಸ್ ಹಿರಿಯ, ಪ್ರಭಾವೀ ಮುಖಂಡನ ಉಚ್ಚಾಟನೆಗೆ ಮಹೂರ್ತ ಫಿಕ್ಸ್?
ಕಾರಣ - 1: ಬಿಜೆಪಿಯಲ್ಲಿನ ಗೊಂದಲಕ್ಕೆ ಜೆಡಿಎಸ್ ಹೆಸರು ಬಳಕೆ
ಕಾರಣ - 1: ಬಿಜೆಪಿಯೊಳಗೂ ಅಸಮಾಧಾನವಿರುವುದು ಗೊತ್ತಿರುವ ವಿಚಾರ. ಸಂಪುಟ ವಿಸ್ತರಣೆಯ ವಿಚಾರದಲ್ಲಿ ಹಲವು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಒಬ್ಬರ ವಿರುದ್ದ ಇನ್ನೊಬ್ಬರು ಕಿಡಿಕಾರುತ್ತಿದ್ದರು. ಈಗ, ಬಿಜೆಪಿಯಲ್ಲಿನ ಗೊಂದಲಕ್ಕೆ ಜೆಡಿಎಸ್ ಹೆಸರನ್ನು ಬಳಕೆ ಮಾಡುತ್ತಿರುವುದನ್ನು ಅರಿತ ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷದಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು.
ಕಾರಣ - 2: ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ ನಾಯಕರು
ಆಪರೇಷನ್ ಕಮಲದ ಮೂಲಕ ಬಿಜೆಪಿ ಜೊತೆ ಕೈಜೋಡಿಸಿ ಈಗ ಸಚಿವರಾಗಿರುವವರ ಪೈಕಿ ಕೆಲವರು ತಮ್ಮ ಕ್ಷೇತ್ರದ ಕೆಲಸದ ವಿಚಾರದಲ್ಲಿ ತೀವ್ರ ಒತ್ತಡವನ್ನು ಹೇರಲಾರಂಭಿಸಿದರು. ಇದರಿಂದ ಪಾರಾಗಲು, ಬಿಜೆಪಿಯವರೇ ಜೆಡಿಎಸ್ ವಿಲೀನಗೊಳ್ಳಲಿದೆ ಎನ್ನುವ ವದಂತಿಯನ್ನು ತೇಲಿಬಿಟ್ಟರು ಎನ್ನುವುದನ್ನು ಅರಿತ ಕುಮಾರಸ್ವಾಮಿ, ಬಿಜೆಪಿ ವಿರುದ್ದ ಕಿಡಿಕಾರಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾರಣ - 3: ಜೆಡಿಎಸ್ ಅಸ್ತಿತ್ವವನ್ನೇ ಬುಡಮೇಲು ಮಾಡುವ ಹೇಳಿಕೆ
ಜೆಡಿಎಸ್ ಪಾರ್ಟಿ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ ಎನ್ನುವ ಸುದ್ದಿ. ಇದಾದ ಮೇಲೆ, ಜೆಡಿಎಸ್ ಪಕ್ಷ ಎನ್ಡಿಎ ಜೊತೆ ಸೇರಿಕೊಳ್ಳಲಿದೆ ಮತ್ತು ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವದಂತಿಯನ್ನು ಇಟ್ಟುಕೊಂಡು ಕಾಂಗ್ರೆಸ್ ಮುಖಂಡರು, ಜೆಡಿಎಸ್ ಅಸ್ತಿತ್ವವನ್ನೇ ಬುಡಮೇಲು ಮಾಡುವ ಹೇಳಿಕೆಯನ್ನು ನೀಡಲಾರಂಭಿಸಿದರು. ಇದು ಪಕ್ಷಕ್ಕೇ ಮಾರಕವಾಗುವ ಸಾಧ್ಯತೆ ಅರಿತ ಕುಮಾರಸ್ವಾಮಿ, ಬಿಜೆಪಿ ವಿರುದ್ದ ತಿರುಗಿಬೀಳಲು ಇದೂ ಒಂದು ಕಾರಣವಾಗುವ ಸಾಧ್ಯತೆಯಿದೆ.
ಕಾರಣ - 4: ಹಲವು ಮುಖಂಡರು ಜೆಡಿಎಸ್ ತೊರೆಯುವ ಚಿಂತನೆ
ಕುಮಾರಸ್ವಾಮಿ ನೇತೃತ್ವದ ಮೇಲೆ ಹಲವು ಜೆಡಿಎಸ್ ಮುಖಂಡರಿಗೇ ಅಸಮಾಧಾನವಿರುವುದು ಹಳೆಯ ಸುದ್ದಿ. ಈಗ, ತಮ್ಮ ರಾಜಕೀಯ ಜೀವನದಲ್ಲಿ ಬಿಜೆಪಿ ವಿರುದ್ದ ಹೋರಾಡುತ್ತಲೇ ಬಂದಿರುವ ಹಲವು ಜೆಡಿಎಸ್ ನಾಯಕರಿದ್ದಾರೆ. ಈಗ, ಜೆಡಿಎಸ್ ಪಕ್ಷವೇ ವಿಲೀನಗೊಳ್ಳುವ ಸುದ್ದಿಯಿಂದ ವಿಚಲಿತರಾದ ಪಕ್ಷದ ಹಲವು ಮುಖಂಡರು ಜೆಡಿಎಸ್ ತೊರೆಯುವ ಚಿಂತನೆ ಆರಂಭಿಸಿದ್ದರು. ಇದಕ್ಕೆ ಬ್ರೇಕ್ ಹಾಕಲು ಕುಮಾರಸ್ವಾಮಿಯವರು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ದೂರವಿರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿಯಿದೆ.