ಸಿದ್ದರಾಮಯ್ಯ, ಎಚ್ಡಿಕೆಗೆ ಪುಂಖಾನುಪುಂಖವಾಗಿ ಪತ್ರ ಬರೆಯಲು ಕಾರಣವೇನು?
ಬೆಂಗಳೂರು, ಜುಲೈ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೋಬ್ಬರಿ 9 ಪತ್ರಗಳನ್ನು ಬರೆದಿದ್ದಾರೆ ಅದೂ ಕೇವಲ 45 ದಿನಗಳಲ್ಲಿ.
ಹೌದು, ಸಿದ್ದರಾಮಯ್ಯ ಅವರ ಈ ಪತ್ರ ದಾಳಿ ಸಹಿಸಲಾಗದೆ ಕುಮಾರಸ್ವಾಮಿ ಹೈರಾಣಾಗಿದ್ದಾರೆ. ಕುಮಾರಸ್ವಾಮಿ ಅವರ ಕಣ್ಣೀರಿಗೆ ಈ ಪತ್ರ ದಾಳಿಯೂ ಕಾರಣ. ಅಷ್ಟೆ ಅಲ್ಲ ಕುಮಾರಸ್ವಾಮಿ ಹೇಳಿದ 'ವಿಷಕಂಠ' ಸಂದರ್ಭದಲ್ಲಿ 'ಆ ವಿಷ' ಸಿದ್ದರಾಮಯ್ಯರ ಪತ್ರಗಳೇ ಎಂದೂ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ವರ್ಕಿಂಗ್ ಕಮಿಟಿ ರಚನೆ, ಸಿದ್ದರಾಮಯ್ಯಗೆ ಸ್ಥಾನ
ಆದರೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮುಖ್ಯಸ್ಥರಾಗಿದ್ದೂ ಕೂಡ ಹೀಗೆ ಒಂದರಹಿಂದೊಂದು ಪತ್ರಗಳನ್ನು ಬರೆಯುವ ಸಂಕಷ್ಟ ಸಿದ್ದರಾಮಯ್ಯ ಅವರಿಗೇಕೆ ಎಂಬ ಅನುಮಾನ ಕಾಡದಿರದು.
ಮುಂಚೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದಾಗ ಜೆಡಿಎಸ್ ವರಿಷ್ಠ ದೇವೇಗೌಡ ಸಹ ಇದೇ ನೀತಿ ಅನುಸರಿಸುತ್ತಿದ್ದರು. ಆಗ ಮುಖ್ಯಮಂತ್ರಿ ಆಗಿದ್ದ ಧರ್ಮಸಿಂಗ್ ಅವರಿಗೆ ದೇವೇಗೌಡ ಸಹ ಪದೇ ಪದೇ ಪತ್ರಗಳನ್ನು ಬರೆಯುತ್ತಿದ್ದರು ಮತ್ತು ಆ ಪತ್ರಗಳು ಮಾಧ್ಯಮದ ಕೈಗೂ ತಲುಪುವಂತೆ ಎಚ್ಚರಿಕೆ ವಹಿಸುತ್ತಿದ್ದರು.
ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!
ದೇವೇಗೌಡರ ಗರಡಿಯಲ್ಲೇ ಪಳಗಿದ ಸಿದ್ದರಾಮಯ್ಯ ಸಹ ಇಂದು ಅದೇ ತಂತ್ರ ಬಳಸುತ್ತಿದ್ದಾರೆ ಸಮ್ಮಿಶ್ರ ಸರ್ಕಾರದಲ್ಲಿ ನೇರ ಭಾಗಿದಾರಿಕೆ ಇಲ್ಲದಿದ್ದರೂ ಸಹ ಈಗಲೂ ಕಾಂಗ್ರೆಸ್ಗೆ ತಾನೇ ಪ್ರಮುಖ ಎಂದು ಸಾಬೀತು ಪಡಿಸಲು ಸಿದ್ದರಾಮಯ್ಯ ಅವರು ಪತ್ರದ ತಂತ್ರದ ಮೊರೆ ಹೋಗಿದ್ದಾರೆ.
ಸಿದ್ದರಾಮಯ್ಯ ಅವರ ಈ ಪತ್ರ ವ್ಯವಹಾರ ತಾವು ಸರ್ಕಾರದಲ್ಲಿ ಸಕ್ರಿಯರಾಗಿರುವುದಾಗಿ, ಸರ್ಕಾರದ ಮೇಲೆ ಹಿಡಿತವನ್ನು ಉಳಿಸಿಕೊಂಡಿರುವುದಕ್ಕೆ ನೀಡುವ ಸಾಕ್ಷ್ಯಗಳು ಎಂದು ವಿಶ್ಲೇಷಿಸಬಹುದು.
ಏನೇ ಆಗಲಿ, ಸಿದ್ದರಾಮಯ್ಯ ಅವರ ಪತ್ರ ಹೋರಾಟ ಕುಮಾರಸ್ವಾಮಿ ನುಂಗಲಾಗದ, ಉಗುಳಲಾಗದ ತುತ್ತಾಗಿವೆ. ಅತ್ತ ಕಾಂಗ್ರೆಸ್ಗೆ ಮುಜುಗರದ ಸಂಗತಿಯಾಗಿ ಮಾರ್ಪಟ್ಟಿದೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬಂತು, ಸಿದ್ದರಾಮಯ್ಯಗೆ ಪ್ರಬಲ ಜವಾಬ್ದಾರಿಯೊಂದನ್ನು ನೀಡದೇ ಹೋದರೆ ಈ ಪತ್ರ ಹೋರಾಟ ಮತ್ತೊಂದು ಮಜಲಿಗೆ ಹೋಗುವ ಸೂಚನೆಯೂ ಇದೆ.