ಶಿರಾಡಿ ಘಾಟ್ 'ಬಂದ್' ಹಿಂದೆ ಭಾರೀ ಗುಮಾನಿ: ತುರ್ತಾಗಿ ಆಗಬೇಕಿದೆ 'ಸತ್ಯ ಶೋಧನೆ'
ದೇಶದ ಅತ್ಯುತ್ತಮ ಬಂದರುಗಳಲ್ಲೊಂದು ಮಂಗಳೂರು, ಅತ್ಯುತ್ತಮ ಮೀನುಗಾರಿಕಾ ಬಂದರುಗಳಲ್ಲೊಂದು ಉಡುಪಿಯ ಮಲ್ಪೆ, ರಾಜ್ಯದ ಬೊಕ್ಕಸಕ್ಕೆ ಭಾರೀ ಆದಾಯ ತಂದುಕೊಡುವ ಮುಜರಾಯಿ ಇಲಾಖೆಯ ಟಾಪ್ ಟೆನ್ ದೇವಾಲಯಗಳಲ್ಲಿ ನಾಲ್ಕು ಕರಾವಳಿಯ ಅವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ, ಹೆಸರಾಂತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು.. ಆದರೂ ರಾಜಧಾನಿಯಿಂದ ಕರಾವಳಿಗೆ ಸಂಚರಿಸಲು ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ..
ಕೆಲವು ದಿನಗಳ ಹಿಂದೆ ಬಿದ್ದ ಮಳೆಯಿಂದ ಭೂಕುಸಿತ ಉಂಟಾಗಿ ಶಿರಾಡಿ ಘಾಟ್ ಅನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲಿಗೆ ಒಂದು ತಿಂಗಳ ಹಿಂದೆಯಷ್ಟೇ ಕೋಟ್ಯಾಂತರ ರೂಪಾಯಿ ಕಾಮಗಾರಿಗೆ ಸುರಿದ ರಸ್ತೆ ಮತ್ತೆ ಬಂದ್ ! ಇದು ಹೊರಜಗತ್ತಿಗೆ ಕಾಣುವ ಸತ್ಯ, ಆದರೆ, ಇದರ ಹಿಂದೆ ಬೇರೇನಾದರೂ ರಾಜಕೀಯ ಮಸಲತ್ತು ಅಡಗಿದೆಯೇ, ಕೆಲವರ ಹಿತಾಶಕ್ತಿಗಾಗಿ ಹೆದ್ದಾರಿಯನ್ನು ಬಂದ್ ಮಾಡಲಾಗಿದೆಯೇ ಎನ್ನುವ ಪ್ರಶ್ನೆ ಇಲ್ಲಿ ಕಾಡದೇ ಇರದು..
ಯಾವಾಗ ನೋಡಿದರೂ ರಿಪೇರಿ... ಮಂಗಳೂರಿಗೆ ಹೋಗುವುದಾದರೂ ಹೇಗೆ?
ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದರೂ, ತಿಂಗಳುಗಟ್ಟಲೇ ಘಾಟ್ ಬಂದ್ ಮಾಡುವಂತಹ ಕಾಮಗಾರಿ ಮತ್ತೆ ನಡೆಯಬೇಕಿದೆಯಾ? ಆಗಬೇಕಾಗಿರುವ ಸಣ್ಣಪುಟ್ಟ ಕಾಮಗಾರಿಯನ್ನೇ ದೊಡ್ಡದನ್ನಾಗಿ ಬಿಂಬಿಸಿ ಮತ್ತೆ ಕೋಟ್ಯಾಂತರ ರೂಪಾಯಿ ಹೊಡೆಯುವ ರಾಜಕೀಯ ಹುನ್ನಾರ ನಡೆಯುತ್ತಿದೆಯಾ ಎನ್ನುವ ಸಂಶಯ ಮೂಡುವುದು ಸ್ಥಳೀಯರು ನೀಡುವ ಹೇಳಿಕೆಯಿಂದ. (ಲೇಖನಕ್ಕೆ ಬಳಸಿದ ಇಮೇಜುಗಳು, ಬಂದ್ ಆದ ನಂತರ ತೆಗೆದದ್ದು)
ಈ ನಡುವೆ, ಶಿರಾಡಿ ಘಾಟ್ನಲ್ಲಿ ತಕ್ಷಣ ಕಾಮಗಾರಿ ನಡೆಸಿ ಒಂದು ವಾರದೊಳಗೆ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಕೇಂದ್ರ ಭೂಸಾರಿಗೆ, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನುವುದು ಕೊಂಚ ನೆಮ್ಮದಿ ತರುವ ವಿಷಯ.
ಸ್ಥಳೀಯರ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಮನಸ್ಸು ಮಾಡಿದರೆ, ಕೆಲವೇ ಕೆಲವು ಗಂಟೆಗಳಲ್ಲಿ ಗುಡ್ಡಕುಸಿತದಿಂದ ಹೆದ್ದಾರಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬಹುದು. ಆದರೆ, ಎರಡು ವಾರದಿಂದ ಶಿರಾಡ್ ಘಾಟ್ ಅನ್ನು ಬಂದ್ ಮಾಡಲಾಗಿದೆ. ಇದರಿಂದ ಬೆಂಗಳೂರಿನಿಂದ ಕರಾವಳಿಗೆ ತಲುಪಲು ಕನಿಷ್ಠ 70-100 ಕಿ.ಮೀಟರ್ ಹೆಚ್ಚುವರಿ ಕ್ರಮಿಸಬೇಕಾಗಿದೆ.
ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!
ಶಿರಾಡಿ ಘಾಟ್ ಪ್ರವೇಶಿಸಲು ಹಾಸನ ಮತ್ತು ದಕ್ಷಿಣಕನ್ನಡ ಪೊಲೀಸರು ಅನುಮತಿ ನೀಡುತ್ತಿಲ್ಲ. ಆದರೆ, ಅಧಿಕಾರಿಗಳಿಗೆ ಪರಿಚಯಸ್ಥರು ಅಥವಾ ಸ್ಥಳೀಯರು ಘಾಟ್ ನಿಂದ ಸಕಲೇಶಪುರಕ್ಕೆ ಹಾದು ಹೋಗಿ ಬಂದವರು ಇದ್ದಾರೆ. ಅವರ ಪ್ರಕಾರ ಸಂಚಾರಕ್ಕೆ ಬಂದ್ ಆಗುವ ಯಾವುದೇ ತೊಂದರೆಗಳು ಘಾಟ್ ಸೆಕ್ಷನ್ ನಲ್ಲಿಲ್ಲ. ಈಗಿಂದೀಗಲೇ ಸಂಚಾರಕ್ಕೆ ಘಾಟ್ ಅನ್ನು ಮುಕ್ತಗೊಳಿಸಬಹುದು. ಆದರೆ, ಅದ್ಯಾವ ಸ್ವಹಿತಾಶಕ್ತಿ ಇದಕ್ಕೆ ತಡೆಯೊಡ್ಡಿದೆಯೋ ಎನ್ನುವುದು ಸ್ಥಳೀಯರ ಆರೋಪ.
ಸದ್ಯ ರಾತ್ರಿ ಹೊತ್ತು ಘನವಾಹನಗಳೂ ಇಲ್ಲಿ ಸಂಚರಿಸುತ್ತಿವೆ ಎನ್ನುವ ಮಾತು ಸ್ಥಳೀಯರಿಂದ ಬಂದಿದೆ. ಶಿರಾಡ್ ಘಾಟ್ 'ಸತ್ಯ ಶೋಧನೆ' ಮಾಡಲು ಹೊರಟ ಸ್ಥಳೀಯರ ತಂಡವನ್ನು ಪೊಲೀಸರು ತಡೆದಿದ್ದಾರೆ, ಇದಾದ ನಂತರ ಘಾಟ್ ಈಗ ಸಂಪೂರ್ಣವಾಗಿ ಬಂದ್ ಆಗಿದೆ. ಎರಡೂ ಕಡೆಯಿಂದ (ಸಕಲೇಶಪುರ, ಗುಂಡ್ಯ) ಯಾರನ್ನೂ ಬಿಡುತ್ತಿಲ್ಲ. ಜಿಲ್ಲಾಡಳಿತದ ಕಟ್ಟಾಜ್ಞೆಯೇ ಇದಕ್ಕೆ ಕಾರಣ ಎನ್ನುವ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ.
'ಶಿರಾಡಿ ಉಳಿಸಿ' ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್ ಶೆಟ್ಟಿ 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ, ಸಣ್ಣಪುಟ್ಟ ಕಾಮಗಾರಿಯಿಂದ ಪೂರ್ಣಗೊಳ್ಳಬಹುದಾದ ರಸ್ತೆಯನ್ನು ಕೆಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ರಸ್ತೆ ದುರಸ್ತಿಗೆ ಕೋಟ್ಯಂತರ ರೂ. ವೆಚ್ಚವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಜನರನ್ನು ದಿಕ್ಕು ತಪ್ಪಿಸುವ ಕೆಲಸ, ಇದರ ಹಿಂದೆ ಭಾರೀ ಭ್ರಷ್ಟಾಚಾರದ ಹುನ್ನಾರ ನಡೆದಿದೆ. ಇಂಜಿನಿಯರ್ ಗಳೇ ಘಾಟ್ ಸಂಚಾರಕ್ಕೆ ಯೋಗ್ಯ ಎಂದರೂ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ ಎಂದು ಸಂಜಿತ್ ಶೆಟ್ಟಿ ನೇರವಾಗಿ ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ, ನಾವು ಮಾಧ್ಯಮದವರ ಜೊತೆ ಶಿರಾಡಿ ಘಾಟ್ ನಲ್ಲಿ ಸಂಚರಿಸಿದ್ದೇವೆ, ಗುಡ್ಡ ಕುಸಿದು ಹೆದ್ದಾರಿ ಮೇಲೆ ಮಣ್ಣು ಬಿದ್ದಿರುವುದನ್ನು ತೆರವು ಮಾಡಬಹುದು ದೊಡ್ಡ ಕೆಲಸವಲ್ಲ. ಜೊತೆಗೆ, ಅಲ್ಲಲ್ಲಿ ಇಕ್ಕೆಲಗಳಲ್ಲಿ ಸಡಿಲ ಉಂಟಾಗಿದೆ, ಅದನ್ನೂ ಶೀಘ್ರ ದುರಸ್ತಿ ಮಾಡಬಹುದು. ಇದೆಲ್ಲಾ ದೊಡ್ಡ ಕೆಲಸವೇ ಅಲ್ಲ, ಇದಕ್ಕಾಗಿ ಘಾಟ್ ಅನ್ನು ಬಂದ್ ಮಾಡುವುದು ಎಷ್ಟು ಸರಿ? ಲೋಕೋಪಯೋಗಿ ಸಚಿವರು ಮತ್ತು ಅಧಿಕಾರಿಗಳು ಐದು ತಿಂಗಳು ಆರಂಭಿಸಲು ಸಾಧ್ಯವಿಲ್ಲ, ಆರು ಕೋಟಿಗೂ ಹೆಚ್ಚು ಹಣ ಕಾಮಗಾರಿಗೆ ಬೇಕಾಗುತ್ತದೆ ಎಂದು ಹೇಳುತ್ತಿರುವುದರಿಂದ ಅನುಮಾನ ಬರುವುದು ಸಹಜ ಎಂದು ಸಂಜಿತ್ ಶೆಟ್ಟಿ ಹೇಳಿದ್ದಾರೆ.
#Connectustomangalore ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದ ಗೋಪಾಲ್ ಪೈ, 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ, ನಾವು ಅಂದು ನಡೆಸಿದ ಅಭಿಯಾನಕ್ಕೆ ಏಳು ಸಾವಿರಕ್ಕೂ ಹೆಚ್ಚು ಟ್ವೀಟುಗಳು ಬಂದಿದ್ದವು. ಮಲ್ಲೇಶ್ವರಂ ಶಾಸಕರು ಮತ್ತು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ಮಾತ್ರ ಪ್ರತಿಕ್ರಿಯೆ ನೀಡಿದ್ದರು. ನಿತಿನ್ ಗಡ್ಕರಿ ಹತ್ತು ದಿನದೊಳಗೆ ಶಿರಾಡಿ ಘಾಟ್ ಆರಂಭಿಸಬೇಕೆಉ ಎಂದು ಹೇಳಿರುವುದು ಸಂತಸದ ವಿಷಯ ಎಂದು ಪೈ ಹೇಳಿದ್ದಾರೆ.
ಶಿರಾಡಿ ಘಾಟ್ ಬಂದ್ ಆದಂಗಿನಿಂದ ಅವಳಿ ಜಿಲ್ಲೆಯ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಧಾರ್ಮಿಕ ಕೇಂದ್ರಗಳು, ಪ್ರವಾಸೀ ತಾಣಗಳ ಮೇಲೂ ಇದರ ಪರಿಣಾಮ ಬೀರಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹದಿಮೂರು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ ಗೆದ್ದದ್ದು ಒಂದೇ ಸ್ಥಾನ, ಜೆಡಿಎಸ್ ಇಲ್ಲಿ ಠೇವಣಿಯೂ ಸಂಪಾದಿಸಿಲ್ಲ, ಮಿಕ್ಕೆಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಿತ್ತು. ಸರಕಾರದ ಅಸಡ್ದೆಗೆ ಇದೂ ಒಂದು ಕಾರಣ ಯಾಕಿರಬಾರದು ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.