ಮುನ್ನೆಚ್ಚರಿಕೆ ಕೊಟ್ಟಿದ್ದರೂ ಕ್ರಮ ಕೈಗೊಳ್ಳಲಿಲ್ಲ ಏಕೆ; ಡಿಕೆಶಿ ಪ್ರಶ್ನೆ
ಬೆಂಗಳೂರು, ಏಪ್ರಿಲ್ 21: ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಕುರಿತು ತಾಂತ್ರಿಕ ಸಮಿತಿ ಸಲಹೆಯಂತೆ ನಿರ್ಧಾರ ಕೈಗೊಳ್ಳಬೇಕೆಂದು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ. ಸರ್ಕಾರಕ್ಕೆ ಲಾಕ್ ಡೌನ್ ಬಗ್ಗೆ ಆಸಕ್ತಿ ಇತ್ತು ಅನಿಸುತ್ತದೆ. ಆದರೆ ಮಂಗಳವಾರ ಪ್ರಧಾನ ಮಂತ್ರಿಗಳ ಸಂದೇಶದ ಮೇರೆಗೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಎಲ್ಲ ವರ್ಗದ ಜನ ಈಗ ಸಹಕಾರ ನೀಡಬೇಕಾದ ಅವಶ್ಯಕತೆ ಇದೆ. ಸರ್ಕಾರದ ವೈಫಲ್ಯದ ಬಗ್ಗೆ ರಾಜ್ಯಪಾಲರ ಸಭೆಯಲ್ಲಿ ಹೇಳಿದ್ದೇವೆ. ಸರ್ಕಾರ ವಿಫಲವಾಗಿದೆ ಎಂಬುದಕ್ಕೆ ಸೋಂಕಿನ ಸಂಖ್ಯೆಗಳೇ ಸಾಕ್ಷಿ. ಪ್ರಧಾನಮಂತ್ರಿಗಳು ಲಸಿಕೆ ವಿಚಾರವಾಗಿ ಹೇಳಿದ ತೀರ್ಮಾನಗಳನ್ನು ಯಾಕೆ ಮುಂಚಿತವಾಗಿ ಮಾಡಿರಲಿಲ್ಲ? ಇದೆಲ್ಲವೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಸಾಬೀತುಪಡಿಸುತ್ತಿವೆ ಎಂದು ಟೀಕಿಸಿದ್ದಾರೆ.
ಕೊರೊನಾ ಮೃತ ದೇಹದ ಶವಸಂಸ್ಕಾರ: ಡಿಕೆಶಿ ಕೊಟ್ಟ ಸಲಹೆ ಕಡೆ ಗಮನಕೊಡಿ
ಪರಿಸ್ಥಿತಿ ಕೈತಪ್ಪಿದಾಗ ಲಸಿಕೆಯನ್ನು ಹೆಚ್ಚಾಗಿ ಉತ್ಪಾದನೆ ಮಾಡಲು ಅವಕಾಶ ಕೊಟ್ಟು, ತೆರಿಗೆ ವಿನಾಯಿತಿ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಬದಲು, ನಿಮಗೆ ಮತ ಹಾಕಿ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದ ಜನರಿಗೆ ಔಷಧಿ ನೀಡಬಹುದಿತ್ತು. ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳಲು ಲಸಿಕೆಗಳನ್ನು ಬೇರೆ ದೇಶಗಳಿಗೆ ಹಂಚಿದ್ದಾರೆ ಎಂದು ದೂರಿದರು.
ಸರ್ಕಾರ ಮೊದಲು ದೇಶದ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಇಷ್ಟು ದಿನಗಳಿಂದ ಆರೋಗ್ಯ, ಕಂದಾಯ ಹಾಗೂ ಗೃಹ ಸಚಿವರು ಮಾತನಾಡುತ್ತಿದ್ದರು. ಈಗ ಜನರ ಆಕ್ರೋಶಕ್ಕೆ ಮುಖ್ಯಕಾರ್ಯದರ್ಶಿಗಳ ಮೂಲಕ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಏನಾಗುತ್ತಿದೆ? ಔಷಧಿ ತಯಾರಿಕೆಗೆ ಎಲ್ಲರಿಗೂ ಅವಕಾಶ ಕೊಟ್ಟು ನೀವೇ ಪರಿಶೀಲಿಸಿದ್ದರೆ ಏನಾಗುತ್ತಿತ್ತು? ನಮ್ಮ ರಾಜ್ಯದಲ್ಲಿ ನವೆಂಬರ್ 20ರಂದು ಕೊರೊನಾ ಸೋಂಕಿನ ಕುರಿತು ಮುನ್ನೆಚ್ಚರಿಕೆ ನೀಡಲಾಗಿದ್ದರೂ ಯಾಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಇದು ಬೇಜವಾಬ್ದಾರಿ ಸರ್ಕಾರ. ಈ ಸಮಯದಲ್ಲಿ ಚುನಾವಣೆಗೆ ಏನು ತಯಾರಿ ಮಾಡಿಕೊಳ್ಳುತ್ತಿದ್ದಾರೆ. 6 ತಿಂಗಳ ಕಾಲ ಅವರ ಅಧಿಕಾರ ಅವಧಿ ವಿಸ್ತರಣೆ ಮಾಡಿ ಸುಗ್ರೀವಾಜ್ಞೆ ತರಲು ಸಾಧ್ಯವಿಲ್ಲವೇ? ಯಾವುದಾದರೂ ಜಿಲ್ಲಾ ಸಚಿವರು, ಆಸ್ಪತ್ರೆಯಲ್ಲಿ ವ್ಯವಸ್ಥೆ, ರೋಗಿಗಳ ಸ್ಥಿತಿ ಪರಿಶೀಲಿಸಿದ್ದಾರಾ? ಇಲ್ಲ ಎಂದು ಹೇಳಿದರು.
Recommended Video