ಮೈಸೂರು ಕರ್ನಾಟಕವಾಗಿ ಬದಲಾಗಿದ್ದು ಯಾಕೆ?
ಬೆಂಗಳೂರು, ನ. 1: ಕರುನಾಡ ತುಂಬೆಲ್ಲ 59ನೇ ರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಮೊದಲು ಮೈಸೂರು ಎಂದಿದ್ದ ರಾಜ್ಯ ಕರ್ನಾಟಕವಾಗಿ ಬದಲಾಗಿದ್ದು ಹೇಗೆ? ರಾಜ್ಯಕ್ಕೆ ಮರುನಾಮಕರಣ ಮಾಡಿದ್ದು ಯಾರು? ಇನ್ನು ಮುಂತಾದ ಅಂಶಗಳ ಮೇಲೊಂದು ನೋಟ ಇಲ್ಲಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆ ದೇಶ 500 ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಒಡೆದು ಹಂಚಿ ಹೋಗಿತ್ತು. ನಂತರ ದೇಶವನ್ನು ಒಂದೇ ಆಡಳಿದ ಅಡಿಯಲ್ಲಿ ತರುವ ಉದ್ದೇಶದಿಂದ ಒಂದೇ ಭಾಷೆ ಮಾತನಾಡುವ ಪ್ರದೇಶವನ್ನು ಒಟ್ಟುಗೂಡಿಸಿ ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.[ಹೆಸರು ಬದಲಾದ ರಾಜ್ಯದ 12 ಊರುಗಳ ಪಟ್ಟಿ]
ಕನ್ನಡ ಭಾಷೆ ಮಾತನಾಡುವ ಪ್ರದೇಶ 1956ರಲ್ಲಿ 'ಮೈಸೂರು' ರಾಜ್ಯವಾಯಿತು. ಏಕೀಕರಣಕ್ಕೆ ಅನೇಕ ಮಹನೀಯರು ಹೋರಾಟ ಮಾಡಿದರು. ರಾಜ್ಯ ಉದಯದ ನಂತರ ಸಂವಿಧಾನಾತ್ಮಕ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ಆರಂಭವಾಯಿತು.
ಆದರೆ ಮೈಸೂರು ಕರ್ನಾಟಕವಾದ್ದು 1973ರ ನವೆಂಬರ್ 1 ರಂದು. ಇದರ ಹಿಂದಿನ ಕತೆ ಸರಳ. ಇಡೀ ರಾಜ್ಯಕ್ಕೆ ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಈ ಮೈಸೂರು ಎಂಬ ಹೆಸರು ಸರಿ ಬರಲಿಲ್ಲ. ಇದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತ ಎಂಬಂತೆ ಕಾಣುತ್ತಿದೆ ಎಂಬ ದೂರುಗಳು ಬರತೊಡಗಿದವು.
ಈ ಎಲ್ಲ ಹಿನ್ನೆಲೆಯನ್ನು ಆಧರಿಸಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವಧಿಯಲ್ಲಿ ಮೈಸೂರು ಪ್ರಾಂತ್ಯವನ್ನು ಕರ್ನಾಟಕವಾಗಿ ಬದಲಾಯಿಸುವ ತೀರ್ಮಾನ ತೆಗೆದುಕೊಂಡರು. ಇದಕ್ಕೆ ಕೆಲ ರಾಜಕೀಯ ಕಾರಣಗಳು ಇದ್ದವು ಎಂಬ ಸಂಗತಿಯನ್ನು ಅಲ್ಲಗಳೆಯುವಂತಿಲ್ಲ.[ರಾಜ್ಯೋತ್ಸವ ಸಂದರ್ಭದಲ್ಲಿ ನಾಡ ಗೀತೆ ಓದಿ, ಕೇಳಿ]
ಕರ್ನಾಟಕ ಎಂಬ ಹೆಸರು ಇಡಲು ಅನೇಕ ಸಾಹಿತಿಗಳು, ಭಾಷಾ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗಿತ್ತು. ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಕೃಷ್ಣ ರಾವ್ ರಂಥ ಸಾಹಿತಿಗಳು 'ಕರ್ನಾಟಕ' ಎಂಬ ಹೆಸರು ಇಡಲು ಕಾರಣಿಭೂತರಾದರು.
ಈ ಹೆಸರು ಬದಲಾವಣೆ ಪ್ರಕ್ರಿಯೆ ಇಲ್ಲಿಗೆ ಮುಗಿಯಲ್ಲ, ಮಂಗಳೂರು ದಕ್ಷಿಣ ಕನ್ನಡವಾಗಿ, ಕಾರವಾರ ಉತ್ತರ ಕನ್ನಡವಾಗಿ ಬದಲಾಗಿದ್ದು ಇತಿಹಾಸ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೆಲವೊಂದು ನಗರಗಳ ಹೆಸರು(ಸ್ಪೆಲಿಂಗ್) ಬದಲಾಯಿಸಿ ಆದೇಶ ಹೊರಡಿಸಿದೆ.