ನ್ಯಾಯಾಲಯವು ಕೆಜಿಎಫ್ಗೆ ತಡೆ ನೀಡಿದ್ದು ಏಕೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 20: ನಾಳೆ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿದ್ದ ಭಾರಿ ನಿರೀಕ್ಷಿತ ಚಿತ್ರ ಕೆಜಿಎಫ್ಗೆ ಹಠಾತ್ತನೆ ಗ್ರಹಣವಾಗಿದೆ. ಸಿಟಿ ಸಿವಿಲ್ ಕೋರ್ಟ್ ಕೆಜಿಎಫ್ ಬಿಡುಗಡೆಗೆ ಮಧ್ಯಂತರ ತಡೆ ನೀಡಿದೆ.
ಆದರೆ ಹೀಗೆ ಏಕಾ-ಏಕಿ ಕೆಜಿಎಫ್ ಅಂತ ಬೃಹತ್ ಚಿತ್ರಕ್ಕೆ ತಡೆ ನೀಡಿದ್ದು ಏಕಿ. ಕೆಜಿಎಫ್ ಮೇಲೆ ಪ್ರಕರಣ ದಾಖಲಿಸಿದ್ದು ಯಾರು, ನಾಲ್ಕು ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದರೂ ಈಗ ದೂರು ದಾಖಲಿಸಲು ಕಾರಣ ಏನು? ಹಲವು ಪ್ರಶ್ನೆಗಳು ಹುಟ್ಟುತ್ತಿವೆ.
ಕನ್ನಡದ ಬಿಗ್ ಬಜೆಟ್ ಚಿತ್ರದ ವಿರುದ್ಧ ಕನ್ನಡದ ಮತ್ತೊಬ್ಬ ನಿರ್ಮಾಪಕರೇ ದೂರು ದಾಖಲಿಸಿದ್ದರು. ಚಲನಚಿತ್ರ ನಿರ್ಮಾಪಕ ವೆಂಕಟೇಶ್ ಎಂಬುವರು ಕೆಜಿಎಫ್ ವಿರುದ್ಧ ಹಕ್ಕುಚ್ಯುತಿ ಕೇಸನ್ನು ಡಿಸೆಂಬರ್ 17 ರಂದು ದಾಖಲಿಸಿದ್ದರು.
ಇಂದು ಅದರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯದ ಎದುರು ಅರ್ಜಿದಾರರ ಪರ ವಕೀಲ ರಘುನಾಥ್ ಅವರು ವಾದ ಮಂಡಿಸಿ, ಕೆಜಿಎಫ್ ರೌಡಿ ತಂಗಂ ಎಂಬುವರ ಜೀವನ ಕತೆ ಆಧಾರಿತವಾಗಿದ್ದು, ಆತನ ಕತೆಯ ಹಕ್ಕುಸಾಮ್ಯ ನಿರ್ಮಾಪಕ ವೆಂಕಟೇಶ್ ಬಳಿ ಇದೆ ಎಂದು ಹೇಳಿದ್ದಾರೆ.
ವಿಜಯ್ ಕಿರಗಂದೂರು ಅವರ ಭೇಟಿ ಮಾಡಿದ್ದರು
ಅರ್ಜಿದಾರ ವೆಂಕಟೇಶ್ ಅವರು 2017 ರಲ್ಲಿಯೇ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದರು. ಆದರೆ ಕೆಜಿಎಫ್ ಸಿನಿಮಾ ರೌಡಿ ತಂಗಂ ಕುರಿತಾದದ್ದು ಅಲ್ಲ ಎಂದು ಆಗ ಹೇಳಿದ್ದರು ಹಾಗಾಗಿ ಇಷ್ಟು ದಿನ ಅವರು ದೂರು ನೀಡಿರಲಿಲ್ಲವಂತೆ.
'ಹಕ್ಕುಸಾಮ್ಯ ಚ್ಯುತಿ ಆಗಿರುವುದು ತಡವಾಗಿ ಗೊತ್ತಾಯಿತು'
ಆದರೆ ಟ್ರೇಲರ್ ರಿಲೀಸ್ ಆದಮೇಲೆ ಹಾಗೂ ಮಾಧ್ಯಮಗಳು ಹಾಗೂ ಇತರ ಮೂಲಗಳ ಮೂಲಕ ಕೆಜಿಎಫ್ ಕತೆ ಸೋರಿಕೆ ಆದ ಬಳಿಕವೇ ವೆಂಕಟೇಶ್ ಅವರಿಗೆ ಅದು ರೌಡಿ ತಂಗಂ ಕತೆ ಎಂದು ಗೊತ್ತಾಗಿದ್ದು ಹಾಗಾಗಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು ಎಂದು ಹೇಳಿದ್ದಾರೆ ಅರ್ಜಿದಾರರ ಪರ ವಕೀಲ ರಘುನಾಥ್.
ಕೆಜಿಎಫ್ ತಂಡವನ್ನು ಸಂಪರ್ಕಿಸುವ ಯತ್ನ ಮಾಡಿದ್ದೆ
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನಾ ಕೂಡ ವೆಂಕಟೇಶ್ ಅವರು ಕೆಜಿಎಫ್ ಚಿತ್ರತಂಡವನ್ನು ಸಂಪರ್ಕಿಸುವ ಯತ್ನ ಮಾಡಿದರು. ಆದರೆ ಅವರು ಕೈಗೆ ಸಿಗಲಿಲ್ಲ ಹಾಗಾಗಿ ಅರ್ಜಿ ದಾಖಲಿಸಬೇಕಾಯಿತು ಎಂದು ವಕೀಲರು ಹೇಳಿದ್ದಾರೆ.
ಅರ್ಜಿದಾರ ವೆಂಕಟೇಶ್ ಮಾತುಗಳು ಏನು?
ಅರ್ಜಿದಾರ ವೆಂಕಟೇಶ್ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಹಕ್ಕು ಖರೀದಿಸಿ, ರೌಡಿ ತಂಗಂ ಜೀವನದ ಮೇಲೆ ಸಿನಿಮಾ ಮಾಡಲು ತಯಾರಿ ನಡೆಸಿದ್ದೆ ಆದರೆ, ಈಗ ಸಿನಿಮಾ ಕೆಜಿಎಫ್ ತಂಡದವರು ನಮ್ಮ ಕತೆ ಕದ್ದಿದ್ದಾರೆ. ಅದಕ್ಕೆ ತಕ್ಕ ಬೆಲೆ ಅವರು ಕೊಡಬೇಕಾಗಿದೆ ಎಂದು ಅವರು ಹೇಳಿದರು.