ಕೊರೊನಾ ಹೆಚ್ಚಾಗುತ್ತಿರುವುದು ಯಾಕೆ? ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ
ಕೊರೊನಾ ಮತ್ತು ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಬೆಂಗಳೂರಿನ ಮೂಡಲಪಾಳ್ಯದ ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಸವಿವರವಾಗಿ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ವಿಡಿಯೋ ಸಂದೇಶದ ಮೂಲಕ ವಿವರಿಸಿದ್ದಾರೆ.
ದೇಶದಲ್ಲಿ ಕೇಸುಗಳು ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದು, ಒಂದೇ ದಿನ 90,928 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆ ಮೂಲಕ, ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲೂ ನಾಲ್ಕು ಸಾವಿರಕ್ಕೂ ಅಧಿಕ ಕೇಸುಗಳು ವರದಿಯಾಗಿವೆ, ದಿನದಿಂದ ದಿನಕ್ಕೆ ಇದರ ಸಂಖ್ಯೆ ಹೆಚ್ಚಾಗುತ್ತಿದೆ.
ಓಮಿಕ್ರಾನ್: ಸರಕಾರಕ್ಕೆ ವಾಟ್ಸಾಪ್ ನಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿರುವ 10 ಸಲಹೆಗಳು
ಕೊರೊನಾ ಮೊದಲನೇ ಅಲೆಯಿಂದ ಇಲ್ಲಿಯವರೆಗೆ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ವೈದ್ಯ ಡಾ.ರಾಜು, ಕೊರೊನಾ ಮೂರನೇ ಅಲೆ ದೇಶಕ್ಕೆ ಪ್ರವೇಶಿಸಿರುವುದು ಇನ್ನೂರು ಪ್ರತಿಶತ ಸತ್ಯ ಎಂದು ಹೇಳಿದ್ದಾರೆ. ಜೊತೆಗೆ, ಯಾವ ಕಾರಣಕ್ಕೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಹೋದ ವರ್ಷದ ಆದಿಯಲ್ಲಿ ವ್ಯಾಕ್ಸಿನೇಶನ್ ಪರಿಚಯಿಸಲಾಯಿತು, ಯಾವುದೇ ವೈರಸ್ ಮೂರರಿಂದ ಆರು ತಿಂಗಳ ಅವಧಿಯಲ್ಲಿ ರೂಪಾಂತರಗೊಳ್ಳುತ್ತದೆ. ಕೊರೊನಾ ಮುಂದುವರಿದ ವೈರಸ್ ಡೆಲ್ಟಾ ಎಂದು ಹೇಳಿರುವ ಡಾ.ರಾಜು, ಲಸಿಕೆಯಿಂದಾಗಿ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಾಯಿತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಎರಡೂ ಲಸಿಕೆ ಮುಕ್ತಾಯಗೊಂಡ ದೇಶಗಳಲ್ಲಿ ಕೊರೊನಾ ರೂಪಾಂತರ
"ಕೆಲವೊಂದು ದೇಶಗಳಲ್ಲಿ ಕೂರೊನಾದ ನಾಲ್ಕನೇ ಅಲೆ ಮುಗಿದು, ಐದನೇ ಅಲೆಗೆ ಕಾಯುತ್ತಿದ್ದಾರೆ. ಓಮಿಕ್ರಾನ್ ವೈರಸ್, ದಕ್ಷಿಣ ಆಫ್ರಿಕಾದಿಂದ ಬಂದಿದೆ ಎನ್ನುವ ಮಾಹಿತಿ ಸುಳ್ಳು" ಎಂದು ಅಭಿಪ್ರಾಯ ಪಟ್ಟಿರುವ ಡಾ.ರಾಜು ಕೃಷ್ಣಮೂರ್ತಿ, "ಎರಡೂ ಲಸಿಕೆ ಮುಕ್ತಾಯಗೊಂಡ ದೇಶಗಳಲ್ಲಿ ಕೊರೊನಾ ರೂಪಾಂತರಗೊಳ್ಳುತ್ತಲೇ ಬರುತ್ತಿದೆ. ಮನೆಯಿಂದ ಹೊರಗೇ ಕಾಲಿಡದ ವ್ಯಕ್ತಿಗೂ ಓಮಿಕ್ರಾನ್ ಸೋಂಕು ತಗಲಿರುವ ಉದಾಹರಣೆಗಳಿವೆ. ಹಾಗಾಗಿ, ರೂಪಾಂತರಿ ವೈರಸ್ ದಕ್ಷಿಣ ಆಫ್ರಿಕಾದಿಂದ ಬಂದಿದೆ ಎನ್ನುವುದು ಸುಳ್ಳು"ಎಂದು ಡಾ.ರಾಜು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು 2022ಕ್ಕೆ ಕೊರೊನಾ ಅಂತ್ಯಗೊಳಿಸೋಣ ಎಂದು ಹೇಳಿದೆ
"ಕೊರೊನಾ ಡೆಲ್ಟಾ ತೀವ್ರ ತೊಂದರೆಯನ್ನುಂಟು ಮಾಡುವ ವೈರಸ್, ಅದರೆ ಮುಂದೆ ಓಮಿಕ್ರಾನ್ ಏನೂ ಇಲ್ಲ. ಈಗ ಕಾಣಿಸುತ್ತಿರುವ ವೈರಸಿನಿಂದ ಹೆಚ್ಚಿನ ತೊಂದರೆಯೇನೂ ಇಲ್ಲ. ಮೂರರಿಂದ ಐದು ದಿವಸಗಳಲ್ಲಿ ಇದರಿಂದ ಹೊರಬರಬಹುದು. ನಾನು ಕಂಡಂತೆ ಒಬ್ಬರಲ್ಲೂ ಉಸಿರಾಟದ ತೊಂದರೆ ಎದುರಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು 2022ಕ್ಕೆ ಕೊರೊನಾ ಅಂತ್ಯಗೊಳಿಸೋಣ ಎಂದು ಹೇಳಿದೆ. ಇದು ಸಾಧ್ಯವಿಲ್ಲದ ಮಾತು"ಎಂದು ಡಾ.ರಾಜು ಕೃಷ್ಣಮೂರ್ತಿ ಹೇಳಿದ್ದಾರೆ.
ಡೆಂಗ್ಯೂ, ಚಿಕನ್ ಗುನ್ಯಾ ಎಲ್ಲಿಗೆ ಹೋಯಿತು, ಅದರ ಅಂತ್ಯವಾಗಲಿಲ್ಲ
"ದುರ್ಬಲಗೊಂಡ ವೈರಸ್ ನಮ್ಮ ಜೊತೆ ಪರ್ಮನೆಂಟ್ ಆಗಿ ಇದ್ದು ಬಿಡುತ್ತದೆ, ಡೆಂಗ್ಯೂ, ಚಿಕನ್ ಗುನ್ಯಾ ಇದಕ್ಕೆ ಉದಾಹರಣೆ. ಕೊರೊನಾ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಯನ್ನು ಕೊಡದೆ ಇರುತ್ತದೆ. ನಾಲ್ಕು ತಿಂಗಳಿಗೊಮ್ಮೆ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ, ಇದು ಪ್ರಕೃತಿಯ ನಿಯಮ. ಈ ಸಮಯದಲ್ಲಿ ನೆಗಡಿ ರೀತಿಯ ಸೋಂಕು ತಗಲುವುದು ಸಾಮಾನ್ಯ ಸಂಗತಿ. ಹಾಗಾಗಿ, ಕೇಸುಗಳು ಜಾಸ್ತಿಯಾಗಿರುವುದಕ್ಕೆ ಇದೊಂದೇ ಕಾರಣ"ಎಂದು ಡಾ.ರಾಜು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಮನೆಯಲ್ಲೇ ಔಷಧಿಯನ್ನು ತೆಗೆದುಕೊಂಡು ಗುಣಪಡಿಸಬಹುದು, ಡಾ.ರಾಜು ಕೃಷ್ಣಮೂರ್ತಿ
"ಹೊಸ ವರ್ಷದ ಸೀಸನ್ ನಲ್ಲಿ ಪ್ರಯಾಣ ಮಾಡುವುದು ಸಾಮಾನ್ಯ, ಆಗ ವಾತಾವರಣ ಬದಲಾದಾಗ ಫ್ಲೂ ಕಾಣಿಸಿಕೊಳ್ಳುತ್ತದೆ. ಕೊರೊನಾದ ರೋಗ ಲಕ್ಷಣಗಳು ಇದೇ ಆಗಿರುವುದರಿಂದ ಪಾಸಿಟೀವ್ ಎನ್ನುವ ವರದಿ ಬರುತ್ತದೆ. ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿದೆ ಎನ್ನುವುದು ವಾಸ್ತವತೆ, ಕೊರೊನಾ ಮೂರನೇ ಅಲೆಗೆ ಮನೆಯಲ್ಲೇ ಔಷಧಿಯನ್ನು ತೆಗೆದುಕೊಂಡು ಗುಣಪಡಿಸಬಹುದು"ಎಂದು ಡಾ.ರಾಜು ಕೃಷ್ಣಮೂರ್ತಿ ವಿಡಿಯೋ ಮೂಲಕ ಹೇಳಿದ್ದಾರೆ.