ಸದನದಲ್ಲಿ ರಾಜಾಹುಲಿ ಬಿಎಸ್ವೈ ಗೆ ಟಗರು ಸಿದ್ದರಾಮಯ್ಯ ಠಕ್ಕರ್
ಬೆಂಗಳೂರು, ಅಕ್ಟೋಬರ್ 09: ಸಿದ್ದರಾಮಯ್ಯ ಅವರು ಮತ್ತೊಮ್ಮೆ ವಿಧಾನಸಭೆಯ ವಿರೋಧ ಪಕ್ಷ ನಾಯಕರಾಗಿ ಆಯ್ಕೆ ಆಗಿದ್ದಾರೆ. ಅವರು ಈ ಹಿಂದೆ ವಿಪಕ್ಷ ನಾಯಕನಾಗಿ ಸರ್ಕಾರದ ಕತ್ತುಪಟ್ಟಿ ಹಿಡಿದಿದ್ದು ನೆನಪಿದ್ದವರಿಗೆ ಕಾಂಗ್ರೆಸ್ನ ಆಯ್ಕೆಯ ಬಗ್ಗೆ ಸಹಜವಾಗಿಯೇ ಸಂತಸವಾಗಿದೆ.
ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕರಾಗಿ ಆಯ್ಕೆ ಆಗಿರುವುದು ಯಡಿಯೂರಪ್ಪ ಹಣೆಯಲ್ಲಿ ಬೆವರು ಹನಿ ಮೂಡಿಸಿದೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಇದೇ ಸಿದ್ದರಾಮಯ್ಯ ಅವರು ಸರ್ಕಾರವನ್ನು ಸದನದಲ್ಲಿ ಮಕಾಡೆ ಮಲಗಿಸಿಬಿಟ್ಟಿದ್ದರು. ಯಾವ ಮಟ್ಟಿಗೆ ಯಡಿಯೂರಪ್ಪಗೆ ಮುಳ್ಳಾಗಿದ್ದರೆಂದರೆ ಪೊಲೀಸರನ್ನು ಕರೆಸಿ ಸಿದ್ದರಾಮಯ್ಯ ಸದನ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು.
Breaking: ವಿಧಾನಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಆಯ್ಕೆ
ಈಗ ಮತ್ತೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ, ಸಿದ್ದರಾಮಯ್ಯ ವಿರೋಧ ಪಕ್ಷ ನಾಯಕ. ನಾಳೆಯಿಂದಲೇ ಅಧಿವೇಶನ ಪ್ರಾರಂಭ. ನೆರೆ ಪರಿಹಾರ ವಿಳಂಬ, ಆಪರೇಷನ್ ಕಮಲ, ಅನರ್ಹರಿಗೆ ಆಶ್ರಯ, ಅಧಿವೇಶನ ಮೊಟಕು, ಮಾಧ್ಯಮಗಳಿಗೆ ಪ್ರವೇಶ ನಿರಾಕರಣೆ ಹಲವು ವಿವಾದಗಳನ್ನು ಮಡಿಲಟ್ಟಿಕೊಂಡಿರುವ ಸರ್ಕಾರ ಸಿದ್ದರಾಮಯ್ಯ ದಾಳಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯವೆಂಬುದು ಸುಲಭಕ್ಕೆ ಗೋಚರವಾಗುತ್ತಿದೆ.
ಸಿದ್ದರಾಮಯ್ಯ ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ ಕಾಂಗ್ರೆಸ್ಗೆ
ಕಾಂಗ್ರೆಸ್ ಹೈಕಮಾಂಡ್ಗೆ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಬಿಟ್ಟು ಬೇರೆ ಸೂಕ್ತ ಆಯ್ಕೆಯೇ ಇರಲಿಲ್ಲ. ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಅವರು ರೇಸ್ನಲ್ಲಿ ಇದ್ದರಾದರೂ ವಿರೋಧ ಪಕ್ಷ ನಾಯಕ ಸ್ಥಾನ ನಿಭಾಯಿಸುವ ಛಾತಿ, ವಾಕ್ಚಾತುರ್ಯ, ಧೈರ್ಯ, ಅಂಜಿಕೆ ರಹಿತ ಪ್ರಶ್ನೆ ಮಾಡುವ ತೀರುಗಳಲ್ಲಿ ಈ ಇಬ್ಬರೂ ನಾಯಕರು ಸಿದ್ದರಾಮಯ್ಯ ಸಮೀಪಕ್ಕೂ ಸುಳಿಯದವರು. ಅದು ಹೈಕಮಾಂಡ್ಗೂ ಅರಿವಿದೆ. ಹಾಗಾಗಿಯೇ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಹೈಕಮಾಂಡ್ ಆಯ್ಕೆ ಮಾಡಿದೆ.
ಮುಖಾಮುಖಿಯಾದ ಸಿದ್ದರಾಮಯ್ಯ-ದೇವೇಗೌಡ: ಎಲ್ಲಿ? ಹೇಗೆ? ಏನಾಯಿತು?
ಪಕ್ಷದ ಹಿತದೃಷ್ಠಿಯಿಂದಲೂ ಈ ಆಯ್ಕೆ ಸೂಕ್ತವಾಗಿದೆ
ಸಿದ್ದರಾಮಯ್ಯ ಸಾಮರ್ಥ್ಯದ ಕಾರಣದಿಂದ ಮಾತ್ರವಲ್ಲದೆ ಪಕ್ಷದ ಸಂಘಟನೆ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹ ಹೈಕಮಾಂಡ್ ಈ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ಸಿದ್ದರಾಮಯ್ಯ ಅವರನ್ನು ನಿರ್ಲಕ್ಷಿಸಿದರೆ ಅಹಿಂದ ವರ್ಗ ಕಾಂಗ್ರೆಸ್ನಿಂದ ದೂರವಾಗುವ ದೊಡ್ಡ ಅಪಾಯ ಇದೆ. ಈಗಾಗಲೇ ಅರ್ಧ ಮುಳುಗಿರುವ ಕಾಂಗ್ರೆಸ್ಗೆ ಅದು ಬೇಕಿಲ್ಲ. ಸಿದ್ದರಾಮಯ್ಯ ಬಿಟ್ಟರೆ ಅಹಿಂದ ವರ್ಗವನ್ನು ಒಟ್ಟು ಮಾಡುವ ಮತ್ತೊಬ್ಬ ನಾಯಕ ಕಾಂಗ್ರೆಸ್ನಲ್ಲಿ ಈಗ ಇಲ್ಲ.
ರಾಮನಗರ ರಾಜಕೀಯದಲ್ಲಿ ದಾಳ ಉರುಳಿಸಿದ ಸಿದ್ದರಾಮಯ್ಯ!
ಕಾಂಗ್ರೆಸ್ನಲ್ಲಿ ಒಳನಾಯಕತ್ವ ಬೆಳೆಸಿಕೊಂಡಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಒಳಗೆ ಪ್ರತ್ಯೇಕ ನಾಯಕತ್ವವನ್ನು ಬೆಳೆಸಿಕೊಂಡಿದ್ದಾರೆ. ಕಾಂಗ್ರೆಸ್ನ ಹಲವು ಹಾಲಿ-ಮಾಜಿ ಶಾಸಕರು, ಮುಖಂಡರು ಸಿದ್ದರಾಮಯ್ಯ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಮಾತು ಕೇಳುವ ಆದೇಶ ಪಾಲಿಸುವ ದೊಡ್ಡ ಗುಂಪೇ ಕಾಂಗ್ರೆಸ್ನಲ್ಲಿದೆ. ಸಿದ್ದರಾಮಯ್ಯ ಅವರು ಬದಲಿಗೆ ಬೇರೆಯವರಿಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡಿದರೆ ಸದನದಲ್ಲಿ ಕಾಂಗ್ರೆಸ್ನ ಒಗ್ಗಟ್ಟು ಒಡೆಯುವ ಸಾಧ್ಯತೆ ಇದೆ. ಇದು ಸರ್ಕಾರಕ್ಕೆ ಸಹಾಯವಾಗುವ ಸಾಧ್ಯತೆ ಹಾಗಾಗಿ ಆ ಒಗ್ಗಟ್ಟು ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಆಯ್ಕೆ ಸೂಕ್ತವೇ ಆಗಿದೆ.
ಸರ್ಕಾರವನ್ನು ತಿದ್ದುವ ಸ್ಥಾನ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ
ರಾಜಕೀಯ ಲೆಕ್ಕಾಚಾರಗಳೇನೇ ಇರಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂಬುದರ ಬಗ್ಗೆ ಅನುಮಾನವಿಲ್ಲ. ಜನಾರ್ದನ ರೆಡ್ಡಿ ವಿರುದ್ಧ ತೊಡೆತಟ್ಟಿದ್ದು, ಆಗಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸದನದಲ್ಲಿ ಅಬ್ಬರಿಸಿ ಸಿಎಂಗಳೇ ಬದಲಾಗುವಂತೆ ಮಾಡಿದ್ದು ಎಲ್ಲವೂ ಸಾಮಾನ್ಯದ ಕಾರ್ಯಗಳೇನಲ್ಲ. ವಿಪಕ್ಷ ನಾಯಕ ಸ್ಥಾನದಿಂದ ಸಿಎಂ ಪಟ್ಟಕ್ಕೆ ಏರಿದವರು ಸಿದ್ದರಾಮಯ್ಯ. ಈಗ ಅವರಿಗೆ ಮತ್ತೊಮ್ಮೆ ಸರ್ಕಾರವನ್ನು ತಿದ್ದುವ ಸ್ಥಾನ ದೊರೆತಿದೆ. ಕಳೆದ ಬಾರಿಗಿಂತಲೂ ಈ ಬಾರಿಯ ಸರ್ಕಾರದಲ್ಲಿ ಓರೆ-ಕೋರೆಗಳು ಹೆಚ್ಚಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಸಿದ್ದರಾಮಯ್ಯ ಅವರು ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಬೇಕಿದೆ.