ಉ. ಕರ್ನಾಟಕದ ಜನ ಜೆಡಿಎಸ್ ಸ್ವೀಕರಿಸದೇ ಇರುವುದು ಕುಮಾರಸ್ವಾಮಿ ಅಸಹನೆಗೆ ಕಾರಣವೇ?
Recommended Video
ಅಸಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಾಳ್ಮೆ ಕಳೆದುಕೊಳ್ಳುವುದು ಹೊಸದೇನಲ್ಲ, ಮೋದಿಯನ್ನು ಕೇಳಿ ಎನ್ನುವುದೂ ಇದೇ ಮೊದಲಲ್ಲ. ಆದರೆ, ರಾಯಚೂರಿನಲ್ಲಿ ಬುಧವಾರ (ಜೂ 26) ನಡೆದ ಘಟನೆ ಇಷ್ಟು ಮಟ್ಟಕ್ಕೆ ದೊಡ್ಡ ಸುದ್ದಿಯಾಗಲು ಕಾರಣ, ಲಾಠಿಚಾರ್ಜ್ ಮಾಡಲು ಹೇಳ್ಲಾ ಎಂದಿರುವುದು.
ನಿರೀಕ್ಷೆಯಂತೆ ಬಿಜೆಪಿ, ಸಿಎಂ ಹೇಳಿಕೆ ವಿರುದ್ದ ಬೀದಿಗಿಳಿದರೆ, ಮಿತ್ರಪಕ್ಷ ಕಾಂಗ್ರೆಸ್ ಕೂಡಾ ಕುಮಾರಸ್ವಾಮಿ ನಡೆಗೆ ಬೇಸರ ವ್ಯಕ್ತಪಡಿಸಿದೆ. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿದ್ದಾರೆ, ಇನ್ನು ಮುಂದೆ ಮೋದಿ ಹೆಸರು ಪ್ರಸ್ತಾವಿಸುವುದಿಲ್ಲ ಎಂದಿದ್ದಾರೆ.
ಕಾವೇರಿ ಭಾಗದ ಜಿಲ್ಲೆಗಳಿಗಷ್ಟೇ ನಮ್ಮ ಪಕ್ಷ ಸೀಮಿತವಾದದಲ್ಲ ಎಂದು ಅದೆಷ್ಟೋ ಬಾರಿ ಕುಮಾರಸ್ವಾಮಿ ಹೇಳಿದರೂ, ಉತ್ತರ ಕರ್ನಾಟಕ ಭಾಗದ ಜನರು ಜೆಡಿಎಸ್ ಅನ್ನು ಸ್ವೀಕರಿಸದೇ ಇರುವುದು ಮುಖ್ಯಮಂತ್ರಿಗಳು ತಾಳ್ಮೆ ತಪ್ಪಲು ಕಾರಣವಾದ ಅಂಶ ಎನ್ನುವ ಮಾತು ಕೇಳಿಬರುತ್ತಿದೆ.
ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ, ಚುನಾವಣೆ ಮುಗಿದ ಕೂಡಲೇ ಮಹಾದಾಯಿ ಯೋಜನೆ ಸರಿಪಡಿಸುತ್ತೇನೆ ಎಂದು ಮೋದಿ ಹೇಳಿದ್ದರು. ಅವರು ಸರಿಪಡಿಸಿದ್ರಾ, ಅವರನ್ನು ಬೈಯೋದು ಬಿಟ್ಟು, ನನ್ನನ್ನು ಅಟ್ಯಾಕ್ ಮಾಡುತ್ತೀರಿ ಎಂದು ಹೇಳಿದ್ದು ಬಹಳ ಸುದ್ದಿಯಾಗಿತ್ತು.
ಕುಮಾರಸ್ವಾಮಿ ಮತ್ತು ದೇವೇಗೌಡ್ರ ವಿಶೇಷ ಪ್ರಯತ್ನ
ಮೂರ್ನಾಲ್ಕು ಜಿಲ್ಲೆಗಳಿಗೆ ಜೆಡಿಎಸ್ ಸೀಮಿತ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಕುಮಾರಸ್ವಾಮಿ ಮತ್ತು ದೇವೇಗೌಡ್ರು ವಿಶೇಷ ಪ್ರಯತ್ನವನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ನಮಗೆ ಕಾಳಜಿಯಿದೆ ಎಂದು ಹಲವು ಬಾರಿ ತೋರ್ಪಡಿಸಿಳ್ಳುತ್ತಿದ್ದರೂ, ಅದ್ಯಾವುದೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇರುವುದರಿಂದ ಸಿಎಂ ಆಗಾಗ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಜೆಡಿಎಸ್ ಗೆ ಮತ ಹಾಕಿದವರಿಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಗಳೇ?
ಬೆಳಗಾವಿಯಲ್ಲಿ ಅಧಿವೇಶನ ಮಾಡುವ ಪ್ರಮುಖ ನಿರ್ಧಾರ ಕುಮಾರಸ್ವಾಮಿ ತೆಗೆದುಕೊಂಡಿದ್ದು
ಬೆಂಗಳೂರಿನಿಂದ ದೂರ ಬೆಳಗಾವಿಯಲ್ಲಿ ಅಧಿವೇಶನ ಮಾಡುವ ಪ್ರಮುಖ ನಿರ್ಧಾರವನ್ನು ಕುಮಾರಸ್ವಾಮಿ ತಮ್ಮ ಸಿಎಂ ಅವಧಿಯಲ್ಲಿ ತೆಗೆದುಕೊಂಡಿದ್ದರು. 450ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸುವರ್ಣ ಸೌಧ ನಿರ್ಮಾಣಕ್ಕೆ ಕುಮಾರಸ್ವಾಮಿ ಕಾರಣ ಎನ್ನುವ ಕನಿಷ್ಠ ಸೌಜನ್ಯ ನಿಮಗಿಲ್ಲದಿದ್ದರೆ ಹೇಗೆ, ದೇವರು ನಿಮ್ಮನ್ನು ಮೆಚ್ಚುತ್ತಾನಾ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಈ ಹಿಂದೆ (ಸಿಎಂ ಆದ ನಂತರ) ಕುಮಾರಸ್ವಾಮಿ ಆ ಭಾಗದ ಜನರನ್ನು ಪ್ರಶ್ನಿಸಿದ್ದರು.
ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಇರುವವರು ನಾವು
ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಇರುವವರು ನಾವು, ಭಂಡ ರಾಜಕೀಯ ನಾವು ಮಾಡುವುದಿಲ್ಲ ಎಂದು ಹತ್ತುಹಲವಾರು ಬಾರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅದು ವರ್ಕೌಟ್ ಆಗಿರಲಿಲ್ಲ. ಇಪ್ಪತ್ತು ತಿಂಗಳು ಸಿಎಂ ಆಗಿದ್ದ ಅವಧಿಯಲ್ಲಿ, ರೈತರ ಸಾಲಮನ್ನಾ ಮಾಡಿದಾಗ ಅದರ ಸಿಂಹಪಾಲು ಫಲಾನುಭವಿಗಳು ಆ ಭಾಗದ ರೈತರೇ ಆಗಿದ್ದರು. ಈ ವಿಚಾರವನ್ನೂ ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದರು.
ಗ್ರಾಮ ವಾಸ್ತವ್ಯಕ್ಕೆ ಸಿಎಂ ಆಯ್ಕೆಮಾಡಿಕೊಂಡಿದ್ದು ಯಾದಗಿರಿ, ರಾಯಚೂರು ಜಿಲ್ಲೆ
ಈ ಬಾರಿ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಆಯ್ಕೆಮಾಡಿಕೊಂಡಿದ್ದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು, ಇದಾದ ನಂತರ ಬೀದರ್. ಹೀಗೆ, ಆಭಾಗದ ಜನರ ಮನಗೆಲ್ಲಲು ಕುಮಾರಸ್ವಾಮಿ ಸತತ ಪ್ರಯತ್ನ ನಡೆಸುತ್ತಿದ್ದರೂ, ಚುನಾವಣೆಯಲ್ಲಿ ಮಾತ್ರ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತವಾಗುತ್ತಿಲ್ಲ. ಈ ಬೇಸರ, ಅಸಹನೆಯಾಗಿ ಕುಮಾರಸ್ವಾಮಿ ಮಾತಿನಲ್ಲಿ ವ್ಯಕ್ತವಾಗುತ್ತಿರುವುದು ಕಾಣಬಹುದಾಗಿದೆ.
ಕರಾವಳಿ ಭಾಗದ ಜನರ ಮೇಲೂ ದೇವೇಗೌಡ್ರ ಕುಟುಂಬದ ಹೇಳಿಕೆ
ಕರಾವಳಿ ಭಾಗದ ಜನರ ಮೇಲೂ ದೇವೇಗೌಡ್ರ ಕುಟುಂಬ ಇತ್ತೀಚೆಗೆ ಬೇಸರ ಹೊರಹಾಕಿದ್ದು ಗೊತ್ತೇ ಇದೆ. ಹಲವು ಪ್ರಯತ್ನದ ನಂತರವೂ ಜೆಡಿಎಸ್ ಪಕ್ಷವು ಹಳೇ ಮೈಸೂರು ಭಾಗಕ್ಕೆ ಸೀಮಿತವಾದರೆ, ಮುಂದಿನ ದಿನಗಳಲ್ಲಿ ಪಕ್ಷದ ಭವಿಷ್ಯವೇನು ಎನ್ನುವ ಚಿಂತೆ ಗೌಡ್ರು ಮತ್ತು ಕುಮಾರಸ್ವಾಮಿವರದ್ದು. ಅದಕ್ಕಾಗಿ, ಹಲವು ಕ್ರಿಯಾಯೋಜನೆಯನ್ನು ಹಾಕಿಕೊಂಡು ಮುಂದುವರಿಯುತ್ತಿದ್ದರೂ, ಆ ಭಾಗದ ಜನರು ರಾಷ್ಟ್ರೀಯ ಪಕ್ಷಗಳತ್ತವೇ ತಮ್ಮ ಚಿತ್ತ ಹರಿಸುತ್ತಿರುವುದು ಕುಮಾರಸ್ವಾಮಿ ತಾಳ್ಮೆ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಇದ್ದಿರಬಹುದು.