ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆಗಿದ್ದೇಕೆ? ಇಲ್ಲಿದೆ ಕಾರಣ
Recommended Video
ಮಡಿಕೇರಿ, ಆಗಸ್ಟ್ 25: ನಿನ್ನೆ ಪ್ರವಾಹ ಪೀಡಿತ ಕೊಡಗು ವೀಕ್ಷಣೆಗೆ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿವಾದದ ಗಾಳಿ ಎಬ್ಬಿಸಿ ಹೋಗಿದ್ದಾರೆ. ಅವರು ನೀಡಿದ ಅಲ್ಪ ಅನುದಾನದ ಜೊತೆಗೆ ಅವರ ವರ್ತನೆಯೂ ರಾಜ್ಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ನಿನ್ನೆ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಆಗಮಿಸಿದ ಅವರು, ಮಾಧ್ಯಮದವರ ಎದುರೇ ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಹರಿಹಾಯ್ದಿದ್ದರು. ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಅವರು ಆರೋಪಿಸಿದ್ದರು.
ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಹಾಗಿದ್ದರೆ ನಿಜವಾಗಿಯೂ ನಡೆದಿದ್ದು ಏನು ಎಂಬುದು ಈಗ ಎದ್ದಿರುವ ಪ್ರಶ್ನೆ. ಉತ್ತರ ಹುಡುಕುತ್ತಾ ಹೋದರೆ ಅಲ್ಲಿ ನಿರ್ಮಲಾ ಸೀತಾರಾಮನ್ ಅವರ ತಪ್ಪೇ ಮೇಲ್ನೋಟಕ್ಕೆ ಕಾಣುತ್ತದೆ.
ಮೊದಲಿಗೆ ಇದ್ದ ಕಾರ್ಯಕ್ರಮ ಪಟ್ಟಿಯೇ ಬೇರೆ
ಹೌದು, ಮೊದಲಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಯಾರಿಸಿದ್ದ ಕಾರ್ಯಕ್ರಮಪಟ್ಟಿಯಲ್ಲಿ ಹೆಚ್ಚಿನ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಇತ್ತು. ಜೊತೆಗೆ ಸರ್ಕಾರಿ ನಿರಾಶ್ರಿತರ ಶಿಬಿರ ಭೇಟಿಯೂ ಇತ್ತು. ಆದರೆ ಆ ನಂತರ ಬದಲಾದ ಪಟ್ಟಿಯಲ್ಲಿ ಇವು ಮಾಯವಾಗಿದ್ದವು.
ಕೇಂದ್ರ ಸಚಿವೆ, ಉಸ್ತುವಾರಿ ಸಚಿವರನ್ನು ಹಿಂಬಾಲಿಸುವುದಾ?
ಸಾ.ರಾ.ಮಹೇಶ್ ಅವರು ಪ್ರವಾಹ ಪೀಡಿತ ಸ್ಥಳಗಳಿಗೆ ರಕ್ಷಣಾ ಸಚಿವೆ ಅವರನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಕೆರಳಿದ ಸಚಿವೆ ಅವರು 'ಕೇಂದ್ರ ಸಚಿವೆ ಆಗಿ, ಉಸ್ತುವಾರಿ ಸಚಿವರನ್ನು ಹಿಂಬಾಲಸಿಸುವುದಾ? ಇದು ನಂಬಲಸಾಧ್ಯ' ಎಂದು ದರ್ಪ ಪ್ರದರ್ಶಿಸಿದ್ದರು.
ಕೊಡಗಿಗೆ 1 ಕೋಟಿ ನೀಡಿದ ಕೇಂದ್ರ ಸಚಿವೆ, ಹೆಚ್ಚಿನ ನೆರವಿಗೆ ಮನವಿ ಮಾಡುವುದಾಗಿ ಭರವಸೆ
ಕಾರ್ಯಕ್ರಮ ಬದಲಾವಣೆಯಲ್ಲಿ ಸಂಸದರೊಬ್ಬರ ಕೈವಾಡ
ಮೊದಲು ತಯಾರಾದ ಕಾರ್ಯಕ್ರಮ ಪಟ್ಟಿ ಬದಲಾಗಲು ಸಂಸದರೊಬ್ಬರ 'ಕೈವಾಡ' ಕಾರಣ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಆದರೆ ಮೊದಲು ತಯಾರಾದ ಕಾರ್ಯಕ್ರಮ ಪಟ್ಟಿಯ ಬಗ್ಗೆ ಮಾತ್ರವೇ ಮಾಹಿತಿ ಇದ್ದ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ರಕ್ಷಣಾ ಸಚಿವರಿಗಾಗಿ ಕುಶಾಲನಗರದ ಹಾಗೂ ಮತ್ತಿತರ ಕಡೆ ಕಾಯುತ್ತಿದ್ದರು ಆದರೆ ಇದು ರಕ್ಷಣಾ ಸಚಿವೆಯ ಕಾರ್ಯಕ್ರಮದ ಪಟ್ಟಿಯಿಂದಲೇ ರದ್ದಾದವು.
ಸೇವಾಭಾರತಿ ಮೊದಲ ಪಟ್ಟಿಯಲ್ಲಿರಲಿಲ್ಲ
ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಮೊದಲು ತಯಾರಿಸಿದ್ದ ಕಾರ್ಯಕ್ರಮ ಪಟ್ಟಿಯಲ್ಲಿ ಸೇವಾಭಾರತಿಯ ನಿರಾಶ್ರಿತರ ಶಿಬಿರ ಹಾಗೂ ಮಾದಾಪುರ ರಕ್ಷಣಾ ಸಚಿವೆ ಅವರ ಭೇಟಿಯ ಪಟ್ಟಿಯಲ್ಲಿ ಇರಲಿಲ್ಲ ಆದರೆ ಆ ನಂತರ ಇದನ್ನು ಸೇರಿಸಲಾಯಿತು. ಇದಕ್ಕೆ ಕಾರಣ ಅದು ಬಿಜೆಪಿ ಶಾಸಕರ ಕ್ಷೇತ್ರದಲ್ಲಿರುವುದು ಮತ್ತು ಬಿಜೆಪಿಯ ಮಾತೃ ಸಂಸ್ಥೆ ಎಂದೇ ಕರೆಸಿಕೊಳ್ಳುವ ಆರ್ಎಸ್ಎಸ್ ಆ ಪ್ರದೇಶದಲ್ಲಿ ನಿರಾಶ್ರಿತರ ಶಿಬಿರ ನಡೆಸುತ್ತಿರುವುದು.
ಸಚಿವೆ ಬಂದಿದ್ದು ಜನರಿಗಾಗಿಯಾ, ಆರ್ಎಸ್ಎಸ್ ಮೆಚ್ಚಿಸಲಾ?
ಸಚಿವೆ ನಿರ್ಮಲಾ ಅವರು, ಸಿಟ್ಟಿನಿಂದ ಸಾ.ರಾ.ಮಹೇಶ್ ಜೊತೆ ಮಾತನಾಡುವುಗಲೂ 'ನನಗೆ 'ಪರಿವಾರ'ವೂ ಎಂದಿರುವುದು ಆರ್ಎಸ್ಎಸ್ ಅನ್ನೇ ಎನ್ನಲಾಗುತ್ತಿದೆ. ಸಚಿವೆ ನಿರ್ಮಲಾ ಸೀತಾರಮನ್ ಅವರು ಸರ್ಕಾರದ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡದೆ ಆರ್ಎಸ್ಎಸ್ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗುತ್ತಿದೆ. ಸಚಿವೆ ಬಂದಿದ್ದು ಜನರ ಕಷ್ಟ ನೋಡಲಾ ಅಥವಾ ಆರ್ಎಸ್ಎಸ್ ನವರನ್ನು ಮೆಚ್ಚಿಸಲಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಕೆಎಸ್ಆರ್ಟಿಸಿ ನೌಕರರಿಗಿಂತಲೂ ಕಡಿಮೆ ಮೊತ್ತ ಕೊಟ್ಟ ಕೇಂದ್ರ ಸಚಿವೆ
ನಿರ್ಮಲಾ ಸೀತಾರಾಮನ್ ಅವರು ನೀಡಿದ ಅಲ್ಪ ಮೊತ್ತದ ಅನುದಾನದ ಬಗ್ಗೆಯೂ ಸಾಕಷ್ಟು ವಿವಾದ ಎದ್ದಿದೆ. ನಿರ್ಮಲಾ ಅವರು ತಮ್ಮ ಸಂಸದರ ನಿಧಿಯಿಂದ ಒಂದು ಕೋಟಿ ಮತ್ತು ರಕ್ಷಣಾ ಇಲಾಖೆಯಿಂದ 7 ಕೋಟಿ ನೀಡಿದ್ದರು. ಇದು ಅತ್ಯಂತ ಕಡಿಮೆ ಎಂದು ಈಗಾಗಲೇ ಅಸಮಾಧಾನ ಎದ್ದಿದೆ. ಕೆಎಎಸ್ಆರ್ಟಿಸಿ ಸಿಬ್ಬಂದಿ ನೀಡಿದ್ದು 11.08 ಕೋಟಿ ಆದರೆ ಕೇಂದ್ರದ ಸಚಿವೆ ಅದೂ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆದವರು ಕೊಟ್ಟಿದ್ದು 8 ಕೋಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.