ಕಾಂಗ್ರೆಸ್ ತೊರೆದ ಕಾರಣ ಬಿಚ್ಚಿಟ್ಟ ಬಾಬೂರಾವ್ ಚಿಂಚನಸೂರು!
ಬೆಂಗಳೂರು, ಆಗಸ್ಟ್ 29 : 'ನನ್ನ ಜನ ಬೆಂಬಲ, ವರ್ಚಸ್ಸು ನೋಡಿ ಚುನಾವಣೆಯಲ್ಲಿ ಗೆದ್ದರೆ ಪವರ್ ಫುಲ್ ಮಿನಿಸ್ಟರ್ ಆಗುತ್ತಾರೆ ಎಂದು ನಮ್ಮ ಪಕ್ಷದವೇ ನನ್ನನ್ನು ಸೋಲಿಸಿದರು. ಇದರಿಂದ ಸಾಕಷ್ಟು ನೋವಾಗಿದೆ. ಆದ್ದರಿಂದ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇನೆ' ಎಂದು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು ಹೇಳಿದರು.
ಗುರುಮಿಠಕಲ್ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಬಾಬೂರಾವ್ ಚಿಂಚಿನಸೂರು ಅವರು ಬುಧವಾರ ಬಿ.ಎಸ್.ಯಡಿಯೂರಪ್ಪ ಸಮ್ಮಖದಲ್ಲಿ ಪತ್ನಿ ಸಮೇತರಾಗಿ ಬಿಜೆಪಿಗೆ ಸೇರಿದರು. ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆಯಲ್ಲಿ ಇದರಿಂದ ಕಾಂಗ್ರೆಸ್ಗೆ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.
ಬಿಜೆಪಿ ಸೇರಿದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರು
'2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋಲಲು ನಮ್ಮ ಪಕ್ಷ, ಪಕ್ಷದ ನಾಯಕರೇ ಕಾರಣ. ನಮ್ಮ ಸಮಾಜವನ್ನು ಕಾಂಗ್ರೆಸ್ ಕಡೆಗಣಿಸಿದೆ. ಆದ್ದರಿಂದ, ಬಿಜೆಪಿ ಸೇರುತ್ತಿದ್ದೇನೆ' ಎಂದು ಬಾಬೂರಾವ್ ಚಿಂಚನಸೂರು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಾಬೂರಾವ್ ಚಿಂಚನಸೂರು ಅವರು 55,147 ಮತಗಳನ್ನು ಪಡೆದು ಜೆಡಿಎಸ್ನ ನಾಗನಗೌಡ ವಿರುದ್ಧ ಸೋಲು ಅನುಭವಿಸಿದ್ದರು. ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.....
ಬಿಜೆಪಿ ನಮ್ಮ ಸಮುದಾಯವನ್ನು ಗುರುತಿಸಿದೆ
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರು ಅವರು, 'ಕೋಲಿ, ಕಬ್ಬಿಗ, ಅಂಬಿಗ ಸಮಾಜದವರನ್ನು ಬಿಜೆಪಿ ಗುರುತಿಸಿದೆ. ಅಲ್ಲದೇ ಪಕ್ಷ ನಮ್ಮ ಸಮಾಜದ ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದ್ದಾರೆ. ಸಾಧ್ವಿ ನಿರಂಜನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ. ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹೇಳಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು
'ನಾನು ಹಿಂದೆ 2 ಸಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಚಿವನಾಗಿದ್ದೆ. ಎಐಸಿಸಿ ಸದಸ್ಯ, ಕೆಪಿಸಿಸಿ ಕಾರ್ಯದರ್ಶಿಯಾಗಿದ್ದೆ. ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇನೆ' ಎಂದು ಬಾಬೂರಾವ್ ಚಿಂಚನೂರು ಹೇಳಿದರು.
'ನನ್ನ ಆಸೆ ಎರಡೇ ಒಂದು ಗುರುಮಿಠಕಲ್ ಜನರ ಸೇವೆ ಮಾಡುವುದು ಮತ್ತೊಂದು ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು. ಅದಕ್ಕಾಗಿ ಬಿಜೆಪಿ ಸೇರಿದ್ದೇನೆ' ಎಂದು ಹೇಳಿದರು.
ನಮ್ಮ ಸಮಾಜವನ್ನು ಗುರುತಿಸಲಿಲ್ಲ
'ನಾನು ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ನಮ್ಮ ಸಮಾಜವನ್ನು ಕಾಂಗ್ರೆಸ್ ಗುರುತಿಸಲಿಲ್ಲ. ನಮ್ಮ ಸಮಾಜವನ್ನು ಕಡೆಗಣಿಸಿದ್ದಕ್ಕಾಗಿ ಪಕ್ಷವನ್ನು ಬಿಟ್ಟಿದ್ದೇನೆ' ಎಂದರು.
'ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನನ್ನ ಕನಸು. ಈ ಬಗ್ಗೆ ಬಿಜೆಪಿ ಉನ್ನತ ಮಟ್ಟದ ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ' ಎಂದು ಹೇಳಿದರು.
ಬಹಳಷ್ಟು ನೋವು ತಂದಿದೆ
'2018ರ ಚುನಾವಣೆಯಲ್ಲಿ ಸೋತಿದ್ದು ಬಹಳಷ್ಟು ನೋವು ತಂದಿದೆ. ನಮ್ಮ ಪಕ್ಷದವೇ ನನ್ನ ಸೋಲಿಗೆ ಕಾರಣ. ನಾನು ಚುನಾವಣೆಯಲ್ಲಿ ಗೆದ್ದರೆ ಪವರ್ ಫುಲ್ ಸಚಿವನಾಗುತ್ತೇನೆ ಎಂದು ನಮ್ಮವರೇ ನನ್ನನ್ನು ಸೋಲಿಸಿದ್ದಾರೆ. ನನ್ನ ಜನ ಬೆಂಬಲ, ವರ್ಚಸ್ಸು ನೋಡಿ ಸೋಲಿಸಿದ್ದಾರೆ' ಎಂದು ಬಾಬೂರಾವ್ ಚಿಂಚನಸೂರು ಆರೋಪಿಸಿದರು.