ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸಂದರ್ಶನ
ಬೆಂಗಳೂರು, ಆಗಸ್ಟ್ 1: "ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಕನ್ನಡದಲ್ಲೇ ಚಲನ್ ತುಂಬಬೇಕು. ಅಲ್ಲಿನ ಉದ್ಯೋಗಿಗೆ ಕನ್ನಡ ಬರಲ್ಲ ಅನ್ನೋದಾದರೆ ಕೆಲಸ ಬಿಟ್ಟು ಹೋಗಲಿ. ಆ ಜಾಗಕ್ಕೆ ಕನ್ನಡಿಗರನ್ನು ನೇಮಿಸಿಕೊಳ್ಳಲಿ. ಮೊದಲಿಗೆ ಕನ್ನಡಿಗರಿಗೆ ಕನ್ನಡ ಬಳಸುವ ಇಚ್ಛಾಶಕ್ತಿ ಮೂಡಬೇಕು"
-ಹೀಗೆ ಒಂದೇ ಉಸಿರಿನಲ್ಲಿ ಏರು ಧ್ವನಿಯಲ್ಲಿ ಹೇಳಿದವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ.
ವಿಮಾನ ನಿಲ್ದಾಣದಲ್ಲೂ ಕನ್ನಡ: ಆನ್ ಲೈನ್ ಅಭಿಯಾನಕ್ಕೆ ನೀವೂ ಸಹಿ ಮಾಡಿ
ಇತ್ತೀಚೆಗೆ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬುದು ಸೇರಿದಂತೆ ಕನ್ನಡ ಅನುಷ್ಠಾನದ ಬಗ್ಗೆ ಅವರ ಜತೆಗೆ ಒನ್ಇಂಡಿಯಾ ಕನ್ನಡ ಮಂಗಳವಾರ ಸಂದರ್ಶನ ನಡೆಸಿದೆ. ಕೆಲವು ಕಡೆ ಉಗ್ರವಾಗಿಯೂ, ಕೆಲ ವಿಚಾರದಲ್ಲಿ ಮನೆ ಹಿರಿಯರಂಥ ಸಂಯಮ-ತಾಳ್ಮೆಯಿಂದಲೂ ಅವರು ಉತ್ತರಿಸಿದ್ದಾರೆ.
ಕನ್ನಡದ ಮೇಲಿನ ಆಕ್ರಮಣ ಸಹಿಸೋಲ್ಲ: ಸಿದ್ದು ಖಡಕ್ ಸಂದೇಶ
ಕೆಲವು ಶಾಲೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಾರೆ. ಎಷ್ಟೋ ಕಂಪನಿಗಳ ಗ್ರಾಹಕ ಸೇವಾ ವಿಭಾಗದಲ್ಲಿ ಕನ್ನಡದಲ್ಲಿ ಸೇವೆ ಒದಗಿಸುತ್ತಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳನ್ನು ಕಾಟಾಚಾರಕ್ಕೆ ಪ್ರದರ್ಶಿಸಲಾಗುತ್ತಿದೆ. ಹೀಗೆ ಅನೇಕ ವಿಚಾರಗಳು ಪ್ರಶ್ನೆ ರೂಪದಲ್ಲಿ ಅವರ ಮುಂದೆ ಇಟ್ಟು, ಉತ್ತರ ಪಡೆದಿದ್ದೇವೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಪ್ರಶ್ನೆ: ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಹೇರಲಾಗುತ್ತಿದೆ ಅಂತೀರಾ?
ಉತ್ತರ: ಖಂಡಿತಾ ಹೌದು. ಹಿಂದಿ ಹೇರಿಕೆ ಅನ್ನೋದೇ ಸರಿಯಾದ ಪದ. ಬಿಎಂಆರ್ ಸಿಎಲ್ ಅನ್ನೋದು ಕರ್ನಾಟಕ ಸರಕಾರದ ಅಡಿಯಲ್ಲಿ ಕೆಲಸ ಮಾಡುವಂಥದ್ದು. ಮೆಟ್ರೋ ರೈಲು ಸಂಚರಿಸುವುದು ಕರ್ನಾಟಕದ ನೆಲವಾದ ಬೆಂಗಳೂರಿನಲ್ಲಿ. ಇಲ್ಲಿ ನೆಲ-ವಿದ್ಯುತ್-ಹಣದಲ್ಲಿ ಓಡುವ ರೈಲು ವ್ಯವಸ್ಥೆಗೆ ಹಿಂದಿ ಮಾಹಿತಿ ಏಕೆ?
ನರೇಗಾದ-ಜೆ ನರ್ಮ್ ನಂಥ ಯೋಜನೆಗೂ ಕೇಂದ್ರ ಸರಕಾರ ಅನುದಾನ ನೀಡುತ್ತದೆ. ಹಾಗಂತ ಅಲ್ಲೆಲ್ಲ ಹಿಂದಿ ಬಳಕೆ ಮಾಡೋಕಾಗುತ್ತಾ? ಮೆಟ್ರೋದಲ್ಲಿ ರಾಜ್ಯ ಸರಕಾರದ ಹೂಡಿಕೆಯೇ ಹೆಚ್ಚಿದೆ. ಇಲ್ಲಿ ಕೇಂದ್ರ ಸರಕಾರ ಹಿಂದಿ ಹೇರಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ನೆಲದ ಭಾಷೆ ಬಳಸಬೇಕೇ ವಿನಾ, ತ್ರಿ ಭಾಷಾ ಸೂತ್ರವಲ್ಲ.
ಪ್ರಶ್ನೆ: ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳ ಗ್ರಾಹಕ ಸೇವಾ ವಿಭಾಗದವರು ಕನ್ನಡವೇ ಬಳಸುವುದಿಲ್ಲವಲ್ಲಾ?
ಉತ್ತರ: ಯಾವುದೇ ರಾಜ್ಯದ ನೆಲ, ನೀರು, ಜನರ ಹಣದಲ್ಲಿ ಬದುಕುವಾಗ ಅಲ್ಲಿನ ಭಾಷೆ ಕಲಿಯುವುದು ಕನಿಷ್ಠ ಕೃತಜ್ಞತೆ. ಜತೆಗೆ ನೈತಿಕ ಪ್ರಜ್ಞೆ. ರಾಜ್ಯ ಸರಕಾರದ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯುವಾಗಲೇ ಷರತ್ತು ಹಾಕಬೇಕು. ಕನ್ನಡ ಬಳಸಲೇ ಬೇಕು. ಕನ್ನಡದ ವಾತಾವರಣ ಸೃಷ್ಟಿಸಲೇ ಬೇಕು.
ಒಂದು ವೇಳೆ ಹಾಗೆ ಆಗಲಿಲ್ಲ ಅಂದ ಪಕ್ಷದಲ್ಲಿ ಅವರ ವ್ಯವಹಾರದ ಪರವಾನಗಿಯೇ ರದ್ದು ಮಾಡಬೇಕು. ಈ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ.
ಪ್ರಶ್ನೆ: ಈ ಬಗ್ಗೆ ನಿಮಗೆ ಈ ವರೆಗೆ ಎಷ್ಟು ದೂರುಗಳು ಬಂದಿವೆ?
ಉತ್ತರ: ಸಾಕಷ್ಟು ದೂರುಗಳು ಬಂದಿವೆ. ಬರುತ್ತಲೇ ಇವೆ. ಈ ವಿಚಾರದಲ್ಲಿ ಪ್ರಾಧಿಕಾರ ಕೂಡ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಪ್ರಶ್ನೆ: ಮೈಸೂರಿನ ಸಿಎಫ್ ಟಿಆರ್ ಐ ಪ್ರಕರಣಾ ಏನು, ಅಲ್ಲಿ ಸಭೆ ನಡೆಸಿದ್ದರಲ್ಲಾ ಏನಾಯಿತು?
ಉತ್ತರ: ಅದು ಹಳೇ ಪ್ರಕರಣವಾಗಿತ್ತು. ಕನ್ನಡ ಬಳಸಿದರೂ ಅನ್ನೋ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿ ಕನ್ನಡದ ವಾತಾವರಣ ನಿರ್ಮಾಣಕ್ಕೆ, ಕೆಲಸದಿಂದ ತೆಗೆದಿದ್ದವರನ್ನು ವಾಪಸ್ ತೆಗೆದುಕೊಳ್ಳುವುದಿಕ್ಕೆ ಸೂಚಿಸಿದೆವು. ಅದರಂತೆ ನಡೆದುಕೊಂಡಿದ್ದಾರೆ. ಆ ಬಗ್ಗೆ ವರದಿ ಕೂಡ ಸಲ್ಲಿಸಿದ್ದಾರೆ.
ಪ್ರಶ್ನೆ: ಎಷ್ಟೋ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ಮಕ್ಕಳಿಗೆ ದಂಡ ಹಾಕುವ ಪ್ರವೃತ್ತಿ ಇದೆ. ಇದಕ್ಕೆ ಪೋಷಕರು ಕೂಡ ತಕರಾರು ಮಾಡಲ್ವಲ್ಲ?
ಉತ್ತರ: ರಾಜ್ಯ ಸರಕಾರವು ಎಲ್ಲ ಶಾಲೆಗಳಲ್ಲೂ (ಕೇಂದ್ರೀಯ ವಿದ್ಯಾಲಯವೂ ಸೇರಿದಂತೆ) ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಆದೇಸ ಹೊರಡಿಸಿದೆ. ಈ ನಿಯಮವನ್ನು ಮೀರಲು ಸಾಧ್ಯವಿಲ್ಲ. ಇದನ್ನು ಶಿಕ್ಷಣ ಇಲಾಖೆ ಕಾರ್ಯದರ್ಶಿ ಖಾತ್ರಿ ಪಡಿಸಬೇಕು. ಒಂದು ವೇಳೆ ನಿಯಮ ಮೀರಿದರೆ ಹಕ್ಕು ಚ್ಯುತಿ ಮಂಡಿಸ್ತೀವಿ.
ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸುವಾಗ ದಂಡ ಹಾಕುವ ಮಾತೆಲ್ಲಿ ಬಂತು?
ಪ್ರಶ್ನೆ: ಬೇರೆ ರಾಜ್ಯದಿಂದ ವರ್ಗಾವಣೆಯಾಗಿ ಬಂದಿರ್ತಾರೆ. ಐದು-ಆರನೇ ತರಗತಿಯಲ್ಲಿ ಕನ್ನಡ ಕಲಿಸೋದು ಕಷ್ಟ ಅನ್ನೋದು ಶಾಲೆಯವರ ವಾದ. ಅದಕ್ಕೇನಂತೀರಿ?
ಉತ್ತರ: ಅವರೇ ಬೇರೆ ರಾಜ್ಯಕ್ಕೋ ಅಥವಾ ದೇಶಕ್ಕೋ ಹೋದರೆ ಇದೇ ಮಾತಾಡ್ತಾರಾ? ಜರ್ಮನಿಗೆ ಹೋದರೆ ಮೊದಲಿಗೆ ಕಡ್ಡಾಯವಾಗಿ ಅಲ್ಲಿನ ಭಾಷೆ ಕಲಿಯಬೇಕು. ಬೇರೆ ರಾಜ್ಯಕ್ಕೆ ಹೋದರೂ ಅಲ್ಲಿನ ಭಾಷೆ ಕಲಿಯಲೇ ಬೇಕು. ಹಾಗಿದ್ದ ಮೇಲೆ ಕನ್ನಡ ಕಲಿಯುದಕ್ಕೆ ಏನು?
ಪ್ರಶ್ನೆ: ಎಫ್ ಎಂ ರೇಡಿಯೋಗಳಲ್ಲಿ ಕ್ರಮೇಣವಾಗಿ ಕನ್ನಡ ಕಾರ್ಯಕ್ರಮಗಳೇ ಕಡಿಮೆ ಆಗುತ್ತಿವೆಯಲ್ಲಾ?
ಉತ್ತರ: ಅದು ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಬರುತ್ತದೆ. ಅವರು ಕನಿಷ್ಠವಾದರೂ ಕನ್ನಡ ಬಳಸುತ್ತಾರಲ್ಲಾ ಅಂತ ಸುಮ್ಮನಿರಬೇಕಿದೆ.
ಪ್ರಶ್ನೆ: ಎಷ್ಟೋ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ಯಾವಾಗಲೋ ಮಾಡುತ್ತಾರೆ. ಅಂದರೆ ಜನ ನೋಡಲಿ ಅನ್ನೋ ಉದ್ದೇಶವೇ ಇರುವುದಿಲ್ಲ. ಈ ಬಗ್ಗೆ ಪ್ರಾಧಿಕಾರ ಕ್ರಮ ತೆಗೆದುಕೊಂಡಿದೆಯಾ?
ಉತ್ತರ: ಇದು ಕರ್ನಾಟಕ ಚಲನಚಿತ್ರ ಅಕಾಡೆಮಿಯವರ ಜವಾಬ್ದಾರಿ. ಆ ಬಗ್ಗೆ ಅವರು ಗಮನ ಹರಿಸಬೇಕು.
ಪ್ರಶ್ನೆ: ಕನ್ನಡ ಕಲಿಯದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಎಲ್ಲಿಗೆ ಬಂತು?
ಉತ್ತರ: ಸನ್ಮಾನ್ಯ ಮುಖ್ಯಮಂತ್ರಿಗಳೇ ಈ ಬಗ್ಗೆ ನಿನ್ನೆ (ಸೋಮವಾರ) ಹೇಳಿಕೆ ನೀಡಿದ್ದಾರೆ. ಕನ್ನಡ ವಿರೋಧಿ ಮನಸ್ಸುಗಳನ್ನು ಸಲಹುವ-ಸಹಿಸಿಕೊಳ್ಳುವ ಮಾತೇ ಇಲ್ಲ. ಈ ವಿಚಾರದಲ್ಲಿ ಹೆಸರನ್ನು ಹೇಳುವ ಅಗತ್ಯ ಇಲ್ಲ. ಕನ್ನಡ ವಿರೋಧಿ ಅಧಿಕಾರಿಗಳಿಗೆ ತಕ್ಕ ಶಾಸ್ತಿ ನಿಶ್ಚಿತ.
ಪ್ರಶ್ನೆ: ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾದಾಗ ನಿಮ್ಮ ಮೇಲೆ ಒತ್ತಡ ಬಂದಿದ್ದು ಇದೆಯಾ?
ಉತ್ತರ: ಮೊದಲನೆಯದಾಗಿ ಇಲ್ಲ. ಒಂದು ವೇಳೆ ಬಂದರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಬಗ್ಗುವ ಮಾತೇ ಇಲ್ಲ.
ಪ್ರಶ್ನೆ: ಬಿಎಂಆರ್ ಸಿಎಲ್ ನಲ್ಲಿ ಎಂಜಿನಿಯರ್ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಿ ಎಂಬ ಆದೇಶ ನೀಡಲು ಕಾರಣ ಏನು?
ಉತ್ತರ: ಕನ್ನಡಿಗರಿಗೆ ತಾಂತ್ರಿಕ ಹುದ್ದೆ ನೀಡಲು ಕಷ್ಟ ಎಂಬುದು ಅವರ ಮಾತಾಗಿತ್ತು. ಈಚೆಗೆ ಅಮೆರಿಕದಲ್ಲಿ ಕೆಲಸ ಮಾಡಿ ಹಿಂತಿರುಗಿದ ವ್ಯಕ್ತಿಯೊಬ್ಬರು, ನಾನು ಉಚಿತವಾಗಿ ಮೆಟ್ರೋ ಯೋಜನೆಗೆ ಕೆಲಸ ಮಾಡುತ್ತೇನೆ ಎಂದು ಮುಂದೆ ಬಂದಿದ್ದಾರೆ. ಅದಕ್ಕೆ ಅವಕಾಶ ನೀಡಿಲ್ಲ.
ಆಗ ಗೊತ್ತಾಯಿತು, ಇವರು ಹಸಿ ಸುಳ್ಳು ಹೇಳುತ್ತಿದ್ದಾರೆ. ಇಂಥದ್ದನ್ನೆಲ್ಲ ಬಿಟ್ಟು ಈ ನೆಲದ ಜನರಿಗೆ ಉದ್ಯೋಗ ಕೊಡಬೇಕು. ಏಕೆ, ಇಲ್ಲಿ ಎಂಜಿನಿಯರುಗಳಿಲ್ಲವಾ? ಅವರು ಕೆಲಸ ಮಾಡುವಷ್ಟು ಅರ್ಹರಲ್ಲವಾ? ಅದಕ್ಕಾಗಿಯೇ ಈ ನಿಯಮ ತರಲು ಮುಂದಾಗಿದ್ದು.
ಪ್ರಶ್ನೆ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ತರುವ ನಿರ್ಧಾರ ಏನಾಯಿತು?
ಉತ್ತರ: ಇದಕ್ಕೆ ಕೇಂದ್ರ ಸರಕಾರ ಮನಸ್ಸು ಮಾಡಬೇಕು. ಆದರೆ ಅವರಿಗೆ ಹಿಂದಿ ಹೇರಿಕೆ ಬಗ್ಗೆ ಇರುವ ಆಸಕ್ತಿ ಇದರಲ್ಲಿ ಇದ್ದಂತಿಲ್ಲ.
ಪ್ರಶ್ನೆ: ಈಚೆಗೆ ಮಂಡ್ಯದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬ ಹಿಂದಿ ಬರದಿದ್ದರೆ ದೇಶ ಬಿಟ್ಟು ಹೋಗಿ ಅನ್ನೋ ಮಾತನಾಡಿದರಲ್ಲಾ, ಆತನ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಾಯಿತು?
ಉತ್ತರ: ಅಂಥ ದುರಹಂಕಾರದ ಮಾತು ಸಹಿಸುವುದು ಸಾಧ್ಯವೇ ಇಲ್ಲ. ಆತ ಆ ನಂತರ ಕ್ಷಮೆ ಕೇಳಿದ್ದಾನೆ. ಈ ನೆಲದಲ್ಲಿ ಅಧಿಕಾರ ಸ್ಥಾನದಲ್ಲಿ ಇರಬೇಕು ಅಂದರೆ ಕನ್ನಡ ಕಲಿಯಲೇಬೇಕು. ಆ ವಿಷಯದಲ್ಲಿ ಯಾವುದೇ ರಾಜಿ-ರಿಯಾಯಿತಿ ಇಲ್ಲ.
ಪ್ರಶ್ನೆ: ಈಚೆಗೆ ಸರಕಾರದಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಗೆ ಮೀಸಲಿಡುವ ಅಂಕದ ಪ್ರಮಾಣ ಕಡಿಮೆ ಆಗುತ್ತಿದೆಯಲ್ಲಾ?
ಉತ್ತರ: ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಈಚೆಗೆ ಕರೆದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಹುದ್ದೆಗೆ ತಡೆ ನೀಡಿದ್ದೇವೆ. ಕೆಪಿಎಸ್ ಸಿ (ಕರ್ನಾಟಕ ಲೋಕ ಸೇವಾ ಆಯೋಗ) ಮೇಲೆ ಒತ್ತಡ ತಂದು ಅದನ್ನು ಸರಿಪಡಿಸಲು ತಿಳಿಸಿದ್ದೇವೆ.
ಅದನ್ನು ಬದಲಾಯಿಸಿದ ತಕ್ಷಣ ಲಿಖಿತ ರೂಪದಲ್ಲಿ ಬರೆದು ನಮ್ಮ ಗಮನಕ್ಕೂ ತರಬೇಕು ಎಂದು ಸೂಚನೆ ಕೂಡ ನೀಡಲಾಗಿದೆ.