ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ
ಬೆಂಗಳೂರು, ಆಗಸ್ಟ್ 9: ಸಹಕಾರ ಸಂಘ/ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾಗೆ ಸಂಬಂಧಿಸಿದ ಷರತ್ತುಗಳನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಜುಲೈ 10, 2018ರ ವರೆಗೆ ಬಾಕಿ ಇರುವ ಸಾಲದ ಮೊತ್ತಕ್ಕೆ ಇದು ಅನ್ವಯ ಆಗುತ್ತದೆ. ರೈತರ ಒಂದು ಲಕ್ಷ ರುಪಾಯಿವರೆಗಿನ ಸಾಲ ಮನ್ನಾ ಆಗಲಿದೆ. ಅಲ್ಲಿಗೆ ಬಹಳ ದಿನಗಳಿಂದ ಕೇಳಿಬರುತ್ತಿದ್ದ ರೈತರ ಆಕ್ರೋಶದ ಧ್ವನಿ ತಮಣಿ ಮಾಡುವ ಪ್ರಯತ್ನ ಕಾಣುತ್ತಿದೆ.
ಯಾರಿಗೆ ಸಾಲ ಮನ್ನಾ ಯೋಜನೆ ಅನ್ವಯ ಆಗುವುದಿಲ್ಲ ಎಂಬ ಬಗ್ಗೆ ಕೂಡ ರಾಜ್ಯ ಸರಕಾರವು ನಿಯಮ ರೂಪಿಸಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ತಿಂಗಳಿಗೆ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ವೇತನ ಅಥವಾ ಪಿಂಚಣಿ ಬರುತ್ತಿದ್ದು, ಕಳೆದ ಮೂರು ವರ್ಷದ ಅವಧಿಯಲ್ಲಿ ಒಂದು ವರ್ಷದಲ್ಲಾದರೂ ಆದಾಯ ತೆರಿಗೆ ಪಾವತಿಸಿದ್ದರೆ...ಹೀಗೆ ಕೆಲ ನಿಯಮಗಳಿವೆ.
ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
ಇನ್ನು ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ವಿಚಾರವಾಗಿ ಮುಂದಿನ ವಾರ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಸಾಲ ಮನ್ನಾ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಇನ್ನು ಈ ಯೋಜನೆ ವಿಚಾರವಾಗಿ ಸರಕಾರ ಹಾಕಿರುವ ಷರತ್ತು ಅಥವಾ ನಿಯಮಗಳ ಮಾಹಿತಿ ಇಲ್ಲಿದೆ.
ಜುಲೈ 10, 2018ಕ್ಕೆ ಬಾಕಿ ಇರುವ ಸಾಲಕ್ಕೆ ಅನ್ವಯ
* ಈ ಸೌಲಭ್ಯವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ ಗಳು ಮತ್ತು ಪಿಕಾರ್ಡ್ ಬ್ಯಾಂಕ್ ಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ಜುಲೈ 10, 2018ಕ್ಕೆ ಬಾಕಿ ಇರುವ ಹೊರ ಬಾಕಿ ಸಾಲಕ್ಕೆ ಮಾತ್ರ ಅನ್ವಯ ಆಗುತ್ತದೆ.
* ಜುಲೈ 10, 2018ಕ್ಕೆ ಬಾಕಿ ಇರುವ ಸಾಲದಲ್ಲಿ ಒಂದು ರೈತ ಕುಟುಂಬಕ್ಕೆ ರು. 1 ಲಕ್ಷದವರೆಗಿನ ಸಾಲ ಮನ್ನಾ
* ಈ ಅವಧಿ ಮಧ್ಯೆ ಸಾಲ ಪಡೆದು, ರೈತರು ಮೃತಪಟ್ಟಿದ್ದಲ್ಲಿ ಅಂತಹ ರೈತರ ವಾರಸುದಾರರಿಗೆ ಈ ಸೌಲಭ್ಯ ಸಿಗುತ್ತದೆ.
ರೈತರ ಉಳಿತಾಯ ಖಾತೆಗೆ ಜಮಾ ಆಗುತ್ತದೆ
* ಈ ಯೋಜನೆ ಅಡಿಯಲ್ಲಿ ಮನ್ನಾ ಮಾಡುವ ಸಾಲವು ರೈತರು ಸಾಲ ಮರುಪಾವತಿ ಮಾಡುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ.
* ಜುಲೈ 10, 2018ಕ್ಕೆ ಹೊರಬಾಕಿ ಇರುವ ಮೊತ್ತವನ್ನು ಸರಕಾರದ ಆದೇಶ ಜಾರಿ ಆಗುವ ದಿನಾಂಕಕ್ಕೆ ಪೂರ್ಣವಾಗಿ ಮರುಪಾವತಿ ಮಾಡಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ.
* ಈ ಯೋಜನೆ ಅಡಿ ಸಾಲ ಮನ್ನಾ ಆಗುವ ಅನುದಾನವನ್ನು ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್) ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ.
ಈ ಯೋಜನೆಯು ಯಾರಿಗೆ ದೊರೆಯುವುದಿಲ್ಲ?
ಬೆಳೆ ಸಾಲ ಪಡೆದ ರೈತರು ಸರಕಾರಿ, ಸಹಕಾರಿ ಮತ್ತು ಇತರ ಕ್ಷೇತ್ರದ ನೌಕರರಾಗಿ ತಿಂಗಳಿಗೆ ಒಟ್ಟಾರೆ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ವೇತನ ಅಥವಾ ಪಿಂಚಣಿ ಪಡೆಯುವವರಿಗೆ ಈ ಯೋಜನೆ ಅನ್ವಯಿಸಲ್ಲ
ಕಳೆದ ಮೂರು ವರ್ಷದಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂತಹ ರೈತರಿಗೆ ಸಾಲ ಮನ್ನಾ ಅನ್ವಯಿಸಲ್ಲ
ಕೃಷಿ ಉತ್ಪನ್ನಗಳನ್ನು ಒತ್ತೆ ಇಟ್ಟುಕೊಂಡು ನೀಡುವ ಅಡವು ಸಾಲ, ಚಿನ್ನಾಭರಣ ಅಡವು ಇಟ್ಟುಕೊಂಡು ನೀಡುವ ಸಾಲ, ವಾಹನ ಖರೀದಿ ಸಾಲ, ಪಶು ಭಾಗ್ಯ ಯೋಜನೆ ಅಡಿ ಪಶು ಆಹಾರ ಖರೀದಿಗೆ ನೀಡುವ ಸಾಲ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲ, ಸ್ವಸಹಾಯ ಗುಂಪುಗಳಿಗೆ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ನೀಡಿದ್ದ ಸಾಲಗಳಿಗೆ ಈ ಯೋಜನೆ ಬರುವುದಿಲ್ಲ.
ಜುಲೈ 10, 2018ಕ್ಕೆ ರೈತರ ಹೆಸರಿನಲ್ಲಿ ಡಿಸಿಸಿ ಬ್ಯಾಂಕ್ ಅಥವಾ ಪ್ಯಾಕ್ಸ್ ನಲ್ಲಿ ಮುದ್ದತ್ತು ಠೇವಣಿ ಇದ್ದರೆ ಅಂತಹ ಮೊತ್ತವನ್ನು ಹೊರಬಾಕಿಯಲ್ಲಿ ಕಳೆಯಬೇಕು.
ಸುಸ್ತಿ ಬಡ್ಡಿಯನ್ನು ರೈತರೇ ಭರಿಸಬೇಕು
* ಈ ಯೋಜನೆ ಅಡಿ ಅರ್ಹವಿರುವ 1 ಲಕ್ಷ ಅಸಲು ಮತ್ತು ಸಂಪೂರ್ಣ ಚಾಲ್ತಿ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ ಭರಿಸಲಾಗುವುದು. ಸುಸ್ತಿಯಾದ ಪ್ರಕರಣಗಳಲ್ಲಿ ರೈತರೇ ಬಡ್ಡಿಯನ್ನು ಭರಿಸಬೇಕು.
* ರೈತರು ಒಂದಕ್ಕಿಂತ ಹೆಚ್ಚು ಸಹಕಾರ ಸಂಘ/ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯತಕ್ಕದ್ದು.
* ಈ ಸಾಲ ಮನ್ನಾ ಯೋಜನೆಯಿಂದ 20.38 ಲಕ್ಷ ರೈತರಿಗೆ 9,448.61 ಕೋಟಿ ರುಪಾಯಿ ಸೌಲಭ್ಯ ದೊರೆಯಲಿದೆ.