ನೂರಕ್ಕೆ ನೂರು ಸತ್ಯವಾಯಿತು ಕೋಡಿಶ್ರೀಗಳ ಚುನಾವಣಾ ಭವಿಷ್ಯ
ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮೊದಲ ಹಂತದ ಪ್ರಕ್ರಿಯೆ ಮುಕ್ತಾಯಗೊಂಡಂತಾಗಿದೆ. ಇನ್ನೇನಿದ್ದರು, ಚುನಾವಣೋತ್ತರ ಮೈತ್ರಿಕೊಂಡಿರುವ ಜೆಡಿಎಸ್ - ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರಕಾರ ಅಧಿಕಾರ ವಹಿಸಿಕೊಳ್ಳುವುದು ಬಾಕಿ.
ತಮಗೆ 116 ಶಾಸಕರ ಬೆಂಬಲ ಇದೆ. ಸರಕಾರ ರಚಿಸಲು ಅವಕಾಶ ನೀಡಿ ಎಂದು ಕುಮಾರಸ್ವಾಮಿ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದರು. ಅದರಂತೇ, ಎಚ್ಡಿಕೆಗೆ ಸರಕಾರ ರಚಿಸುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಆಹ್ವಾನ ನೀಡಿದ್ದಾರೆ. ಸೋಮವಾರ (ಮೇ 21) ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೋಡೇ ಬಿಡುವಾ.. ಕೋಡಿಶ್ರೀಗಳು ನುಡಿದ ಭವಿಷ್ಯ ನಿಜವಾಗುತ್ತಾ ಎಂದು?
ರಾಜ್ಯ ರಾಜಕೀಯದ ಬಗ್ಗೆ ಸುಮಾರು ಒಂದು ವರ್ಷದ ಹಿಂದೆಯೇ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ತಾಳೇಗರಿ ಆಧಾರದಲ್ಲಿ ಕೋಡಿಶ್ರೀಗಳು ಹೇಳಿದ ಭವಿಷ್ಯ ಕರಾರುವಕ್ಕಾಗಿ ಹೊರಬಿದ್ದಿದೆ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆಂದು ಶ್ರೀಗಳು ಹೇಳಿದ ಭವಿಷ್ಯ ಸತ್ಯವಾಗಿದೆ.
ಕಳೆದ ವರ್ಷ ಜುಲೈ ತಿಂಗಳ ಆದಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹಾಸನದಲ್ಲಿ ಭವಿಷ್ಯವೊಂದನ್ನು ನುಡಿದಿದ್ದರು. ಅದು ಮಾರ್ಮಿಕವಾಗಿ, ಅಸೆಂಬ್ಲಿ ಚುನಾವಣೆಯ ಬಗ್ಗೆ ನುಡಿದ ಭವಿಷ್ಯವಾಗಿತ್ತು.
ಸರ್ಕಾರ ರಚನೆಗೆ ಬಿಜೆಪಿ ಏನೆಲ್ಲಾ ಮಾಡಿತು, ಸೋತಿತು!
ಕರ್ನಾಟಕ ಅಸೆಂಬ್ಲಿ ಚುನಾವಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕೋಡಿಶ್ರೀಗಳು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ ಎಂದು ಹೇಳಿದ್ದರು. ಮುಂದೆ ಓದಿ..
ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೇ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅಧಿಕಾರದ ಬಾಗಿಲಲ್ಲಿ ಎಡವಿದೆ. ಇನ್ನು ಕಾಂಗ್ರೆಸ್ 78ಸ್ಥಾನ ಪಡೆದು, ಬಿಜೆಪಿಯನ್ನು ದೂರವಿಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದು ಒಂದಾಗಿದೆ.
ಕೋಡಿಶ್ರೀಗಳ ಭವಿಷ್ಯ ನಿಜವಾಯಿತು
ಪ್ರಮುಖ ಪಕ್ಷದ ರಾಜಕೀಯ ನಾಯಕರು ಸಿಎಂ ಆಗುವುದಿಲ್ಲ ಎನ್ನುವ ಕೋಡಿಶ್ರೀಗಳ ಭವಿಷ್ಯವನ್ನು, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಎಂದು ಅರ್ಥೈಸಿಕೊಂಡರೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದೇ ವ್ಯಾಖ್ಯಾನಿಸಲಾಗಿತ್ತು. ಅಲ್ಲಿಗೆ ಕೋಡಿಶ್ರೀಗಳ ಭವಿಷ್ಯ ನಿಜವಾದಂತಾಯಿತು.
ಬಿತ್ತಿದ ಬೆಳಸು ಪರರು ಕೊಯ್ದಾರು
ತಾಳೇಗರಿ ಆಧಾರಿತ ಭವಿಷ್ಯ ನುಡಿಯುವ ಕೋಡಿಶ್ರೀಗಳು, "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದರು. ಅದರಂತೇ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು.
ಕಷ್ಟಪಟ್ಟು ದುಡಿಯುವವರು ಒಬ್ಬರು, ಲಾಭ ತೆಗೆದುಕೊಳ್ಳುವವರು ಇನ್ನೊಬ್ಬರು
ಇದಾದ ನಂತರ ಈ ವರ್ಷದ ಆದಿಯಲ್ಲಿ, 'ಕಷ್ಟಪಟ್ಟು ದುಡಿಯುವವರು ಒಬ್ಬರು, ಅದರ ಲಾಭವನ್ನು ತೆಗೆದುಕೊಳ್ಳುವವರು ಇನ್ನೊಬ್ಬರು' ಎಂದು ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯನ್ನು ಉಲ್ಲೇಖಿಸಿ ಶ್ರೀಗಳು ಹೇಳಿದ್ದರು. ಇವಿಎಂ ಯಂತ್ರಗಳು ದೋಷಪೂರಿತ ಎನ್ನುವುದು ನನ್ನ ಮಾತಿನ ಉದ್ದೇಶ ಎಂದು ಶ್ರೀಗಳು ಅದಾದ ನಂತರ ಹೇಳಿದ್ದರು. ಎರಡೂ ರಾಜ್ಯಗಳಲ್ಲಿ ಸೋತ ನಂತರ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಇವಿಎಂ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಸುಖ: ಮತ್ತು ದು:ಖ ಸಮನಾಗಿ ಸಾಗಲಿದೆ
ಗಡಿಯಲ್ಲಿ ಬಿಗುವಿನ ವಾತಾವರಣ ಮುಂದುವರಿಯಲಿದೆ ಎಂದು ಹೇಳಿರುವ ಶ್ರೀಗಳು, ಈ ವರ್ಷ ಸುಖ: ಮತ್ತು ದು:ಖ ಸಮನಾಗಿ ಸಾಗಲಿದೆ. ಈ ಬಾರಿ ಮಳೆ ಕೈಕೊಡುವ ಸಾಧ್ಯತೆಯಿಲ್ಲ ಎಂದು ಕೋಡಿಶ್ರೀಗಳು ಕಾಲಜ್ಞಾನ ನುಡಿದಿದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.