ಬಿಜೆಪಿ ಭದ್ರಕೋಟೆ ಬಸವನಗುಡಿಗೆ ಲಗ್ಗೆ ಹಾಕುವವರು ಯಾರು?
ಬೆಂಗಳೂರು, ಫೆಬ್ರವರಿ 23 : ಬಿಜೆಪಿ ಪ್ರಾಬಲ್ಯ ಹೊಂದಿರುವ ಕ್ಷೇತ್ರ ಬೆಂಗಳೂರು ನಗರದ ಬಸವನಗುಡಿ. ಬಿಜೆಪಿಯ ರವಿ ಸುಬ್ರಮಣ್ಯ ಅವರು ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ಗೆ ಪೈಪೋಟಿ ನಡೆಯುತ್ತಿದೆ.
ಬ್ರಾಹ್ಮಣರು ಮತ್ತು ಒಕ್ಕಲಿಗರ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಎಲ್.ಎ.ರವಿಸುಬ್ರಮಣ್ಯ ಅವರು ಹ್ಯಾಟ್ರಿಕ್ ವಿಜಯ ಸಾಧಿಸಲು ಬಯಸಿದ್ದಾರೆ. ಆದರೆ, ಕಟ್ಟೆ ಸತ್ಯನಾರಾಯಣ ಅವರು ಟಿಕೆಟ್ಗೆ ಬೇಡಿಕೆ ಇಟ್ಟಿದ್ದು, ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಸಂದರ್ಶನ : ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದಿರುವ ಕಟ್ಟೆ ಸತ್ಯ
ಕ್ಷೇತ್ರದಲ್ಲಿನ ಬಿಜೆಪಿ ಪ್ರಾಬಲ್ಯ ಮುರಿಯಲು ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ ರೂಪಿಸುತ್ತಿವೆ. ರವಿ ಸುಬ್ರಮಣ್ಯ, ಕಟ್ಟೆ ಸತ್ಯನಾರಾಯಣ ನಡುವಿನ ಟಿಕೆಟ್ ಫೈಟ್ ವಿರೋಧಿಗಳಿಗೆ ವರವಾಗುತ್ತದೆಯೇ? ಕಾದು ನೋಡಬೇಕಿದೆ.
ಚುನಾವಣೆ 'ಕಟ್ಟೆ'ಯಿಂದಿಳಿಯಲು ರವಿಗೆ ಅಭ್ಯಂತರವಿಲ್ಲ
ಕಾಂಗ್ರೆಸ್ ಪಕ್ಷದಲ್ಲಿಯೂ ಟಿಕೆಟ್ಗೆ ಭಾರೀ ಪೈಪೋಟಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಎಂಬುದು ಕುತೂಹಲ ಮೂಡಿಸಿದೆ. ಜೆಡಿಎಸ್ನಿಂದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಬಾಗೇಗೌಡ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಕ್ಷೇತ್ರದ ಚುನಾವಣಾ ಕಣದ ವಿವರ ಚಿತ್ರಗಳಲ್ಲಿ ನೋಡಿ......
ಟಿಕೆಟ್ ನಿರಾಕರಿಸಲು ಕಾರಣಗಳಿಲ್ಲ
ಎಲ್.ಎ.ರವಿ ಸುಬ್ರಮಣ್ಯ ಕ್ಷೇತ್ರದ ಹಾಲಿ ಶಾಸಕರು. 2008ರ ಚುನಾವಣೆಯಲ್ಲಿ 50,294, 2013ರ ಚುನಾವಣೆಯಲ್ಲಿ 43,883 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ನಿರಾಕರಿಸಲು ಕಾರಣಗಳಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸವನ್ನು ಸಹ ಮಾಡಿದ್ದಾರೆ.
ಕಟ್ಟೆ ಸತ್ಯನಾರಾಯಣ ಬೇಡಿಕೆ
25 ವರ್ಷಗಳಿಂದ ರಾಜಕಾರಣಲ್ಲಿರುವ ಕಟ್ಟೆ ಸತ್ಯನಾರಾಯಣ ಅವರು ಬಿಜೆಪಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಬಿಬಿಎಂಪಿ ಸದಸ್ಯರಾಗಿ, ಆಡಳಿತ ಪಕ್ಷದ ನಾಯಕರಾಗಿ, ಮೇಯರ್ ಆಗಿ ಕೆಲಸ ಮಾಡಿರುವ ಅವರು ಆದ್ಯತೆ ಮೇಲೆ ಟಿಕೆಟ್ ಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಟಿಕೆಟ್ ಸಿಗದಿದ್ದರೆ ನಡೆ ಏನು?
ಒಂದು ವೇಳೆ ಬಿಜೆಪಿ ಕಟ್ಟೆ ಸತ್ಯನಾರಾಯಣ ಅವರಿಗೆ ಟಿಕೆಟ್ ಕೊಡದಿದ್ದರೆ ಮುಂದಿನ ನಡೆ ಏನು? ಎಂಬುದು ಇನ್ನೂ ನಿಗೂಢ. ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಅವಕಾಶವನ್ನು ಉಪಯೋಗಿಸಿಕೊಂಡು ಕ್ಷೇತ್ರದಲ್ಲಿ ಗೆಲ್ಲುವ ತಂತ್ರ ರೂಪಿಸುತ್ತಿವೆ.
ಕಾಂಗ್ರೆಸ್ನಿಂದ ಚಂದ್ರಶೇಖರ್ ಆಕಾಂಕ್ಷಿ
2004ರಲ್ಲಿ 44,600 ಮತಗಳ ಮೂಲಕ ಬಸವನಗುಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ನ ಕೆ.ಚಂದ್ರಶೇಖರ್ ಅವರು ಈ ಬಾರಿ ಟಿಕೆಟ್ ಆಕಾಂಕ್ಷಿ. 2008ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು 37,094 ಮತ ಪಡೆದಿದ್ದರು. ಆದರೆ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಬಿ.ಕೆ.ಚಂದ್ರಶೇಖರ್ ಅವರಿಗೆ ಟಿಕೆಟ್ ಕೊಟ್ಟಿತ್ತು.
ಕಾಂಗ್ರೆಸ್ ಟಿಕೆಟ್ಗೆ ಭಾರೀ ಪೈಪೋಟಿ
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಭಾರೀ ಬೇಡಿಕೆ ಇದೆ. ಶ್ರೀಪಾದ ರೇಣು, ಕೆಪಿಸಿಸಿ ಐಟಿಬಿಟಿ ವಿಭಾಗದ ಮುಖ್ಯಸ್ಥ ನಿರಂಜನ್, ಯು.ಬಿ.ವೆಂಕಟೇಶ್ ಅವರ ಹೆಸರು ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಜೆಡಿಎಸ್ ಅಭ್ಯರ್ಥಿ ಬಾಗೇಗೌಡ
ಜೆಡಿಎಸ್ ಪಕ್ಷದಿಂದ ಬಾಗೇಗೌಡ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಕಳೆದ ಬಾರಿಯೂ ಅವರು ಚುನಾವಣೆಗೆ ಸ್ಪರ್ಧಿಸಿದ್ದರು, 24,163 ಮತಗಳನ್ನು ಪಡೆದಿದ್ದರು. ಒಕ್ಕಲಿಗರು ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಸಹಾಯಕವಾಗಬಹುದು.
2013ರಲ್ಲಿ ಗೆದ್ದವರು, ಸೋತವರು
2013ರ ಚುನಾವಣೆಯಲ್ಲಿ ಎಲ್.ಎ.ರವಿಸುಬ್ರಮಣ್ಯ ಅವರು 43,883 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಕೆ.ಬಾಗೇಗೌಡ ಅವರು 24,163 ಮತ, ಕಾಂಗ್ರೆಸ್ನ ಬಿ.ಕೆ.ಚಂದ್ರಶೇಖರ್ ಅವರು 21,588 ಮತಗಳನ್ನು ಪಡೆದಿದ್ದರು.