ಪರಿಷತ್ ಸಭಾಪತಿ ಸ್ಥಾನ: ಹೊರಟ್ಟಿ vs ಎಸ್ ಆರ್ ಪಾಟೀಲ್
ಬೆಂಗಳೂರು, ಜೂನ್ 24: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಬಳಿಕ, ಹಿರಿಯ ನಾಯಕರ ಹೆಸರು ಸಭಾಪತಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ಕರ್ನಾಟಕ ವಿಧಾನಪರಿಷತ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರುವ ಅವಕಾಶ ಕೈತಪ್ಪಿದ್ದು, ಸಭಾಪತಿ ಸ್ಥಾನಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.
75 ಸದಸ್ಯ ಬಲದ ವಿಧಾನಪರಿಷತ್ ನಲ್ಲಿ 11 ಮಂದಿ ನಾಮನಿರ್ದೇಶನಗೊಂಡಿದ್ದಾರೆ. ಪದವಿಧರ ಹಾಗೂ ಶಿಕ್ಷಣ ಕ್ಷೇತ್ರದಿಂದ ಕೂಡಾ ಆಯ್ಕೆ ಮಾಡಲಾಗುತ್ತದೆ. ಸಂಖ್ಯಾಬಲದ ಪ್ರಕಾರ, ಕಾಂಗ್ರೆಸ್ಸಿಗೆ ಸಭಾಪತಿ ಸ್ಥಾನ ಲಭಿಸಬೇಕು. ಆದರೆ, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆಯುತ್ತಿದೆ.
ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಮುಂದುವರೆಯಲು ಮನಸ್ಸು ಮಾಡುತ್ತಿಲ್ಲ, ಹೀಗಾಗಿ, ಮೇಲ್ಮನೆ ಹಿರಿಯ ಸದಸ್ಯ ಎಸ್.ಆರ್. ಪಾಟೀಲರನ್ನು ಸಭಾಪತಿ ಮಾಡುವ ಅವಕಾಶಕ್ಕಾಗಿ ಕಾಂಗ್ರೆಸ್ ಕಾದಿದೆ. ಕಾಂಗ್ರೆಸ್ಸಿನಿಂದ ಎಸ್ ಆರ್ ಪಾಟೀಲ್ ಅಲ್ಲದೆ ಎಚ್ಎಂ ರೇವಣ್ಣ, ವಿಎಸ್ ಉಗ್ರಪ್ಪ ಅವರ ಹೆಸರು ಕೂಡಾ ಕೇಳಿ ಬಂದಿತ್ತು.
ಚುನಾವಣಾ ಕಣದಲ್ಲಿದ್ದ ಸಂಸದರು, ಎಂಎಲ್ಸಿಗಳ ರಿಪೋರ್ಟ್ ಕಾರ್ಡ್
ಬಜೆಟ್ ಅಧಿವೇಶನದ ನಂತರ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಕಾಂಗ್ರೆಸ್ನ 6, ಜೆಡಿಎಸ್ನ 1 ಸಚಿವ ಸ್ಥಾನವನ್ನು ತುಂಬುವ ನಿರೀಕ್ಷೆಯಿದೆ.
ಜೂನ್ 27ರ ನಂತರ ಧರ್ಮಸ್ಥಳದ ಉಜಿರೆಯಿಂದ ಬೆಂಗಳೂರಿಗೆ ಬರಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಸಿ, ಈ ಬಗ್ಗೆ ಚರ್ಚಿಸಲಿದ್ದಾರೆ.