ಚುನಾವಣೆಯಲ್ಲಿ ಸೋಲು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿಯೋ ಲಾಬಿ!
ಬೆಂಗಳೂರು, ಡಿಸೆಂಬರ್ 09: ''ಕರ್ನಾಟಕದಲ್ಲಿಆಪರೇಷನ್ ಕಮಲ ಮೂಲಕ ಶಾಸಕರನ್ನು ಸೆಳೆದು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದವರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ'' ಎಂದು ನಂಬಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂಬಿಕೆ ಸುಳ್ಳಾಗಿದೆ. 15 ಕ್ಷೇತ್ರಗಳ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ 12, ಕಾಂಗ್ರೆಸ್ 2 ಕ್ಷೇತ್ರ ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ
''ಮತದಾರರು ನೀಡಿದ ತೀರ್ಪನ್ನು ನಾನು ಗೌರವಿಸಿ, ಕರ್ನಾಟಕ ಉಪ ಚುನಾವಣೆಯ ಸೋಲಿನ ಹೊಣೆ ಹೊರುತ್ತೇನೆ. ಆಪರೇಷನ್ ಕಮಲ ಬಳಸಿದ ಬಿಜೆಪಿ ನಾಯಕರಿಗೆ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ನಾನು ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ'' ಎಂದು ಸಿದ್ದರಾಮಯಯ್ ಪತ್ರದಲ್ಲಿ ಬರೆದಿದ್ದಾರೆ.
ಹೌದು ಹುಲಿಯಾ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ!
ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ. ಕೆಪಿಸಿಸಿಯ ಆಡಳಿತದಲ್ಲಿ ಸಮಗ್ರ ಬದಲಾವಣೆ ತಂದು ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ಕಾರ್ಯಕ್ಕೆ ಹೈಕಮಾಂಡ್ ಮುಂದಾಗಬೇಕಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅನೇಕ ಹಿರಿಯ ನಾಯಕರ ಲಾಬಿ ಜೋರಾಗಿ ಶುರುವಾಗಿದೆ. ಸಂಭಾವ್ಯ ಪಟ್ಟಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೆಸರೂ ಸೇರ್ಪಡೆಯಾಗಿದೆ.
ಸೋನಿಯಾ ಗಾಂಧಿಗೆ ಆಯ್ಕೆ ಹೊಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ತರುವ ಸಂಬಂಧ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ನಾಯಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಅವರ ಸ್ಥಾನಕ್ಕೆ ಹೆಚ್ಚು ವರ್ಚಸ್ವಿ ನಾಯಕರನ್ನು ಆ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಶಾಸಕಾಂಗ ಪಕ್ಷದ ಸ್ಥಾನಕ್ಕೂ ಹಿರಿಯ ನಾಯಕರನ್ನು ಆಯ್ಕೆ ಮಾಡುವ ಹೊಣೆ ಸೋನಿಯಾ ಗಾಂಧಿ ಮೇಲಿದೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಈಗಾಗಲೇ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ ಹಾಗೂ ವೇಣು ಗೋಪಾಲ್ ಅವರಿಗೆ ಕರೆ ಬಂದಿದೆ. ಮುಂದಿನ ರೂಪುರೇಷೆ, ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
ಸಂಭಾವ್ಯ ಪಟ್ಟಿಯಲ್ಲಿದೆ ಅನೇಕ ಹೆಸರುಗಳು
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಈ ಪೈಕಿ ಎಂಬಿ ಪಾಟೀಲ್ ಅವರು ನಾನು ರೇಸಿನಲ್ಲಿಲ್ಲ ಕಳೆದ ಬಾರಿಯೇ ಹೇಳಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಹೆಸರು ಸೇರ್ಪಡೆಯಾದರೆ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದ್ದಾರೆ. ಎಸ್ ಆರ್ ಪಾಟೀಲ್ ಅವರು ವಯಸ್ಸಿನ ಕಾರಣ ಹಿಂದೆ ಸರಿಯುವ ಸಾಧ್ಯತೆಯಿದೆ. ಕೊನೆಗೆ ಮುನಿಯಪ್ಪ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ಬರಲಿದ್ದು, ಡಿಕೆಶಿ ಅವರು ಅಧ್ಯಕ್ಷ ಸ್ಥಾನಕ್ಕೇರುವ ಲಕ್ಷಣಗಳಿವೆ ಎಂಬ ಸುದ್ದಿಯಿದೆ.
ಡಿಕೆಶಿಗೆ ಅಕ್ರಮ ವರ್ಗಾವಣೆ ಕೇಸ್ ಭೀತಿ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಗರಿಗೆದರಿತ್ತು. ಇನ್ನೇನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾತ್ರಿ ಎಂದು ಎರೆಡೆರಡು ಬಾರಿ ಸುದ್ದಿ ಹಬ್ಬಿತ್ತು. ಈಗಲೂ ಡಿಕೆ ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಮನಿಲಾಂಡ್ರಿಂಗ್ ಪ್ರಕರಣದಿಂದ ಮುಕ್ತರಾಗದ ಶಿವಕುಮಾರ್ ಅವರಿಗೆ ಯಾವುದೇ ಉನ್ನತ ಹುದ್ದೆಯನ್ನು ನೀಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಕೆಪಿಸಿಸಿ ಸಾಂಸ್ಥಿಕ ಚಟುವಟಿಕೆಯ ಚೌಕಟ್ಟಿನಾಚೆ ಹೆಚ್ಚು ಪ್ರಭಾವಶಾಲಿಯಾಗಿರುವ ಡಿಕೆ ಶಿವಕುಮಾರ್, ಬಾಹ್ಯವಾಗಿಯೇ ಸಾಮರ್ಥ್ಯ ಪ್ರದರ್ಶನ ಮಾಡಲು ಬಯಸಿದ್ದಾರೆ ಎನ್ನಲಾಗಿದೆ.
ಎಂಬಿ ಪಾಟೀಲ್
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂಬಿ ಪಾಟೀಲ್, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಮುಂಚೂಣಿಗೆ ಬಂದವರು. ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ ನಾಯಕರು, ಅದರಲ್ಲಿಯೂ ಹಿರಿಯ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗ ಎಂಬಿ ಪಾಟೀಲ್ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಬಿಜೆಪಿ ಪ್ರಾಬಲ್ಯ ಸಾಧಿಸಿರುವ ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆಯುವ ಎಂಬಿ ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕೂಡ ಕಾಂಗ್ರೆಸ್ನಲ್ಲಿದೆ.
ರಾಹುಲ್ ನೆಚ್ಚಿನ ಕೃಷ್ಣ ಬೈರೇಗೌಡ
ಸಂಯುಕ್ತ ಜನತಾದಳದಿಂದ ಕಾಂಗ್ರೆಸ್ ಸೇರ್ಪಡೆಯಾದ ಕೃಷ್ಣ ಬೈರೇಗೌಡ ಈಗ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು. ತೀಕ್ಷ್ಣ ಮಾತುಗಾರರಾಗಿರುವ ಕೃಷ್ಣ ಬೈರೇಗೌಡ, ಕಾನೂನು ಹಾಗೂ ರಾಜಕೀಯ ಜ್ಞಾನವನ್ನು ಆಳವಾಗಿ ಅರಿತವರು. ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಮುನ್ನ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದ ಸಂವಿಧಾನ ಹಾಗೂ ರಾಜಕೀಯದ ವಿಚಾರಗಳು ಚರ್ಚೆಯ ತೀವ್ರತೆಯನ್ನು ಹೆಚ್ಚಿಸಿದ್ದವು. ಪಕ್ಷದ ನಾಯಕತ್ವವನ್ನು ಯುವಕರಿಗೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾದರೆ ಕೃಷ್ಣ ಬೈರೇಗೌಡ ಅವರಿಗೆ ಮೊದಲ ಆದ್ಯತೆ ಸಿಗಲಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.
ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ
ದಲಿತ ನಾಯಕರಾಗಿರುವ ಮಾಜಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರನ್ನು ಕೂಡ ಕೆಪಿಸಿಸಿ ಜವಾಬ್ದಾರಿ ಹೊರುವ ಪ್ರಮುಖ ಹುದ್ದೆಗೆ ಪರಿಗಣಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್ ಸಿ ಮಹದೇವಪ್ಪ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಚುನಾವಣಾ ರಾಜಕೀಯದಿಂದ ಹಿನ್ನೆಲೆಗೆ ಸರಿದು ತಮ್ಮ ಮಗನನ್ನು ರಾಜಕೀಯಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಅವರ ಈ ನಿರ್ಧಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ತರುವ ಉದ್ದೇಶಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅವರು ದಲಿತ ನಾಯಕರಾಗಿರುವುದು ಕೂಡ ಸಮುದಾಯದ ಮತಗಳನ್ನು ಸೆಳೆಯಲು ಅನುಕೂಲವಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಕೆ ಎಚ್ ಮುನಿಯಪ್ಪ
ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಮಾಜಿ ಕೇಂದ್ರ ಸಚಿವ, ಸತತ ಏಳು ಬಾರಿ ಸಂಸದರಾಗಿರುವ ಕೆ ಎಚ್ ಮುನಿಯಪ್ಪ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೇ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲಿರುವ ತಮ್ಮ ನಿಷ್ಠೆಯ ಕುರಿತು ಹೈಕಮಾಂಡಿಗೆ ಮನವರಿಕೆ ಮಾಡಿದ್ದೇನೆ. ತಮ್ಮ ಮನವಿಗೆ ಸೋನಿಯಾ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಲ್ಲರೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ. ಆದರೆ, ಚಿಕ್ಕಬಳ್ಳಾಪುರ ಭಾಗದಲ್ಲಿ ಕಾಂಗ್ರೆಸ್ಸಿನಿಂದ ಬಂಡಾಯವೆದ್ದು ಬಿಜೆಪಿ ಸೇರಿದ ಡಾ. ಸುಧಾಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವುದು ಮುಳುವಾಗಿದೆ.
ಲಿಂಗಾಯಿತ ಸಮುದಾಯದಲ್ಲಿ ಅನೇಕ ನಾಯಕರು
ಲಿಂಗಾಯಿತ ಸಮುದಾಯ, ಉತ್ತರ ಕರ್ನಾಟಕದ ಭಾಗದ ಮುಖಂಡ ಮತ್ತು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆಯಿತ್ತು. ಮಾಜಿ ಸಚಿವ ಮತ್ತು ಸಂಸದ ಪ್ರಕಾಶ ಹುಕ್ಕೇರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಹುಕ್ಕೇರಿ ಹೇಳಿದ್ದಾರೆ. ದಲಿತ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಎಂದು ಕ್ರಮವಾಗಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿ ಈ ಬಾರಿ ಕುರುಬರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.