ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್, ಸತೀಶ್, ದಿನೇಶ್!
ಬೆಂಗಳೂರು, ಜೂನ್ 10: ಕರ್ನಾಟಕ ಸಚಿವ ಸಂಪುಟ ಸಮಸ್ಯೆ ಇನ್ನೂ ಜೀವಂತವಿರುವ ಸಮಯದಲ್ಲೇ ಪರ್ಯಾಯವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಸ್ಪರ್ಧೆ ಏರ್ಪಟ್ಟಿದೆ.
ದಾಖಲೆಯ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಡಾ.ಜಿ.ಪರಮೇಶ್ವರ ಅವರು ರಾಜೀನಾಮೆ ನೀಡಿ, ಉಪ ಮುಖ್ಯಮಂತ್ರಿಯಾಗಿ ಮೈತ್ರಿ ಸರ್ಕಾರದಲ್ಲಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ.
'ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಲಿದೆ. ನನಗಿಂತ ಉತ್ತಮರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ದಿನೇಶ್ ಗುಂಡೂರಾವ್ ಹಾಗೂ ಕೃಷ್ಣಭೈರೇಗೌಡ ಅವರು ದೆಹಲಿ ತೆರಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?
ಈ ಬಾರಿ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ಜಾತಿ ಲೆಕ್ಕಾಚಾರ ಮುಖ್ಯವಾಗಲಿದೆ. ಇದೀಗ ಹೊಸದಾಗಿ ಹಿರಿಯ ಕಾಂಗ್ರೆಸ್ಸಿಗ ಎಂಬಿ ಪಾಟೀಲ್ ಅವರ ಹೆಸರು ಕೇಳಿ ಬಂದಿರುವುದರಿಂದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಹೀಗೆ ವಿವಿಧ ಜಾತಿಯ ಮುಖಂಡರು ರೇಸಿನಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಯಾರ ಹೆಸರು?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ. ಎಂ.ಬಿ. ಪಾಟೀಲ್ ಹಾಗೂ ಎಚ್ ಸಿ. ಮಹಾದೇವಪ್ಪ ಹೆಸರುಗಳು ಮತ್ತೊಮ್ಮೆ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಆಪ್ತರಾದ ಇವರಲ್ಲದೆ, ಸತೀಶ್ ಜಾರಕಿಹೊಳಿ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ. ಈ ಮೂಲಕ ತಮ್ಮ ಆಪ್ತರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಸಿದ್ದರಾಮಯ್ಯ ಅವರು ಎಲ್ಲವನ್ನು ನಿಯಂತ್ರಿಸಲಿದ್ದಾರೆ ಎಂಬ ಸುದ್ದಿಯಿದೆ.
ವೀರಶೈವರಿಗೆ ನಾಯಕತ್ವ ನೀಡಬೇಕು
ವೀರಶೈವರಿಗೆ ನಾಯಕತ್ವ ನೀಡಬೇಕು. ಬಿಜೆಪಿಯತ್ತ ವಾಲಿರುವ ಲಿಂಗಾಯತರನ್ನು ಪುನಃ ಕಾಂಗ್ರೆಸ್ ನತ್ತ ಒಲಿಸಿಕೊಳ್ಳಲು ಕೆಪಿಸಿಸಿಯಲ್ಲಿ ಬದಲಾವಣೆ ಅನಿವಾರ್ಯ ಎಂದು ಖಾಯಂ ಖಜಾಂಜಿಯೂ ಆಗಿರುವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರು 2012ರಿಂದ ವರಾತ ಹಿಡಿದಿದ್ದಾರೆ. ಅದರೆ, ಅವರಿಗೆ ಅನುಭವವಿದ್ದರೂ ವಯೋವೃದ್ಧರಿಗೆ ಪಟ್ಟ ತಪ್ಪಿ ಮತ್ತೊಬ್ಬ ನಾಯಕರಿಗೆ ಸಿಗಲಿದೆ.
ಎಂಬಿ ಪಾಟೀಲ್ ಅವರ ಬೇಡಿಕೆ
ಡಿಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಎಂದು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡ ಎಂಬಿ ಪಾಟೀಲರಿಗೆ ಯಾವುದೇ ಶುಭ ಸೂಚನೆ ಸಿಕ್ಕಿಲ್ಲ. ಸದ್ಯಕ್ಕೆ ಈ ಬಗ್ಗೆ ಜೂನ್ 13ರಂದು ಸಮನ್ವಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಎಚ್ಡಿ ಕುಮಾರಸ್ವಾಮಿ ಅವರ ಸಚಿವ ಸಂಪುಟ ಸೇರಲು ವಿಫಲರಾಗಿರುವ ಎಂಬಿ ಪಾಟೀಲರಿಗೆ ಸೂಕ್ತ ಸ್ಥಾನಮಾನ ಸಿಗದಿದ್ದರೆ, ಸರ್ಕಾರ ಬಾರಿ ಬಂಡಾಯ ಎದುರಿಸಿದ ಬೇಕಾದ ಪರಿಸ್ಥಿತಿ ಇದೆ.
ಸತೀಶ್ ಜಾರಕಿಹೊಳಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾದ ಸತೀಶ್ ಜಾರಕಿಹೊಳಿ ಅವರ ಬದಲಿಗೆ ಅವರ ಸೋದರ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರಿಂದ ಬೇಸರಗೊಂಡ ಸತೀಶ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. ದಲಿತ ಕೋಟಾದಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯಿದ್ದರೂ, ಈಗಾಗಲೇ ಜಿ ಪರಮೇಶ್ವರ ಅವರು ಡಿಸಿಎಂ ಸ್ಥಾನ ಪಡೆದಿರುವುದರಿಂದ ಸತೀಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಾ ಸಿಗುವ ಸಾಧ್ಯತೆ ಕಡಿಮೆ
ಎಸ್ ಆರ್ ಪಾಟೀಲ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಎಸ್ ಆರ್ ಪಾಟೀಲ್ ಅವರು ಕೂಡಾ ಎಚ್ ಡಿ ಕುಮಾರಸ್ವಾಮಿ ಸಚಿವ ಸಂಪುಟ ಸ್ಥಾನ ಪಡೆದಿಲ್ಲ. ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಎಸ್ ಆರ್ ಪಾಟೀಲ್ ಅವರನ್ನು ಸಭಾಪತಿ ಸ್ಥಾನಕ್ಕೇರಿಸುವ ಸುದ್ದಿಯೂ ಇದೆ. ಆದರೆ, ಮಾಜಿ ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿಸಿದರೆ ಲಿಂಗಾಯತರನ್ನು ಕಾಂಗ್ರೆಸ್ ಮೆಚ್ಚಿಸಬಹುದು. ಎಂಬಿ ಪಾಟೀಲ್ ಬದಲಿಗೆ ಎಸ್ ಆರ್ ಪಾಟೀಲ್ ಬೆಂಬಲಿಸಲು ವೀರಶೈವ ಲಿಂಗಾಯತ ಮಹಾಸಭಾ ಕೂಡಾ ಸಮ್ಮತಿಸಲಿದೆ.
ರಾಜ್ಯಾಧ್ಯಕ್ಷ ಪಟ್ಟಕ್ಕೆ ಏಕೆ ಪ್ರಾಮುಖ್ಯತೆ
1989ರಲ್ಲಿ ವೀರೇಂದ್ರಪಾಟೀಲ್, 1999ರಲ್ಲಿ ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸಿದಾಗ ಪಕ್ಷಕ್ಕೆ ಬಹುಮತ ದೊರೆತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅದೇ ಕಾರ್ಯತಂತ್ರವನ್ನು ಅನುಸರಿಸಿ ಪ್ರಬಲ ವರ್ಗದ ನಾಯಕರೊಬ್ಬರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂದು ವೀರಶೈವ ವರ್ಗ ಆಗ್ರಹಿಸಿದೆ. ಇದೇ ಅಂಶ ಹಿಡಿದುಕೊಂಡು ಒಕ್ಕಲಿಗರು ಕೂಡಾ ಲಾಬಿ ನಡೆಸಿದ್ದಾರೆ. ಹೀಗಾಗಿ, ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಬ್ರಾಹ್ಮಣ ಸಮುದಾಯದ ಯುವ ನಾಯಕ
ಬ್ರಾಹ್ಮಣ ಸಮುದಾಯದ ಯುವ ನಾಯಕ, ಮಾಜಿ ಸಚಿವ, ಎಐಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಪಕ್ಷದ ಸಂಘಟನೆ, ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಹೊಣೆ ನೀಡುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಒಕ್ಕಲಿಗ, ಲಿಂಗಾಯತ ನಡುವಿನ ಪೈಪೋಟಿಯನ್ನು ಹತ್ತಿಕ್ಕುವ ಯತ್ನವೂ ನಡೆದಿದೆ. ಆದರೆ, ಜಾತಿ ಸಮೀಕರಣ ಲೆಕ್ಕಕ್ಕೆ ಬಂದರೆ ದಿನೇಶ್ ಅವರ ಕ್ಲೀನ್ ಇಮೇಜ್ ಗಿಂತ ಮತ ಗಳಿಕೆ ಪ್ರಭಾವ ಮುಖ್ಯವಾಗಲಿದೆ.
ಬಿಕೆ ಹರಿಪ್ರಸಾದ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಈಡಿಗ ಸಮುದಾಯದ ಬಿ.ಕೆ ಸುಂದರೇಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಯೂ ಇದೆ. ಈ ಆಯ್ಕೆ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಲು ಎಐಸಿಸಿ ನಿರ್ಧರಿಸಿದೆ ಎಂಬ ಸುದ್ದಿಯೂ ಇದೆ. ಸಂಪುಟಕ್ಕೆ ಎಂಎಲ್ಸಿ ಜಯಮಾಲಾ ಅವ್ರ ಆಯ್ಕೆಯನ್ನು ಇಲ್ಲಿ ಸ್ಮರಿಸಬಹುದು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಸಾಮರ್ಥ್ಯವಿದ್ದರೂ, ಹರಿಪ್ರಸಾದ್ ಅವರು ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿಲ್ಲ, ಹೀಗಾಗಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ.
ಒಕ್ಕಲಿಗ ಕೋಟಾದಡಿಯಲ್ಲಿ ಎಂ ಕೃಷ್ಣಪ್ಪ
ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡರ ಪೈಕಿ ಒಬ್ಬರಾದವಿಜಯನಗರ ಕ್ಷೇತ್ರದ ಶಾಸಕ, ಮಾಜಿ ವಸತಿ ಸಚಿವ ಎಂ ಕೃಷ್ಣಪ್ಪ ಅವರನ್ನು ಒಕ್ಕಲಿಗ ಕೋಟಾದಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಪಕ್ಷದಲ್ಲಿ ಇದಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ.
ಯಾರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ?
ಲಿಂಗಾಯತ ವೀರಶೈವರಿಗೆ ಮಣೆ ಹಾಕಿದರೆ ಎಂಬಿ ಪಾಟೀಲ, ಎಸ್ ಆರ್ ಪಾಟೀಲ, ಎಚ್ ಕೆ ಪಾಟೀಲ ಮೂವರಿಗೂ ಅವಕಾಶವಿದೆ. ಒಕ್ಕಲಿಗ ಕೋಟಾದಡಿ ಎಂ ಕೃಷ್ಣಪ್ಪ ಅವರಿದ್ದರೆ, ದಲಿತ ಕೋಟಾದಡಿಯಲ್ಲಿ ಕೆಎಚ್ ಮುನಿಯಪ್ಪ, ಎಚ್ ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಇದ್ದಾರೆ. ಬ್ರಾಹ್ಮಣ ಕೋಟಾದಡಿಯಲ್ಲಿ ದಿನೇಶ್ ಗುಂಡೂರಾವ್ ಇದ್ದಾರೆ. ಒಟ್ಟಾರೆಯಾಗಿ, ಸಮಗ್ರ ಕರ್ನಾಟಕದಲ್ಲಿನ ಜನಪ್ರಿಯತೆ, ಲೋಕಸಭಾ ಚುನಾವಣೆ 2019 ದೃಷ್ಟಿಯಿಂದ ಎಂಬಿ ಪಾಟೀಲ ಅಥವಾ ಸತೀಶ್ ಜಾರಕಿಹೊಳಿ ಅವರಿಗೆ ಈ ಸ್ಥಾನ ಕೊಡುವ ಸಾಧ್ಯತೆ ಹೆಚ್ಚಿದೆ.