ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅಥವಾ ದಿನೇಶ್?
ಬೆಂಗಳೂರು, ಜೂನ್ 15: ದಾಖಲೆಯ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ.ಜಿ.ಪರಮೇಶ್ವರ ಅವರು, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಈಗ ಉಪ ಮುಖ್ಯಮಂತ್ರಿಯಾಗಿದ್ದಾರೆ.ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಂದಿ ಲಾಬಿ ನಡೆಸಿದ್ದಾರೆ.
ಮುಖ್ಯವಾಗಿ ಜಿ ಪರಮೇಶ್ವರ್ ಬಣ, ಸಿದ್ದರಾಮಯ್ಯ ಬಣ, ಮಲ್ಲಿಕಾರ್ಜುನ ಖರ್ಗೆ ಬಣ ಅಲ್ಲದೆ ತಟಸ್ಥವಾಗಿರುವ ಬಣವೊಂದು ಕೂಡಾ ಲಾಬಿಯಲ್ಲಿ ನಿರತವಾಗಿದೆ.
ಈ ಬಾರಿ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ಜಾತಿ ಲೆಕ್ಕಾಚಾರ ಮುಖ್ಯವಾಗಲಿದೆ. ಇದೀಗ ಹೊಸದಾಗಿ ಹಿರಿಯ ಕಾಂಗ್ರೆಸ್ಸಿಗ ಎಂಬಿ ಪಾಟೀಲ್ ಅವರ ಹೆಸರು ಕೇಳಿ ಬಂದಿರುವುದರಿಂದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಹೀಗೆ ವಿವಿಧ ಜಾತಿಯ ಮುಖಂಡರು ರೇಸಿನಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಂಬಿ ಪಾಟೀಲ್, ಸತೀಶ್, ದಿನೇಶ್!
ಆದರೆ, ಸಮನ್ವಯ ಸಮಿತಿ ಸಭೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ, ಜಾತಿ ಲೆಕ್ಕಾಚಾರಕ್ಕಿಂತ ಮುಂಬರುವ ಲೋಕಸಭೆ ಚುನಾವಣೆ 2019ರ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಇಬ್ಬರು ಪ್ರಮುಖ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಒಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಮತ್ತೊಬ್ಬರಿಗೆ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನ ನೀಡಲು ಚಿಂತನೆ ನಡೆದಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಯಾರ ಹೆಸರು?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ. ಎಂ.ಬಿ. ಪಾಟೀಲ್ ಹಾಗೂ ಎಚ್ ಸಿ. ಮಹಾದೇವಪ್ಪ ಹೆಸರುಗಳು ಮತ್ತೊಮ್ಮೆ ಕೇಳಿ ಬಂದಿದೆ. ಸಿಎಂ ಸಿದ್ದರಾಮಯ್ಯ ಆಪ್ತರಾದ ಇವರಲ್ಲದೆ, ಸತೀಶ್ ಜಾರಕಿಹೊಳಿ ಹೆಸರು ಹೊಸದಾಗಿ ಸೇರ್ಪಡೆಗೊಂಡಿದೆ. ಈ ಮೂಲಕ ತಮ್ಮ ಆಪ್ತರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಸಿದ್ದರಾಮಯ್ಯ ಅವರು ಎಲ್ಲವನ್ನು ನಿಯಂತ್ರಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇವರಿಬ್ಬರು ಈಗ ಹಿಂದೇಟು ಹಾಕುತ್ತಿರುವುದು ಹೈಕಮಾಂಡಿಗೆ ತಲೆನೋವಾಗಿದೆ
ಬ್ರಾಹ್ಮಣ ಸಮುದಾಯದ ಯುವ ನಾಯಕ
ಬ್ರಾಹ್ಮಣ ಸಮುದಾಯದ ಯುವ ನಾಯಕ, ಮಾಜಿ ಸಚಿವ, ಎಐಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಪಕ್ಷದ ಸಂಘಟನೆ, ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಹೊಣೆ ನೀಡುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಒಕ್ಕಲಿಗ, ಲಿಂಗಾಯತ ನಡುವಿನ ಪೈಪೋಟಿಯನ್ನು ಹತ್ತಿಕ್ಕುವ ಯತ್ನವೂ ನಡೆದಿದೆ. ಆದರೆ, ಜಾತಿ ಸಮೀಕರಣ ಲೆಕ್ಕಕ್ಕೆ ಬಂದರೆ ದಿನೇಶ್ ಅವರ ಕ್ಲೀನ್ ಇಮೇಜ್ ಗಿಂತ ಮತ ಗಳಿಕೆ ಪ್ರಭಾವ ಮುಖ್ಯವಾಗಲಿದೆ. ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ದನಿಯೆತ್ತಿದ್ದ ದಿನೇಶ್ ಅವರಿಗೆ ಸಿದ್ದರಾಮಯ್ಯ ಕೂಡಾ ಬೆಂಬಲಿಸುವ ಸಾಧ್ಯತೆಯಿದೆ.
ಯಾರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ?
ಲಿಂಗಾಯತ ವೀರಶೈವರಿಗೆ ಮಣೆ ಹಾಕಿದರೆ ಎಂಬಿ ಪಾಟೀಲ, ಎಸ್ ಆರ್ ಪಾಟೀಲ, ಎಚ್ ಕೆ ಪಾಟೀಲ ಮೂವರಿಗೂ ಅವಕಾಶವಿದೆ. ಒಕ್ಕಲಿಗ ಕೋಟಾದಡಿ ಎಂ ಕೃಷ್ಣಪ್ಪ ಅವರಿದ್ದರೆ, ದಲಿತ ಕೋಟಾದಡಿಯಲ್ಲಿ ಕೆಎಚ್ ಮುನಿಯಪ್ಪ, ಎಚ್ ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಇದ್ದಾರೆ. ಬ್ರಾಹ್ಮಣ ಕೋಟಾದಡಿಯಲ್ಲಿ ದಿನೇಶ್ ಗುಂಡೂರಾವ್ ಇದ್ದಾರೆ. ಒಟ್ಟಾರೆಯಾಗಿ, ಸಮಗ್ರ ಕರ್ನಾಟಕದಲ್ಲಿನ ಜನಪ್ರಿಯತೆ, ಲೋಕಸಭಾ ಚುನಾವಣೆ 2019 ದೃಷ್ಟಿಯಿಂದ ಎಂಬಿ ಪಾಟೀಲ ಅಥವಾ ಸತೀಶ್ ಜಾರಕಿಹೊಳಿ ಅವರಿಗೆ ಈ ಸ್ಥಾನ ಕೊಡುವ ಸಾಧ್ಯತೆ ಹೆಚ್ಚಿದೆ.
ರಾಜ್ಯಾಧ್ಯಕ್ಷ ಪಟ್ಟಕ್ಕೆ ಏಕೆ ಪ್ರಾಮುಖ್ಯತೆ
1989ರಲ್ಲಿ ವೀರೇಂದ್ರಪಾಟೀಲ್, 1999ರಲ್ಲಿ ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸಿದಾಗ ಪಕ್ಷಕ್ಕೆ ಬಹುಮತ ದೊರೆತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅದೇ ಕಾರ್ಯತಂತ್ರವನ್ನು ಅನುಸರಿಸಿ ಪ್ರಬಲ ವರ್ಗದ ನಾಯಕರೊಬ್ಬರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂದು ವೀರಶೈವ ವರ್ಗ ಆಗ್ರಹಿಸಿದೆ. ಇದೇ ಅಂಶ ಹಿಡಿದುಕೊಂಡು ಒಕ್ಕಲಿಗರು ಕೂಡಾ ಲಾಬಿ ನಡೆಸಿದ್ದಾರೆ. ಹೀಗಾಗಿ, ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.