ಪಾವಗಡದ ಕಾಂಗ್ರೆಸ್ ಅಭ್ಯರ್ಥಿಗಾಗಿ ಸಿದ್ದರಾಮಯ್ಯಗೆ ಬಂತೊಂದು ಪತ್ರ!
Recommended Video
ಪಾವಗಡ, ಮಾರ್ಚ್ 05: ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯೇ. 2013 ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸೋತಿದ್ದ ಕಾಂಗ್ರೆಸ್ ನ ಎಚ್.ವಿ.ವೆಂಕಟೇಶ್ ಅವರಿಗೆ ಟಿಕೇಟ್ ನೀಡಬಾರದೆಂದು ಕಾಂಗ್ರೆಸ್ ನಲ್ಲಿಯೇ ವಿರೋಧ ವ್ಯಕ್ತವಾಗಿದೆ.
ಅದಕ್ಕೆ ಪುಷ್ಠಿ ನೀಡುವಂತೆ ಪ್ರಸ್ತುತ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಕೆ.ಜಿ.ನಾಗಲಕ್ಷ್ಮಿ ಬಾಯಿ ಅವರಿಗೆ ಈ ಕ್ಷೇತ್ರದ ಟಿಕೇಟ್ ನೀಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಅಮಯ್ಯ ಅವರಿಗೆ ಪತ್ರವೊಂದನ್ನು ಬರೆಯಲಾಗಿದೆ. ಈ ಪತ್ರ ಬರೆದವರು ಪಾವಗಡದ ಮಾಜಿ ಶಾಸಕ ನಾಗಪ್ಪ ಅವರ ಪತ್ನಿ ನಾಗರತ್ನಮ್ಮ.
ಸಿದ್ದರಾಮಯ್ಯ ತಂತ್ರಕ್ಕೆ ಬಿಜೆಪಿ-ಜೆಡಿಎಸ್ ಉಡೀಸ್ ಆಗುತ್ತಾ?
ಅಷ್ಟಕ್ಕೂ ನಾಗರತ್ನಮ್ಮ ಅವರು ಬರೆದ ಪತ್ರದಲ್ಲೇನಿದೆ? ಓದಿ...
ವೆಂಕಟೇಶ್ ಅವರಿಗೆ ಟಿಕೇಟ್ ನೀಡಬೇಡಿ
ಮಾಜಿ ಶಾಸಕರಾದ ವೆಂಕಟರಮಣಪ್ಪ ಅವರ ಸಹೋದರಿಯಾಗಿರುವ ನಾಗರತ್ನಮ್ಮ ಅವರು, ತಮ್ಮ ಸಹೋದರ ಮತ್ತು ಅವರ ಕುಟುಂಬಸ್ಥರು ಪಾವಗಡ ತಾಲೂಕನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿನ ಅಮಾಯಕ ಜನರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಕಳೆದ ಚುನಾಣೆಯಲ್ಲಿ ಕಾಂಗ್ರೆಸ್ ನಿಂದ ಚುನಾವಣೆಗೆ ನಿಂತು ಸೋತ ವೆಂಕಟೇಶ್, ವೆಂಕಟರಮಣಪ್ಪ ಅವರ ಪುತ್ರ. ಇವರ ಇನ್ನೊಬ್ಬ ಪುತ್ರ ಜೆಡಿಎಸ್ ನಲ್ಲಿದ್ದಾರೆ. ಇವರು ಅತ್ಯಾಚಾರಿಗಳಾಗಿದ್ದು, ಜನರಿಗೆ ಜೀವ ಬೆದರಿಕೆ ಒಡ್ಡುತ್ತ ಶಾಂತಿ ಕಡಡಿದ್ದಾರೆ. ಇಂಥವರಿಗೆ ಟಿಕೇಟ್ ನೀಡಿದರೆ ಕ್ಷೇತ್ರ ಸರ್ವ ನಾಶವಾಗುತ್ತದೆ ಎಂದು ಪತ್ರದಲ್ಲಿ ದೂರಲಾಗಿದೆ.
ಟಿಕೇಟ್ ಮೇಲೆ ಮತ್ಯಾರಿಗೆ ಕಣ್ಣು?
ಬಲರಾಂ ಎಂಬ ಎಗ್ಸಿಕ್ಯೂಟಿವ್ ಇಂಜಿನಿಯರ್ ಸಹ ಕಾಂಗ್ರೆಸ್ ಟಿಕೇಟ್ ಗೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆಂದೇ ಅವರು ಪಾವಗಡದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅತೀ ದೊಡ್ಡ ಸೋಲಾರ್ ಪಾರ್ಕ್ ಯೋಜನೆಗೆ ಇವರನ್ನೇ ಎಂ ಡಿಯನ್ನಾಗಿ ಮಾಡಲಾಗಿದೆ. ಅವರು ರೈತರ ಭೂಮಿಗಳನ್ನು ಕಡಿಮೆ ದರಕ್ಕೆ ಕಬಳಿಸಿಕೊಂಡಿದ್ದು ಅವರನ್ನು ಜನಪ್ರತಿನಿಧಿಯನ್ನಾಗಿ ಆರಿಸಿಬೇಡಿ ಎಂದು ಬರೆದಿದ್ದಾರೆ.
ನಾಗಲಕ್ಷ್ಮಿ ಬಾಯಿಯವರಿಗೆ ಟಿಕೇಟ್ ನೀಡಿ
ಪಾವಗಡ ಕ್ಷೇತ್ರದ ಮಹಿಳೆಯರ ಗೋಳನ್ನು ಆಲಿಸುತ್ತಿರುವ, ಈ ಕ್ಷೇತ್ರದಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಿರುವ ನಾಗಲಕ್ಷ್ಮಿ ಬಾಯಿ ಯವರಿಗೆ ಈ ಕ್ಷೇತ್ರದ ಟಿಕೇಟ್ ನೀಡಬೇಕೆಂದು ಪತ್ರದಲ್ಲಿ ಬರೆದಿದ್ದಾರೆ.
ಯಾರು ನಾಗಲಕ್ಷ್ಮಿ ಬಾಯಿ?
ಕೆ.ಜಿ.ನಾಗಲಕ್ಷ್ಮಿ ಬಾಯಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಈಗಿನ ಅಧ್ಯಕ್ಷರು. ಪಾವಗಡ ತಾಲೂಕಿನಲ್ಲಿ ಈಗಾಗಲೇ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಮಾಡಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇವರಿಗೆ ಟಿಕೇಟ್ ನೀಡಿದಲ್ಲಿ ಅವರನ್ನು ಖಂಡಿತ ಗೆಲ್ಲಿಸುವುದಾಗಿ ನಾಗರತ್ನಮ್ಮ ಪತ್ರದಲ್ಲಿ ಅಭಯ ನೀಡಿದ್ದಾರೆ.