ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ವಿಧಿವಶ : ಕಂಬನಿ ಮಿಡಿದ ಗಣ್ಯರು
Recommended Video
ಬೆಂಗಳೂರು, ಮೇ 02 : ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಗಣ್ಯರು ಕಂಬನಿ ಮಿಡಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಣ್ಣಯ್ಯ ಅವರು ಗುರುವಾರ ಬೆಳಗ್ಗೆ ವಿಧಿವಶರಾದರು.
ಬೆಂಗಳೂರಿನ ಬಿ.ಜಿ.ಎಸ್.ಆಸ್ಪತ್ರೆಯಲ್ಲಿ ಹಿರಣ್ಣಯ್ಯ (85) ಅವರು ಗುರುವಾರ ಬೆಳಗ್ಗೆ ವಿಧಿವಶರಾದರು. ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಹಲವು ಗಣ್ಯರು, ರಾಜಕೀಯ ನಾಯಕರು ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಿರಣ್ಣಯ್ಯ ಮಿತ್ರ ಮಂಡಳಿ ಸ್ಥಾಪನೆ ಮಾಡಿದ್ದ ಮಾಸ್ಟರ್ ಹಿರಣ್ಣಯ್ಯ ಅವರ 'ಲಂಚಾವತಾರ' ನಾಟಕ ಬಹಳ ಪ್ರಸಿದ್ಧ ಪಡೆದಿದೆ. 'ನಟ ರತ್ನಾಕರ' ಎಂಬ ಬಿರುದನ್ನು ಅವರು ಪಡೆದಿದ್ದರು. ರಂಗಭೂಮಿ ಹೊರತುಪಡಿಸಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದರು.
ನೇರ ನುಡಿಯ ಮಾಸ್ಟರ್ ಹಿರಣ್ಣಯ್ಯ ಅವರು ವಿಡಂಬನಾತ್ಮಕ ನಾಟಕಗಳಿಗೆ ಹೆಸರುವಾಸಿಯಾಗಿದ್ದರು. ರಂಗಭೂಮಿ, ಕಾರ್ಯಕ್ರಮದ ವೇದಿಕೆಗಳ ಮೇಲೆ ರಾಜಕಾರಣಿಗಳಿಗೆ ಸರಿಯಾಗಿ ಚಾಟಿ ಬೀಸುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಹಿರಣ್ಣಯ್ಯ ಅವರು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ನಾಟಕಗಳ ಮೂಲಕ ಅವರನ್ನು ನೆನಪು ಮಾಡಿಕೊಳ್ಳಬೇಕು. ಮಕ್ಮಲ್ ಟೋಪಿ, ಕಪಿಮುಷ್ಠಿ, ದೇವದಾಸಿ, ನಡುಬೀದಿ ನಾರಾಯಣ, ಪಶ್ಚಾತಾಪ, ಭ್ರಷ್ಟಾಚಾರ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ ಮುಂತಾದವುಗಳು ಅವರ ಜನಪ್ರಿಯ ನಾಟಕಗಳು.
|
ರಂಗಭೂಮಿ ಒಂದು ಅಪೂರ್ವ ರತ್ನ ಕಳೆದುಕೊಂಡಿದೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಸ್ಟರ್ ಹಿರಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಅವರ ನಿಧನದಿಂದ ರಂಗಭೂಮಿ ಒಂದು ಅಪೂರ್ವ ರತ್ನವನ್ನು ಕಳೆದುಕೊಂಡಂತಾಗಿದೆ. ನಾಟಕಗಳ ಮೂಲಕ ಸಮಾಜದ ಪಿಡುಗುಗಳಿಗೆ ವಿಡಂಬನೆಯ ಚುಚ್ಚುಮದ್ದು ನೀಡುವುದು ಅವರ ವೈಶಿಷ್ಟ್ಯವಾಗಿತ್ತು. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
|
ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
|
ನಿಜವಾದ ಸರಸ್ವತಿ ಪುತ್ರರು
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಹಿರಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು ನಿಜವಾದ ಸರಸ್ವತಿ ಪುತ್ರರು. ಇವರ ನಿಧನದ ಶೋಕವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ತೀವ್ರ ಬೇಸರವಾಗಿದೆ
ಸಣ್ಣ ಕೈಗಾರಿಕಾ ಖಾತೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ಚೇತನ ಮಾಸ್ಟರ್ ಹಿರಣ್ಣಯ್ಯನವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
|
ಕನ್ನಡಕ್ಕೆ ಕೊಡುಗೆ ಆಪಾರ
ಮಾಸ್ಟರ್ ಹಿರಣ್ಣಯ್ಯ ಅವರು ವಿಧವಶರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
ಆರ್.ವಿ.ದೇಶಪಾಂಡೆ ಸಂತಾಪ
ಸಚಿವ ಆರ್.ವಿ.ದೇಶಪಾಂಡೆ ಅವರು ಮಾಸ್ಟರ್ ಹಿರಣ್ಣಯ್ಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ನಾಟಕ ರಂಗ, ಕಿರುತೆರೆ, ಸಿನಿಮಾ ಸೇರಿದಂತೆ ರಂಗಭೂಮಿಯ ಅಭಿನಯ ಚತುರರಾಗಿದ್ದ ಅಸಾಧಾರಣ ಪ್ರತಿಭೆಯ ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನೇರ ಹಾಗೂ ದಿಟ್ಟ ಮಾತಿಗೆ ಸದಾ ಹೆಸರಾಗಿದ್ದಲ್ಲದೆ ಸಮಾಜದ ಅಂಕು-ಡೊಂಕು, ಡೋಂಗಿತನ, ಭ್ರಷ್ಟತೆ ಇತ್ಯಾದಿ ಸಾಮಾಜಿಕ ಪಿಡುಗುಗಳನ್ನು ತಮ್ಮ ಮೊನಚು ಹಾಗೂ ವಿಡಂಭನಾತ್ಮಕ ಮಾತುಗಳಿಂದಲೇ ಖಂಡಿಸುವ, ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಅವರನ್ನು ಚಿಂತನೆಗೆ ಹಚ್ಚುವ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಕಾಯಕಯೋಗಿಯಂತೆ ನಿತ್ಯನಿರಂತರ ಮಾಡುತ್ತಲೇ ಬಂದಿದ್ದರು ಎಂದು ಸಚಿವರು ಹೇಳಿದ್ದಾರೆ.
|
ಕನ್ನಡಿಗರಿಗೆ ದೊಡ್ಡ ನಷ್ಟ
ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಅವರು ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಟ ರತ್ನಾಕರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮಾಸ್ಟರ್ ಹಿರಣ್ಣಯ್ಯ ಅಸ್ತಂಗತರಾಗಿದ್ದಾರೆ. ಕನ್ನಡ ಸಂಸ್ಕೃತಿ ಮತ್ತು ಕಲೆಗೆ ಹಿರಣ್ಣಯ್ಯನವರ ಸೇವೆ ಅಪಾರ. ಅವರ ಸಾವು ಕನ್ನಡಿಗರಿಗೆ ದೊಡ್ಡ ನಷ್ಟ ಎಂದು ಅವರು ಟ್ವೀಟ್ ಮಾಡಿದ್ದಾರೆ.
|
ನೇರ ದಿಟ್ಟ ನುಡಿಗೆ ಹೆಸರುವಾಸಿಯಾಗಿದ್ದರು
ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಖ್ಯಾತ ಹಾಸ್ಯ ನಾಟಕಕಾರ, ಚತುರ ರಂಗಭೂಮಿ ಕಲಾವಿದ,ಸ್ಪಷ್ಟವಾದಿ ಮಾಸ್ಟರ್ ಹಿರಣ್ಣಯ್ಯ ಇಂದು ವಿಧಿವಶರಾಗಿದ್ದಾರೆ. ನೇರ ದಿಟ್ಟ ನುಡಿಗೆ ಹೆಸರುವಾಸಿಯಾಗಿದ್ದ ಅವರ ಅಗಲುವಿಕೆ ಕನ್ನಡನಾಡಿಗೆ ತುಂಬಲಾರದ ನಷ್ಟ. ಶ್ರೀ ಅನಂತ ಕುಮಾರ್ ರ ಜೊತೆಗೆ ಆತ್ಮೀಯ ಒಡನಾಟ ಇತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.
|
ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ
ಮಾಜಿ ಸಚಿವ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರು ಹಿರಣ್ಣಯ್ಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 'ಲಂಚಾವತಾರ' ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದ ರಂಗಕರ್ಮಿ, ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನೂ ಅಗಲಿದ್ದು ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.