ಪರಮೇಶ್ವರ್ ಅವರನ್ನು ಸಿಎಂ ಆಗದಂತೆ ತಡೆದವರು ಯಾರು? ಯಾವಾಗ?
ಬೆಂಗಳೂರು, ಫೆಬ್ರವರಿ 25: ನಾನು ಸಿಎಂ ಆಗುವುದನ್ನು ಮೂರು ಬಾರಿ ತಪ್ಪಿಸಲಾಗಿದೆ, ಕೊನೆಗೆ ಅನಿವಾರ್ಯವಾಗಿ ಉಪಮುಖ್ಯಮಂತ್ರಿ ಆಗಿದ್ದೇನೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ಆದರೆ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ನೋಡಿಕೊಂಡು ಬಂದವರಿಗೆ ಪರಮೇಶ್ವರ್ ಅವರು ಹೇಳಿರುವುದು ಸುಳ್ಳು ಅಥವಾ ಉತ್ಪ್ರೇಕ್ಷೆ ಅಲ್ಲ ಎಂಬುದು ಗೊತ್ತಿದೆ.
ದಲಿತನಾಗಿರುವುದಕ್ಕೆ 3 ಬಾರಿ ಸಿಎಂ ಪಟ್ಟ ಕೈತಪ್ಪಿತು: ಪರಮೇಶ್ವರ್
ಪರಮೇಶ್ವರ್ ಅವರು ಕರ್ನಾಟಕ ಕಾಂಗ್ರೆಸ್ನ ಕಟ್ಟಾಳು ವಿದ್ಯಾರ್ಥಿ ದೆಸೆಯಿಂದಲೇ ದಲಿತ ಹೋರಾಟಗಳ ಮೂಲಕ ಗುರುತಿಸಿಕೊಂಡು ರಾಜಕೀಯಕ್ಕೆ ಪ್ರವೇಶಿಸಿದವರು, ಅರಸು ಅವರ ಪ್ರಭಾವದಲ್ಲಿದ್ದವರು. ರಾಜ್ಯದಲ್ಲಿ ಕಾಂಗ್ರೆಸ್ ಕಟ್ಟಿದವರಲ್ಲಿ ಒಬ್ಬರು.
ಸಾವಧಾನ ಗುಣದ, ಶೈಕ್ಷಣಿಕವಾಗಿಯೂ ಉತ್ತಮ ಹಿನ್ನೆಲೆ ಇರುವ, ದಲಿತ ಹೋರಾಟದ ಅನುಭವ ಬೆನ್ನಿಗೆ ಕಟ್ಟಿಕೊಂಡಿರುವ ಪರಮೇಶ್ವರ್ ಅವರನ್ನು ಸಿಎಂ ಆಗದಂತೆ ಯಾರು ತಡೆದರು? ಯಾವಾಗ ತಡೆದರು ಎಂಬುದು ಕುತೂಹಲ.
ಧರಂಸಿಂಗ್ ಅಲ್ಲ ಪರಮೇಶ್ವರ್ ಆಗಬೇಕಿತ್ತು ಸಿಎಂ
2004 ರ ವಿಧಾನಸಭೆ ಅತಂತ್ರವಾದಾಗ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚಿಸಲು ಮುಂದಾಯಿತು. ಆಗ ಸಿಎಂ ಯಾರಾಗಬೇಕು ಎಂಬ ಪ್ರಶ್ನೆ ಎದುರಾದಾಗ ದೇವೇಗೌಡರು ಪರಮೇಶ್ವರ್ ಅವರ ಹೆಸರನ್ನೇ ಮುಂದೆ ಇಟ್ಟಿದ್ದರು. ಆದರೆ ಮುಂದೊಮ್ಮೆ ಸರ್ಕಾರ ಉರುಳಿಸುವ ಸಮಯ ಬಂದಾಗ 'ದಲಿತ ನಾಯಕರೊಬ್ಬರ ಸರ್ಕಾರವನ್ನು ಉರುಳಿಸಿದರು ದೇವೇಗೌಡ' ಎಂಬ ಅಪಕೀರ್ತಿ ಬರುತ್ತದೆ ಎಂದು ಅವರ ಆಪ್ತವಲಯ ಸಲಹೆ ನೀಡಿದ್ದರಿಂದ, ಸಮುದಾಯದ ಬೆಂಬಲ ಇಲ್ಲದಿದ್ದ ಧರಂಸಿಂಗ್ ಅವರನ್ನು ಸಿಎಂ ಸ್ಥಾನಕ್ಕೆ ದೇವೇಗೌಡ ಅವರು ಸೂಚಿಸಿದರು. ಜೆಡಿಎಸ್ನ ಎಂ.ಪಿ.ಪ್ರಕಾಶ್ ಡಿಸಿಎಂ ಆದರು.
ದೇವೇಗೌಡರ 'ವಿಷ'ದ ಮಾತು: ಪರಮೇಶ್ವರ್ ವಿಡಿಯೋ ನೆನಪಿಸಿ ಕೆಣಕಿದ ಬಿಜೆಪಿ
2013ರಲ್ಲಿ ಕೈತಪ್ಪಿತು ಸುವರ್ಣಾವಕಾಶ
2013ರಲ್ಲಿ ಪರಮೇಶ್ವರ್ ಅವರು ಸಿಎಂ ಅಭ್ಯರ್ಥಿ ಆಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿತು. ಆದರೆ ಅವರೇ ಚುನಾವಣೆಯಲ್ಲಿ ಸೋತುಬಿಟ್ಟರು. ಅವರ ಸೋಲಿಗೆ ಸಿದ್ದರಾಮಯ್ಯ ಅವರ ಕಡೆ ಬೊಟ್ಟು ಮಾಡಲಾಯಿತು. ಪರಮೇಶ್ವರ್ ಸೋತರೆ ಕುರುಬ ಸಮುದಾಯದ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯ ಎಂದು ಹಲವರು ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಅವರ ವಿರುದ್ಧ ಪ್ರಚಾರ ಮಾಡಿದರು. ಕರಪತ್ರಗಳನ್ನು ಹಂಚಲಾಗಿತ್ತು. ಆ ಕಾರಣದಿಂದ ಪರಮೇಶ್ವರ್ ಸೋತರು, ಕೆಪಿಸಿಸಿ ಅಧ್ಯಕ್ಷರಾಗಿ ಉಳಿದುಹೋದರು.
ದಲಿತನಾಗಿರುವುದಕ್ಕೆ ಸಿಎಂ ಆಗಲಿಲ್ಲ, ಪರಂ ಹೇಳಿಕೆಗೆ ಸಿದ್ದು ಏನಂದ್ರು?
ಈ ಬಾರಿಯೂ ಅಲ್ಪ ಅವಕಾಶ ಇತ್ತು
2018ರ ಚುನಾವಣೆಯ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಾಡಿಕೊಂಡಾಗ ಕಾಂಗ್ರೆಸ್ ಅವರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ ಪರಮೇಶ್ವರ್ ಅವರೇ ಸಿಎಂ ಆಗುತ್ತಿದ್ದರು. ಸಿದ್ದರಾಮಯ್ಯ ಅವರು ಸ್ವಂತ ಕ್ಷೇತ್ರದಲ್ಲಿಯೇ ಸೋತಿದ್ದರು. ಹಾಗಾಗಿ ಪರಮೇಶ್ವರ್ಗೆ ಅವಕಾಶ ಇತ್ತು. ಆದರೆ ಕಾಂಗ್ರೆಸ್ ಪಕ್ಷವು ಸಿಎಂ ಸ್ಥಾನವನ್ನು ಚಿನ್ನದ ತಟ್ಟೆಯಲ್ಲಿಟ್ಟು ಜೆಡಿಎಸ್ಗೆ ಕೊಟ್ಟಿತು ಹಾಗಾಗಿ ಪರಮೇಶ್ವರ್ ಅವರು ಅನಿವಾರ್ಯವಾಗಿ ಡಿಸಿಎಂ ಆಗಬೇಕಾಯಿತು.
ಮಲ್ಲಿಕಾರ್ಜುನ ಖರ್ಗೆಗೂ ತಪ್ಪಿದ ಅವಕಾಶ
ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹ ಸಿಎಂ ಆಗುವ ಅವಕಾಶಗಳು ಸಾಕಷ್ಟು ಬಾರಿ ಎದುರಾಗಿತ್ತು. ಆದರೆ ಅವರಿಗೂ ಅವಕಾಶ ಕೈತಪ್ಪಿತು. ಎಸ್.ಎಂ.ಕೃಷ್ಣ ಅವರು ಸಿಎಂ ಆದಾಗಲೇ ಖರ್ಗೆ ಹೆಸರು ಬಂದಿತ್ತು. ಆದರೆ ಪಕ್ಷದಲ್ಲಿನ ಕೆಲವರು ಒಪ್ಪದ ಕಾರಣ ಅವರು ಸಚಿವರಷ್ಟೆ ಆದರು, ನಂತರ ಸಿದ್ದರಾಮಯ್ಯ ಸಿಎಂ ಆದಾಗಲೂ ಸಹ ಅದೇ ಪುನರಾವರ್ತನೆ ಆಯಿತು.