ರಾಜ್ಯದ ಮುಂದಿನ ಸಿಎಂ ಯಾರು? ನಂಬರ್ 1,2,3 ಮಾತ್ರ ಇದನ್ನು ಬಲ್ಲರು!
ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆಯೇ, ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯ ಘೋಷಣೆಯಾಗಲಿದೆಯೇ ಎನ್ನುವ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ.
ಮುಖ್ಯಮಂತ್ರಿ ರೇಸಿನಲ್ಲಿ ಅವರಿದ್ದಾರೆ, ಇವರಿದ್ದಾರೆ ಎನ್ನುವ ಅನಧಿಕೃತ ಸುದ್ದಿಗಳು ಹರಿದಾಡುತ್ತಿರುವ ಈ ಸಮಯದಲ್ಲಿ ಸಿಎಂ ಮತ್ತು ಬಿಜೆಪಿ ವರಿಷ್ಠರು ಯಾವುದೇ ಹೇಳಿಕೆ ನೀಡದೇ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಸಿಎಂ ಬಿಎಸ್ವೈ ಬದಲಾವಣೆಯ ಜೊತೆಗೆ ಮೇಜರ್ ಸಂಪುಟ ಸರ್ಜರಿ?
ಇನ್ನು, ವಿವಿಧ ಮಠಾಧಿಪತಿಗಳ ಯಡಿಯೂರಪ್ಪನವರ ಪರ ಬ್ಯಾಟಿಂಗ್ ಮುಂದುವರಿದಿದೆ. ಲಿಂಗಾಯತ/ವೀರಶೈವ ಸಮುದಾಯದ ಹಿರಿಯ ನಾಯಕರು, ಯಡಿಯೂರಪ್ಪನವರನ್ನು ರಾಜೀನಾಮೆ ನೀಡುವಂತೆ ಸೂಚಿಸಬಾರದು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸ್ಪಷ್ಟ ಭರವಸೆ
ಇವೆಲ್ಲದರ ನಡುವೆ, ರಾಜ್ಯದಲ್ಲಿನ ಪ್ರವಾಹದ ಪರಿಸ್ಥಿತಿಯಿಂದಾಗಿ, ಮುಖ್ಯಮಂತ್ರಿ ಬದಲಾವಣೆ ಇದೆಯೋ, ಇಲ್ಲವೋ ಎನ್ನುವ ಗೊಂದಲಕ್ಕೆ ಹೈಕಮಾಂಡ್ ತುರ್ತಾಗಿ ಸ್ಪಂದಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಇದು ಜನಾಕ್ರೋಶಕ್ಕೆ ಕಾರಣವಾಗಬಹುದು.
ಅತಿವೃಷ್ಟಿಯ ಈ ಸಮಯದಲ್ಲಿ ಬಿಜೆಪಿಯವರಿಗೆ ರಾಜಕೀಯವೇ ಮೇಲಾಯಿತು
ರಾಜ್ಯದಲ್ಲಿ ಅತಿವೃಷ್ಟಿಯ ಈ ಸಮಯದಲ್ಲಿ ಬಿಜೆಪಿಯವರಿಗೆ ರಾಜಕೀಯವೇ ಮೇಲಾಯಿತು ಎನ್ನುವ ಆರೋಪವನ್ನು ಈಗಾಗಲೇ ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಹಾಗಾಗಿ, ವರಿಷ್ಠರು ತಡ ಮಾಡದೇ ಸೂಕ್ತ ನಿರ್ಧಾರಕ್ಕೆ ಬರಬೇಕಾಗಿದೆ.
ಮುಂದಿನ ವರ್ಷದ ಉತ್ತರ ಪ್ರದೇಶದ ಚುನಾವಣೆ
ಮುಂದಿನ ವರ್ಷದ ಉತ್ತರ ಪ್ರದೇಶದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಮುಖ್ಯಮಂತ್ರಿ ಬದಲಾವಣೆಯ ನಿಟ್ಟಿನಲ್ಲಿ ವರಿಷ್ಠರು ಅಳೆದು ತೂಗಿ ನಿರ್ಧರಿಸಬೇಕಿದೆ. ಹಾಗಾಗಿ, ಖುದ್ದು ಮೋದಿ, ಅಮಿತ್ ಶಾ ಮತ್ತು ನಡ್ಡಾ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಿದ್ದಾರೆ.
ಹಲವು ಅಚ್ಚರಿಯನ್ನು ನೀಡಿದ್ದರಿಂದ ಇಲ್ಲೂ ಹೀಗಾಗುವ ಸಾಧ್ಯತೆ
ಈಗ, ಹರಿದಾಡುತ್ತಿರುವ ಹೆಸರುಗಳನ್ನು ಬಿಟ್ಟು ಬೇರೆಯವರ ಹೆಸರೂ ಇರಬಹುದು ಎನ್ನುವ ಮಾತು ಬಿಜೆಪಿ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ, ರಾಜ್ಯದ ನಾಯಕರುಗಳಿಗೆ ಹಲವು ಅಚ್ಚರಿಯನ್ನು ನೀಡಿದ್ದರಿಂದ ಇಲ್ಲೂ ಹೀಗಾಗುವ ಸಾಧ್ಯತೆಯಿಲ್ಲದಿಲ್ಲ.
Recommended Video
ರಾಜ್ಯದ ಮುಂದಿನ ಸಿಎಂ ಯಾರು: ನಂಬರ್ 1,2,3 ಮಾತ್ರ ಬಲ್ಲರು
ಸುಮಾರು ನಾಲ್ಕು ಜನರ ಹೆಸರು ಮುಖ್ಯಮಂತ್ರಿ ಗಾದಿಗೆ ಕೇಳಿಬರುತ್ತಿದೆ. ಆದರೆ, ವರಿಷ್ಠರ ಒಲವು ಯಾರ ಕಡೆ ಎನ್ನುವುದು ರಾಜ್ಯದ ನಾಯಕರಿಗೆ ಕಿಂಚಿತ್ತು ಸುಳಿವೂ ಇಲ್ಲ. ಹಾಗಾಗಿ, ರಾಜ್ಯದ ಮುಂದಿನ ಸಿಎಂ ಯಾರು ಎನ್ನುವುದು ನಂಬರ್ 1 (ಮೋದಿ), 2 (ಅಮಿತ್ ಶಾ) ಮತ್ತು ನಂಬರ್ 3 (ನಡ್ಡಾ) ಮಾತ್ರ ಬಲ್ಲರು.